ಬೆಂಗಳೂರು: ‘ಯಾರೇ ಬಯಸಿ ಬಂದರೂ ವೈಷ್ಣವ ದೀಕ್ಷೆ ನೀಡಲು ಸಿದ್ಧ ಎಂಬ ನನ್ನ ಹೇಳಿಕೆ ವಿಷಯವಾಗಿ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗಿದೆ’ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಬಾಗಲಕೋಟೆ ಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಯಾರಿಗೆ ಬೇಕಾದರೂ ವೈಷ್ಣವ ದೀಕ್ಷೆ ನೀಡಲು ಸಿದ್ಧ’ ಎಂಬ ಹೇಳಿಕೆ ನೀಡಿದ್ದೆ. ಅದು ನಾನಾಗಿ ಮಾಡಿದ ಪ್ರಸ್ತಾವ ಏನಲ್ಲ. ಅದಕ್ಕೆ ದಿನಕ್ಕೊಂದು ಬಣ್ಣ ನೀಡಿ, ವಿವಾದ ಸೃಷ್ಟಿ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ದಲಿತರೂ ಸೇರಿದಂತೆ ಯಾರೇ ಅಪೇಕ್ಷಿಸಿದರೂ ವಿಷ್ಣುಮಂತ್ರದ ಜತೆಗೆ ಶಿವಮಂತ್ರವನ್ನೂ ಉಪದೇಶಿಸಿ ಸಾಮರಸ್ಯ ಸಾಧಿಸಲು ಸಿದ್ಧ. ಶೈವ ದೀಕ್ಷೆ ನೀಡಲು ಯಾವ ಅಭ್ಯಂತರವೂ ನನಗಿಲ್ಲ’ ಎಂದು ಘೋಷಿಸಿದರು.
ಕುರುಬ ಜನಾಂಗಕ್ಕೂ ಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧ ಇದೆ. ಪುರಂದರದಾಸರು, ವಾದಿರಾಜರು ಸೇರಿದಂತೆ ಬೇರೆ ಯಾರಿಗೂ ನೀಡದಂತಹ ದೊಡ್ಡ ಗೌರವವನ್ನು ಕೃಷ್ಣಮಠ ಕನಕದಾಸರಿಗೆ ನೀಡಿದೆ ಎಂದರು.