ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತುತದ ಸನ್ನಿವೇಶಕ್ಕೆ ಚರಿತೆಯ ಪುಟಗಳ ಕನ್ನಡಿ

ಧಾರವಾಡ ಸಾಹಿತ್ಯ ಸಂಭ್ರಮ 2016
Last Updated 22 ಜನವರಿ 2016, 19:47 IST
ಅಕ್ಷರ ಗಾತ್ರ

ಧಾರವಾಡ: ‘ದೇವರು ಯುದ್ಧ ಮಾಡುತ್ತಿರುವನೇ? ಯಾರ ವಿರುದ್ಧ ಯುದ್ಧ ಮಾಡುತ್ತಿರುವುದು? ಕೊಲ್ಲುವುದು ಯಾರನ್ನು? ತಾನೇ ಸೃಷ್ಟಿಸಿದ ಜೀವಿಗಳನ್ನೇ? ಕೊಲ್ಲುವುದೇ ಆಗಿದ್ದರೆ ಸೃಷ್ಟಿಸುವ ಅಗತ್ಯವೇನಿತ್ತು? ಸೃಷ್ಟಿಸುವುದು ಮತ್ತು ನಾಶಪಡಿಸುವುದು ಅವನ ಆಟವೇ. ಅವನ ಆಟಕ್ಕೆ ಜೀವಿಗಳೆಲ್ಲಾ ನೋವು ಅನುಭವಿಸುವುದು ಯಾಕೆ? ನೋವಿಲ್ಲದೇ ಎಲ್ಲರೂ ಸುಖದ ಬದುಕಿನಲ್ಲಿ ನಲಿಯುತ್ತಿದ್ದರೆ ತನ್ನನ್ನು ಯಾರೂ ಲಕ್ಷಿಸದೇ ಹೋದಾರೆಂಬ ಅಳುಕೇ?’

ಬೊಳುವಾರು ಮಹಮದ್ ಕುಂಞಿ ಅವರ ‘ಓದಿರಿ’ ಕೃತಿಯಲ್ಲಿನ ದೇವರ ಅಸ್ತಿತ್ವದ ಕುರಿತು ಜಿಜ್ಞಾಸೆ ಮೂಡಿಸುವ ಈ ಸಾಲುಗಳನ್ನು ವಿಭಿನ್ನವಾಗಿ ಅಭಿವ್ಯಕ್ತಿಸಿದ ಎಂ. ಗಣೇಶ ಅವರಿಗೆ ಸಭಾಂಗಣದಲ್ಲಿ ಜೋರಾದ ಚಪ್ಪಾಳೆಯ ಪ್ರತಿಸ್ಪಂದನೆ.

ಧಾರವಾಡ ಸಾಹಿತ್ಯ ಸಂಭ್ರಮದ ಎರಡನೇ ಗೋಷ್ಠಿ ‘ಐತಿಹಾಸಿಕ ಕಾದಂಬರಿಗಳಿಂದ ಓದು’ ಚರ್ಚೆ, ಸಂವಾದಗಳಿಂದ ಹೊರತಾದ ಪ್ರಯೋಗವಾಗಿತ್ತು.
ಸಾಹಿತ್ಯಾಸಕ್ತರು ಐತಿಹಾಸಿಕ ಕಾದಂಬರಿಗಳ ಓದಿನಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಮತ್ತೆ ಅವುಗಳತ್ತ ಒಲವು ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎನ್ನುವುದು ಈ ಗೋಷ್ಠಿಯ ವಿಷಯವಾಗಿತ್ತು.

ಕನ್ನಡದ 4 ಪ್ರಮುಖ ಐತಿಹಾಸಿಕ ಕಾದಂಬರಿಗಳಲ್ಲಿ ಇಂದಿನ ರಾಜಕೀಯ, ಸಾಮಾಜಿಕ, ರಾಜಕೀಯ ಸನ್ನಿವೇಶಗಳೊಂದಿಗೆ ಸಂವಾದಿಸುವಂತಹ ಆಯ್ದ ಭಾಗಗಳನ್ನು ಪ್ರಸ್ತುತಪಡಿಸಲಾಯಿತು. ಬೊಳುವಾರು ಅವರು ಬರೆದ ಪ್ರವಾದಿ ಮಹಮ್ಮದ್‌ ಪೈಗಂಬರ್ ಅವರ ಜೀವನವನ್ನಾಧರಿಸಿದ ‘ಓದಿರಿ’ ಕೃತಿಯಲ್ಲಿನ ಮಹಮ್ಮದ್‌ ಅವರು ಧ್ಯಾನಸ್ಥ ಲೋಕದ ಚಿಂತನೆಯನ್ನು ಕಾವ್ಯಾತ್ಮಕವಾಗಿ ನಿರೂಪಿಸಿದರು ನೀನಾಸಂ ರಂಗಶಿಕ್ಷಕ ಎಂ. ಗಣೇಶ.

ತ.ರಾ.ಸು. ಅವರ ‘ದುರ್ಗಾಸ್ತಮಾನ’ ಕೃತಿಯ ಪಾಳೇಗಾರ ಮದಕರಿ ನಾಯಕನ ಮಡದಿ ಓಬವ್ವ ನಾಗತಿಯ ಯುದ್ಧೋನ್ಮಾದ ವೀರಾವೇಶದ ನುಡಿಗಳಂತೆಯೇ ಆಕೆಯಲ್ಲಿನ ಸ್ತ್ರೀ ಸಹಜ ಸಂವೇದನೆಗಳ ಸೂಕ್ಷ್ಮ ವಿವರಣೆಗಳನ್ನು ಕಥನ–ಕಾವ್ಯದ ಸ್ವರೂಪದಲ್ಲಿ ಕವಯತ್ರಿ ಪ್ರಜ್ಞಾ ಮತ್ತಿಹಳ್ಳಿ ಕಟ್ಟಿಕೊಟ್ಟರು.  ಬೆಟಗೇರಿ ಕೃಷ್ಣಶರ್ಮ ಅವರ ಚಾರಿತ್ರಿಕ ಕಾದಂಬರಿ ‘ಮಲ್ಲಿಕಾರ್ಜುನ’ದ ಆಯ್ದ ಭಾಗವನ್ನು ಪ್ರಸ್ತುತಪಡಿಸಿದವರು ಯಕ್ಷಗಾನ ಕಲಾವಿದೆ ವಿದ್ಯಾ ಶರ್ಮ.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಚಿಕವೀರ ರಾಜೇಂದ್ರ’ ಕಾದಂಬರಿಯಲ್ಲಿನ ನಿರೂಪಣೆಯನ್ನು ಕಥೆಯ ಶೈಲಿಯಲ್ಲಿ, ಪಾತ್ರಗಳ ಸಂಭಾಷಣೆಗಳನ್ನು ನಾಟಕದ ಸ್ವರೂಪದಲ್ಲಿ ಸ್ವಾರಸ್ಯಕರವಾಗಿ ಪ್ರಸ್ತುತಪಡಿಸಿದರು ರಂಗಕಲಾವಿದೆ ಮಂಗಳಾ ಎನ್‌.

ವಸಾಹತುಷಾಹಿಯೊಂದಿಗೆ ನಂಟು: ‘ಚಾರಿತ್ರಿಕ ಕಾದಂಬರಿಗಳಿಗೂ ವಸಾಹತುಷಾಹಿ ವ್ಯವಸ್ಥೆಗೂ ನಿಕಟ ಸಂಬಂಧವಿದೆ’ ಎಂದರು ಗೋಷ್ಠಿಯ ನಿರ್ದೇಶಕರಾಗಿದ್ದ ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಅನುವಾದ ಮತ್ತು ಭಾಷಾ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಶಿವರಾಮ ಪಡಿಕ್ಕಲ್.

‘ಪಾಶ್ಚಿಮಾತ್ಯ ಸಂಸ್ಕೃತಿಯು ನಮ್ಮನ್ನು ದಮನಿಸುವ ಸಂದರ್ಭದಲ್ಲಿ ನಮಗೂ ಚಾರಿತ್ರಿಕ ಅಸ್ಮಿತೆಯಿದೆ ಎಂಬುದನ್ನು ಬಿಂಬಿಸುವ ಕೆಲಸವನ್ನು ಐತಿಹಾಸಿಕ ಕಾದಂಬರಿಗಳು ಮಾಡಿದವು. ಕನ್ನಡದ ಆರಂಭದ ಕಾದಂಬರಿಗಳ ರೂಪುರೇಷೆಯನ್ನು ಸಿದ್ಧಪಡಿಸಿದ್ದು ಐತಿಹಾಸಿಕ ಕಾದಂಬರಿಗಳು. ನೆನಪು, ಕಥನ, ಕಲ್ಪನೆ ಮತ್ತು ಚರಿತ್ರೆಗಳಿಲ್ಲದೆಯೇ ಯಾವ ಸಮುದಾಯಗಳೂ ಜೀವಿಸಲು ಸಾಧ್ಯವಿಲ್ಲ. ಅವುಗಳ ಅಗತ್ಯವನ್ನು ಈ ಕಾದಂಬರಿಗಳು ತುಂಬಿದವು’ ಎಂದು ಅವರು ಅಭಿಪ್ರಾಯಪಟ್ಟರು.

‘ಸಮಕಾಲೀನ ಸಮಾಜದಲ್ಲಿನ ಅನ್ಯ ಧರ್ಮೀಯ ಜನರು ಮತ್ತು ಮುಖಂಡರನ್ನು ಖಳನಾಯಕರಂತೆ ಚಿತ್ರಿಸಿರುವುದು ಐತಿಹಾಸಿಕ ಕಾದಂಬರಿಗಳಲ್ಲಿನ ಲೋಪ. ನಮ್ಮ ಅನೇಕ ಚಾರಿತ್ರಿಕ ಕಾದಂಬರಿಗಳಲ್ಲಿ ರೋಹಿತ್‌ ವೇಮುಲನಂತಹ ಪಾತ್ರಗಳಿಲ್ಲ. ಜನರ ಓದಿಗೆ ಆಕರವಾಗಿ ದೊರಕುವ ಇಂತಹ ಕಾದಂಬರಿಗಳು ಒಂದೆಡೆ ಕನ್ನಡದ ಅಸ್ಮಿತೆಯನ್ನು ಕಟ್ಟಿಕೊಡುತ್ತಲೇ ಇನ್ನೊಂದು ವರ್ಗವನ್ನು ನೇತ್ಯಾತ್ಮಕವಾಗಿ ಚಿತ್ರಿಸುವ ಅಪಾಯವನ್ನೂ ಕಾಣಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT