ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಪರಸ್ಪರ ದೂಷಣೆಗೆ ಬಳಸುತ್ತಿರುವ ಭಾಷೆ ಸಭ್ಯತೆಯ ಎಲ್ಲೆ ಮೀರಿದೆ. ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಪರ ಇದ್ದೇವೆಂದು ಬಿಂಬಿಸಿಕೊಳ್ಳುತ್ತಾ ಈ ರಾಜಕೀಯ ಪಕ್ಷಗಳ ಮುಖಂಡರು ಬಳಸುತ್ತಿರುವ ಭಾಷೆ ನಿಜಕ್ಕೂ ಹೆಣ್ಣುಮಕ್ಕಳ ವಿರೋಧಿಯಾಗಿದೆ ಎಂಬುದು ವಿಪರ್ಯಾಸ. ಈ ರಾಜಕೀಯ ನೇತಾರರು ಸುರಿಸುತ್ತಿರುವುದು ಮೊಸಳೆ ಕಣ್ಣೀರು ಎಂಬುದು ಅವರ ಹೇಳಿಕೆಗಳಿಂದಲೇ ಸುವ್ಯಕ್ತ. ಬಿಜೆಪಿಯ ಈಶ್ವರಪ್ಪ, ಕಾಂಗ್ರೆಸ್ನ ವಿ. ಎಸ್. ಉಗ್ರಪ್ಪ ಹಾಗೂ ಐವನ್ ಡಿಸೋಜಾ ಅವರ ಅಭಿರುಚಿಹೀನ ಮಾತುಗಳು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ತಕ್ಕದ್ದಲ್ಲ.
ಅವರ ಮಾತುಗಳಲ್ಲಿ ವ್ಯಕ್ತವಾಗಿರುವುದು ಕೀಳು ಅಭಿರುಚಿ. ರಾಜಕೀಯ ಪಕ್ಷಗಳ ಬೌದ್ಧಿಕ ಹಾಗೂ ನೈತಿಕ ದಿವಾಳಿತನಕ್ಕೆ ಈ ಮಾತುಗಳು ಸಾಕ್ಷಿಯಾಗಿದ್ದು ತೀವ್ರವಾಗಿ ಖಂಡನಾರ್ಹ. ಪತ್ನಿ ಹಾಗೂ ಮಗಳ ಮೇಲೆ ಅತ್ಯಾಚಾರ ಮಾಡಿದರೆ ಹೇಗಿರುತ್ತದೆ ಎಂಬಂಥ ಸವಾಲುಗಳನ್ನು ಹಾಕುತ್ತಾ ಅಥವಾ ಮಹಿಳೆಯ ವೈವಾಹಿಕ ಸ್ಥಾನಮಾನ ಕುರಿತು ಸಾರ್ವಜನಿಕವಾಗಿ ಪ್ರಶ್ನಿಸುತ್ತಾ ಈ ನೇತಾರರು ಆಡಿರುವ ನುಡಿಗಳು ಅವರ ಅಂತರಂಗದ ಕೊಳಕುತನಗಳನ್ನು ಬಹಿರಂಗವಾಗಿ ಪ್ರದರ್ಶಿಸಿವೆ. ಇಂತಹ ಮನದಾಳದ ಕೊಳಕುತನಗಳು ಹಾಗೂ ಧೋರಣೆಗಳೇ ಹೆಣ್ಣುಮಕ್ಕಳ ಮೇಲೆ ಹಿಂಸಾಚಾರ ಹೆಚ್ಚಳಕ್ಕೆ ಮೂಲ ಕಾರಣವಾಗಿವೆ ಎಂಬುದನ್ನು ಈ ನೇತಾರರಿಗೆ ತಿಳಿಹೇಳುವವರು ಯಾರು?
ಹೆಣ್ಣಿನ ಮೇಲೆ ಒಡೆತನ ಸಾಧಿಸುವ ಅಥವಾ ಹೆಣ್ಣನ್ನು ಭೋಗವಸ್ತುವಾಗಿ ಕಾಣುವಂತಹ ದೃಷ್ಟಿಯ ಮಾತು ಗಳಿವು. ಪಿತೃಪ್ರಧಾನ ಸಂಸ್ಕೃತಿಯಲ್ಲಿ ಬೇರೂರಿರುವ ಈ ಬಗೆಯ ಮೌಲ್ಯಗಳು ಹೆಣ್ಣಿಗೆ ನಿರ್ಬಂಧಗಳನ್ನು ಹೇರುವಂತಹವಾಗಿವೆ. ಗಂಡು, ಹೆಣ್ಣಿಗೆ ಸಮಾನತೆಯ ಹಕ್ಕು ಹಾಗೂ ಅವಕಾಶಗಳನ್ನು ನೀಡಿರುವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಇಂತಹ ಸಂಸ್ಕೃತಿ, ಮೌಲ್ಯಗಳ ವಿರುದ್ಧ ಸೆಣಸಬೇಕಾದುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಆದರೆ ಇಂತಹ ದೊಂದು ಸೂಕ್ಷ್ಮತೆ ಪ್ರದರ್ಶಿಸದ ನೇತಾರರು ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಹಿತವನ್ನು ಹೇಗೆ ತಾನೆ ಕಾಯಬಲ್ಲರು? ಮೊದಲು ಈ ಸಂಕುಚಿತ ಮನಸ್ಸು ಹಾಗೂ ಕೀಳು ಅಭಿರುಚಿಯ ನಾಲಿಗೆಗಳನ್ನು ಹೊಂದಿದ ರಾಜಕಾರಣಿಗಳಿಗೆ ಲಿಂಗ ಸಂವೇದನಾಶೀಲತೆಯ ತರಬೇತಿ ಅತ್ಯಗತ್ಯ.
ಪ್ರಚಾರ ಗಿಟ್ಟಿಸಲು ಅಥವಾ ರಾಜಕೀಯ ಲಾಭ ಪಡೆಯಲು ಕೀಳು ಮಟ್ಟದ ಮಾತುಗಳು ನೆರವಾಗುವುದಿಲ್ಲ ಎಂಬುದನ್ನು ಈ ರಾಜಕಾರಣಿಗಳಿಗೆ ಮನದಟ್ಟು ಮಾಡಿಸುವುದು ಜನರ ಕರ್ತವ್ಯ. ಜನಪರವಾದ ಆಡಳಿತವನ್ನು ಸಾಧ್ಯವಾಗಿಸಲು ರಚನಾತ್ಮಕವಾದ ಟೀಕೆ, ವಿಮರ್ಶೆಗಳು ಬೇಕು. ಟೀಕೆಗಳಿಗೆ ಪ್ರತಿ ಟೀಕೆಗಳನ್ನು ಮಾಡುವ ಭರದಲ್ಲಿ ನಿಯಂತ್ರಣ ಮೀರಿದ ಅಭಿರುಚಿಹೀನ ಭಾಷಾ ಬಳಕೆ ಎಂದಿಗೂ ಸಲ್ಲದು. ನಂತರ ಸಮಜಾಯಿಷಿ ನೀಡುವ ಅಥವಾ ಕ್ಷಮಾಪಣೆ ಯಾಚಿಸುವ ಮೂಲಕ ಇಂತಹ ಮಾತುಗಳು ಬೀರಬಹುದಾದ ಸಾರ್ವಜನಿಕ ಪರಿಣಾಮವನ್ನು ಅಳಿಸಿಹಾಕಲಾಗದು.
ಇವು ಹೆಣ್ಣು ಮಕ್ಕಳ ಮೇಲಿನ ಹಿಂಸಾಚಾರಗಳ ವಿಷಯವನ್ನು ನಿರ್ವಹಿಸಲು ಅಗತ್ಯವಾದ ಗಂಭೀರತೆಯನ್ನು ಕುಗ್ಗಿಸುತ್ತದೆ ಎಂಬುದನ್ನು ಈ ಜನಪ್ರತಿನಿಧಿಗಳು ಮೊದಲು ಅರಿತುಕೊಳ್ಳಲಿ. ಎಲುಬಿಲ್ಲದ ನಾಲಿಗೆ ಹರಿಯಬಿಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗೆಗೂ ಪರಿಶೀಲನೆಯಾಗಬೇಕು. ಕೆರಳಿಸುವಂತಹ ಅಥವಾ ವೈಯಕ್ತಿಕ ಅವಹೇಳನ ಮಾಡುವ ಮಾತುಗಳಿಗೆ ಅವಕಾಶ ಇರಕೂಡದು ಎಂಬಂಥ ನೀತಿಸಂಹಿತೆ ಪಾಲಿಸುವುದನ್ನು ತಮ್ಮ ಪಕ್ಷಗಳ ನೇತಾರರಿಗೆ ರಾಜಕೀಯ ಪಕ್ಷಗಳು ಕಡ್ಡಾಯ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.