ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಷ್ಠ ಭಾರತ: ಮೋದಿ ಮುಂದಿರುವ ಸವಾಲು

Last Updated 7 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀ­ಚಿನ ಅಮೆರಿಕ ಭೇಟಿಯು, ಭಾರತವು ವಿಶ್ವದ ಹೊಸ ಆರ್ಥಿಕ ಶಕ್ತಿಯಾಗಿ ಹೊರ­ಹೊಮ್ಮುವ ಬಗ್ಗೆ ದೇಶ ಬಾಂಧ­ವರಲ್ಲಿ ಭಾರಿ ಆಶಾವಾದ ಮೂಡಿಸಿರುವುದರ ಜತೆಗೆ, ಜಾಗತಿಕ ಮುಖಂಡರ ಗಮನವನ್ನೂ ಸೆಳೆದಿದೆ. ಭಾರತವು ಜಾಗತಿಕ ಬಲಿಷ್ಠ ಅರ್ಥ ವ್ಯವಸ್ಥೆಯಾಗಿ ರೂಪು­ಗೊಳ್ಳಲು ಎದುರಿ­ಸುವ ಪ್ರಮುಖ ಸವಾಲುಗಳ ಬಗ್ಗೆ ಈ ಸಂದರ್ಭದಲ್ಲಿ ಅಮೆರಿಕದ ಖ್ಯಾತ ಅರ್ಥ­ಶಾಸ್ತ್ರ­ಜ್ಞರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾ­ಯ ಚಿಂತನಾರ್ಹವಾಗಿದೆ.

ಭಾರತವು ಅಭಿವೃದ್ಧಿಶೀಲ ದೇಶದಿಂದ ಅಭಿ­ವೃದ್ಧಿ ಹೊಂದಿದ ದೇಶವಾಗುವ ನಿಟ್ಟಿನಲ್ಲಿ  ಹಾಗೂ ಜಾಗತಿಕ ಆರ್ಥಿಕ ಶಕ್ತಿಯಾಗುವ ಹಾದಿ­ಯ­ಲ್ಲಿರುವ  ಅಡಚಣೆಗಳು ಏನು? ಎಂದು ಮೋದಿ ಅವರ ಅಮೆರಿಕ ಪ್ರವಾಸದ ಸಂದರ್ಭ­ದಲ್ಲಿ ಕೇಳಿದ ಪ್ರಶ್ನೆಗೆ, ಈ ಅರ್ಥಶಾಸ್ತ್ರಜ್ಞರು ನೀಡಿದ ಉತ್ತರ ತುಂಬ ಮಾರ್ಮಿಕವಾಗಿದೆ. ಮೋದಿ ತಮ್ಮ ಭರ­ವಸೆಗಳನ್ನು ಜಾರಿಗೊಳಿಸುವು­ದರಲ್ಲಿ ವಿಫಲ­ರಾ­ಗುವ ಸಾಧ್ಯತೆಯೇ ಅತಿದೊಡ್ಡ ಸವಾಲಾ­ಗಿ­ದೆಯೇ ಹೊರತು, ಭಯೋ­ತ್ಪಾದನೆ, ಯುದ್ಧ, ತೈಲ ಬಿಕ್ಕಟ್ಟು ಅಥವಾ ಸಾಂಕ್ರಾಮಿಕ ರೋಗಗಳಲ್ಲ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ­­ವಾಗಿದೆ.

ಈ ಅರ್ಥಶಾಸ್ತ್ರಜ್ಞರು ಮಾಡಿರುವ ಅಂದಾಜು ಸರಿಯಾಗಿಯೇ ಇದೆ. ಮೋದಿ ಅಭಿಮಾನಿಗಳಷ್ಟೇ ಅಲ್ಲದೇ, ಟೀಕಾಕಾರರು  ಮತ್ತು ರಾಜ­ಕೀಯ ವಿರೋ­­ಧಿಗಳೂ, ಈ ಭೇಟಿಯ ಫಲ­ಶ್ರುತಿಯ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ಉದಾಸೀನ ಧೋರಣೆಯ ಅಧಿ­ಕಾರ­­ಶಾಹಿ ಮತ್ತು ದಪ್ಪ ಚರ್ಮದ ರಾಜ­ಕಾರಣಿ­ಗಳ ವರ್ತನೆಯಿಂದ ಸಂಕ-­ಷ್ಟಕ್ಕೆ ಒಳಗಾಗಿರುವ ಜನ­ಸಾಮಾ­ನ್ಯರು ಹಾಗೂ ಹಲವಾರು ಅಡಚಣೆ­ಗ­ಳಿಂದ ಬೇಸತ್ತಿರುವ ಉದ್ಯಮಿಗಳು, ಬದ­ಲಾ­ವ­ಣೆಯ ಒಟ್ಟಾರೆ ಸ್ವರೂಪ ಹೇಗಿರು­ತ್ತದೆ ಎನ್ನುವು­ದನ್ನು ಎದುರು ನೋಡುತ್ತಿದ್ದಾರೆ.

ಕೊಳೆತು ನಾರುತ್ತಿರುವ ಒಟ್ಟಾರೆ ವ್ಯವಸ್ಥೆ­ಯನ್ನು ಬೇರು ಸಹಿತ ಕಿತ್ತೊಗೆದು  ಆರ್ಥಿಕ ಬೆಳವ­ಣಿಗೆಗೆ ಪೂರಕ­ವಾದ ಬದಲಾವಣೆಗಳನ್ನು ಮೋದಿ ಅವರು  ತ್ವರಿತವಾಗಿ ಜಾರಿಗೆ ತರಲಿದ್ದಾರೆ ಎಂದು ಅವರೆಲ್ಲ ಬಹುವಾಗಿ ನಿರೀಕ್ಷಿಸಿದ್ದಾರೆ. ಯುಪಿಎ ಸರ್ಕಾರದ ಅಧಿಕಾ­ರಾವಧಿಯಲ್ಲಿ ಕಂಡು ಬಂದಿದ್ದ ಹತಾಶೆ ಮತ್ತು  ವಿಷಣ್ಣತೆಯ ಭಾವನೆಯನ್ನು ದೂರ ಮಾಡುವುದು ಮೋದಿ ಅವರ ಮೊದಲ ಕರ್ತವ್ಯವಾಗಬೇಕಾಗಿದೆ.

ತಮ್ಮ ಚುನಾವಣಾ ಪ್ರಚಾರ ಭಾಷಣವು ಬರೀ ಹುಸಿ ಬಣ್ಣದ ಮಾತುಗಳಿಂದ ಕೂಡಿರಲಿಲ್ಲ ಎನ್ನುವು­ದನ್ನು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಮನ­­ವರಿಕೆ ಮಾಡಿಕೊಡಬೇಕಾಗಿದೆ. ಉದ್ದಿಮೆ - ವಹಿವಾಟಿಗೆ ಭಾರತ ಈಗ ಇನ್ನಷ್ಟು ತೆರೆದ ಮನ­ಸ್ಸಿ­ನಿಂದ ಸಿದ್ಧವಾಗಿ­ರುವುದನ್ನು ವಿದೇಶಿ ಹೂಡಿಕೆ­ದಾರರಿಗೆ ಮನದಟ್ಟು ಮಾಡಿಕೊಡ­ಬೇಕಾಗಿದೆ. ಮೋದಿ ಅವರ ಮಾತುಗಳಲ್ಲಿ, ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ದ ಮತ್ತು ವ್ಯಾಪಾರಿ ಗುಣ ತಮ್ಮ ರಕ್ತದ­ಲ್ಲಿಯೇ ಇರುವುದರ ಸ್ಪಷ್ಟ ಸಂದೇಶ ಇದೆ.

ವಿಶ್ವದ ಇತರ ಯಾವುದೇ ದೇಶ­ದಲ್ಲಿ ಕಾಣದ ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯ ವಿಶಿಷ್ಟ ಸಮನ್ವಯತೆ ಭಾರತದಲ್ಲಿ ಇರುವುದ­ರತ್ತಲೂ ಅವರು ಅಮೆರಿಕನ್ನರ ಗಮನ ಸೆಳೆದಿದ್ದಾರೆ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್, ವಿದೇಶ ಬಾಂಧವ್ಯ ಮಂಡಳಿ, ಅಮೆರಿಕದ ಮುಂಚೂಣಿ ಹೂಡಿಕೆ­ದಾರರು ಮತ್ತು ಬಹುರಾಷ್ಟ್ರೀಯ ಸಂಸ್ಥೆ­ಗಳ ಮುಖ್ಯಸ್ಥರು ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡದ ವಿಷಯಗಳೇ ಇಲ್ಲ  ಎನ್ನಬಹುದು.

ಓಬಿರಾಯನ ಕಾಲದ ಕಾನೂನುಗಳನ್ನು ರದ್ದುಗೊಳಿಸುವು­ದಾ­ಗಿಯೂ ಪ್ರಕಟಿ­ಸಿದ್ದಾರೆ. ಉಪಯುಕ್ತವಲ್ಲದ ಪ್ರತಿ­ಯೊಂದು ಕಾನೂನನ್ನು ದಿನಕ್ಕೆ ಒಂದ­ರಂತೆ ರದ್ದುಗೊಳಿಸಿ ಅವುಗಳ ಉಪದ್ರವ­ದಿಂದ ರೋಸಿ ಹೋದ ಜನರನ್ನು ಮುಕ್ತಗೊಳಿಸುವ ಭರವಸೆ­ಯನ್ನೂ ನೀಡಿದ್ದಾರೆ.
ಭಾರತದ ‘ತೆರಿಗೆ ಭಯೋತ್ಪಾದನೆ’ ನಿವಾರಿಸಿ, ದೂರಗಾಮಿ ಪ್ರಭಾವ ಬೀರುವ, ‘ಹೂಡಿಕೆದಾರ ಸ್ನೇಹಿ’ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ, ‘ಕೆಂಪು ಪಟ್ಟಿ’ಯ ಹಾವಳಿ ಬದಲಿಗೆ ‘ಕೆಂಪು ರತ್ನಗಂಬಳಿ’ಯ ಸ್ವಾಗತ ನೀಡುವ ವಾಗ್ದಾನ ನೀಡಿದ್ದಾರೆ.

ಸರಕುಗಳನ್ನು ತಯಾರಿ­ಸುವ ಮತ್ತು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆದಾರರ ಆತ್ಮವಿಶ್ವಾಸ ಹೆಚ್ಚಿ­ಸುವ ಕ್ರಮಗಳನ್ನು ಕೈಗೊಳ್ಳುವ ಭರವಸೆಯ ಮಾತು­ಗಳನ್ನಾಡಿದ್ದಾರೆ. ‘ಭಾರತದಲ್ಲಿ ತಯಾ­ರಿಸಿ’ ಘೋಷಣೆಗೆ ಸ್ಪಂದಿಸಲು ಜಾಗತಿಕ ಹೂಡಿಕೆ­ದಾ­ರರಲ್ಲಿ ಆತ್ಮ­ವಿಶ್ವಾಸ ತುಂಬಲೂ ಪ್ರಯತ್ನಿಸಿ­ದ್ದಾರೆ.

ಮೋದಿ ಅವರ ಮಾತು ಮತ್ತು ಚಿಂತನೆ­ಗಳ­ಲ್ಲಿನ ಸ್ಪಷ್ಟತೆ ಮತ್ತು ಭಾರತ ಮುನ್ನಡೆಸುವ ಅವರ ಸಾಮರ್ಥ್ಯ ಕಂಡು ಅಮೆರಿಕದ ಉದ್ಯಮ­ಪತಿಗಳು ಪ್ರಭಾ­ವಿತ­ರಾಗಿದ್ದಾರೆ. ಮೋದಿ ಭೇಟಿ ಬಗ್ಗೆ ಅಮೆರಿಕ­ದಲ್ಲಿಯೂ ಟೀಕಾಕಾರರಿಗೇನೂ ಕೊರತೆ ಇದ್ದಿರಲಿಲ್ಲ.  ಮೋದಿ ಭೇಟಿ ಮುನ್ನವೇ, ಅಲ್ಲಿನ ಉದ್ಯಮಿಗಳ ನಿಯೋಗವು, ಭಾರತದಲ್ಲಿ ಉದ್ಯಮ ಆರಂಭಿ­ಸಲು ತಮಗೆ ಎದುರಾಗುವ ಅಡಚಣೆಗಳ ದೊಡ್ಡ ಪಟ್ಟಿಯನ್ನೇ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಮನವರಿಕೆ ಮಾಡಿ­ಕೊಟ್ಟಿದ್ದರು.

ಎಫ್‌ಡಿಐ ಸ್ವಾಗ­ತಿ­ಸುವ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡು­ತ್ತಿ­ರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಬಹು­ಬ್ರ್ಯಾಂಡ್ ಚಿಲ್ಲರೆ ವಹಿವಾಟಿನಲ್ಲಿ  ಎಫ್‌­ಡಿ­ಐ­ಗೆ ಪೂರ್ಣ ಪ್ರಮಾ­ಣದಲ್ಲಿ ಅವಕಾಶ ನೀಡಲು ಹಿಂದೇಟು ಹಾಕುತ್ತಿರುವುದರ ನಿದರ್ಶನವನ್ನೂ ನೀಡಿದ್ದರು.
ಎಲ್ಲ ವಲಯಗಳಲ್ಲಿಯೂ ವಿದೇಶಿ ಹೂಡಿಕೆಗೆ ಕೆಂಪು ರತ್ನಗಂಬಳಿ ಸ್ವಾಗತ ನೀಡುವುದಾಗಿ ಮೋದಿ ಹೇಳಿದ್ದರೂ, ವಾಣಿಜ್ಯ ಸಚಿವೆ ನಿರ್ಮಲಾ ಸೀತಾ­ರಾಮನ್‌ ಅವರು ಈ ಬಗ್ಗೆ ಭಿನ್ನ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ್ದ ಉದ್ಯಮಿ­ಗಳು, ಭಾರತ ಯಾವಾಗಲೂ ಗೊಂದ­ಲಕಾರಿ ಸಂಕೇತ ನೀಡುತ್ತದೆ.

ಪ್ರಜಾ­ಪ್ರಭುತ್ವ ವ್ಯವಸ್ಥೆ ಇರುವ ಭಾರತ­ಕ್ಕಿಂತ, ಕಮ್ಯುನಿಸ್ಟ್ ಸರ್ಕಾರ ಇರುವ ಚೀನಾದಲ್ಲಿ ಉದ್ದಿಮೆ ವಹಿ­ವಾಟು ನಡೆಸುವುದು ಹೆಚ್ಚು ಸುಲಭ ಎಂದೂ ಪ್ರತಿಪಾದಿಸಿದ್ದರು. ತೆರಿಗೆ ಪಾವತಿ ವಿಷಯದಲ್ಲಿ ಹಿಂದಿನ ಯುಪಿಎ ಸರ್ಕಾರದಲ್ಲಿ ನಷ್ಟಕ್ಕೆ ಗುರಿಯಾಗಿದ್ದ, ಸುಪ್ರೀಂ­ಕೋರ್ಟ್‌ನಲ್ಲಿ ಗೆಲುವು ಸಾಧಿಸಿರುವ ವಿಶ್ವದ ಎರ­ಡನೆ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆ ವೊಡಾ­ಫೋನ್‌ನ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಟ್ಟೊ­ರಿಯೊ ಕೊಲಾವೊ ಅವರೂ ಕೂಡ ಮೋದಿ ಆಡಳಿತದ ಬಗ್ಗೆ ಆಶಾವಾ­ದಿ­ಯಾಗಿ­ದ್ದಾರೆ.

ಅಧಿಕಾರಶಾಹಿಯ ವರ್ತ­ನೆ­­­ಯಲ್ಲಿ ಮಾತ್ರ ತಕ್ಷಣಕ್ಕೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.
ದೇಶದ ಒಟ್ಟಾರೆ ಅರ್ಥ ವ್ಯವಸ್ಥೆಯ ಚಿತ್ರಣ ಬದಲಿಸುವ ತಮ್ಮ ಕನಸು ನನಸಾಗಿಸುವ ದೈತ್ಯ ಗುರಿ ತಮ್ಮ ಮುಂದೆ ಇರುವುದು ಮೋದಿ ಅವರಿಗೆ ಚೆನ್ನಾಗಿ ಅರಿವಿದೆ. ಗುಜರಾತ್‌ನ­ಲ್ಲಿಯೂ ಅವರು ಇದೇ ಬಗೆಯ ಸವಾಲು ಎದುರಿಸಿದ್ದರು. ಗಾಂಧಿ ಜಯಂತಿ ದಿನ ಚಾಲನೆ ನೀಡಿದ ‘ಸ್ವಚ್ಛ ಭಾರತ’ ಆಂದೋಲನವು ಮೋದಿ ಅವರ ಇನ್ನೊಂದು ಅಚ್ಚು­ಮೆಚ್ಚಿನ ಕಾರ್ಯಕ್ರಮವಾಗಿದೆ.

ಮಂತ್ರ­ಮುಗ್ಧಗೊಳಿಸುವ ಮಾತುಗಳಿಂದ ಅಮೆ­ರಿಕದಲ್ಲಿನ ಭಾರತೀಯರ ಮತ್ತು ಉದ್ಯಮಿಗಳ ಮನ­ಗೆದ್ದ ಮರುದಿನವೇ ಅವರು ಸ್ವದೇಶದಲ್ಲಿ ಬೀದಿ ಸ್ವಚ್ಛಗೊಳಿ­ಸಲು ಪೊರಕೆ ಹಿಡಿದು ನಿಂತಿ­ದ್ದರು. ಸ್ವಚ್ಛ ಭಾರತವೂ ಉತ್ತಮ ಅರ್ಥ ವ್ಯವ­ಸ್ಥೆಗೆ ಪೂರಕ ಎನ್ನುವ ಸಂದೇಶ­ವನ್ನೂ ದೇಶ­ಬಾಂಧವರಿಗೆ ರವಾನಿ­ಸಿದ್ದಾರೆ. ಕೊಚ್ಚೆಯಲ್ಲಿ ಹೊರಳಾಡುತ್ತಿರುವ ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿದೇಶದ ಯಾವುದೇ ಬಂಡ­ವಾಳ ಹೂಡಿಕೆದಾರ ಮನಸ್ಸು ಮಾಡು­ವುದಿಲ್ಲ.

ಕೊಳಕುತನದ ಕಾರ­ಣಕ್ಕೆ ವಿದೇಶಿ ಕಂಪೆನಿಗಳು ಪ್ರತಿಭಾನ್ವಿ­ತರನ್ನು ಸುಲಭವಾಗಿ ಭಾರತಕ್ಕೆ ಕರೆ­ತರಲೂ ಸಾಧ್ಯವಾಗಲಾರದು. ಗಲೀಜು, ಅನೈರ್ಮಲ್ಯ ವ್ಯಕ್ತಿಯ ಆರೋಗ್ಯಕ್ಕೆ ಹಾನಿ ಉಂಟು ಮಾಡು­ವಂತೆ, ದೇಶದ ಅರ್ಥ ವ್ಯವ­ಸ್ಥೆಗೂ ಗಂಡಾಂತರಕಾರಿಯಾಗಿ ಪರಿಣಮಿ­ಸುತ್ತದೆ. ಮಾಲಿನ್ಯ ಮುಕ್ತ ನದಿಗಳು – ಪರಿಸರ, ಎಲ್ಲೆಡೆ ನೈರ್ಮಲ್ಯ, ಕಸದಿಂದ ಮುಕ್ತಿ, ಕಸದ ಮರು ಬಳ­ಕೆಯು ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆ ದೂರ ಮಾಡುವುದಲ್ಲದೇ ಆರೋಗ್ಯಕರ ಮತ್ತು ಜನ ಸಮು­ದಾಯದ ನೆಮ್ಮದಿಯ ಮತ್ತು ಸಂತೃಪ್ತ ಜೀವನಕ್ಕೂ ಕಾರಣ­ವಾಗುತ್ತದೆ. ಇದು ದೇಶ­ವೊಂದರ ಉತ್ಪಾದನಾ ಸಾಮರ್ಥ್ಯ ಹೆಚ್ಚಿ­ಸಲೂ ನೆರವಾಗುತ್ತದೆ.

ಮೋದಿ ಅವರ ಅಮೆರಿಕ ಭೇಟಿ ಬಗ್ಗೆ ಪ್ರತಿ­ಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ ಪಕ್ಷವು ರಾಜಕೀಯ ಕಾರಣ­ಗಳಿಗೆ ಏನೇ ಟೀಕೆ ಮಾಡಲಿ, ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃ­ತ್ವದ ಸರ್ಕಾರಕ್ಕೆ ಒಳ್ಳೆಯ ಸಂದೇಶ ಇರು­ವು­ದನ್ನೂ ನಾವಿಲ್ಲಿ ಅಲ್ಲಗಳೆಯ­ಲಿಕ್ಕಾಗದು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ­ದಲ್ಲಿನ ರಾಜಕೀಯ ಅಸ್ಥಿ­ರತೆ, ಗೊಂದಲಗಳ ಪ್ರಯೋಜನ ಪಡೆದು­ಕೊಳ್ಳಲು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣಕ್ಕೆ ಕಾರ್ಯೋನ್ಮುಖ­ವಾಗಬೇಕಾಗಿದೆ.

ಬಂಡವಾಳ ಹೂಡಿಕೆದಾರರು ರಾಜ­ಕೀಯ ಸ್ಥಿರತೆ ಮತ್ತು ಉನ್ನತ ನಾಯಕ­ರಲ್ಲಿ ಪ್ರಾಮಾ­ಣಿಕತೆ ಇರುವುದನ್ನು ಬಯಸುತ್ತಾರೆ. ರಾಜಕೀಯ ಸ್ಥಿರತೆಗೆ ಬೇಕಾಗುವ ಸ್ಪಷ್ಟ ಬಹುಮತ ಹೊಂದಿ­ರುವ ಮತ್ತು ಒಳ್ಳೆಯ ಹೆಸರು ಹೊಂದಿ­ರುವ ಸಿದ್ದರಾಮಯ್ಯ ಅವರು ದೂರ­ಗಾಮಿ ಪರಿಣಾಮ ಬೀರುವ ಆಡಳಿತಾ­ತ್ಮಕ ಮತ್ತು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಉತ್ತಮ ಆಡಳಿತ ನೀಡಲು ಪಾರ­ದರ್ಶಕ, ನ್ಯಾಯೋಚಿತವಾದ ತ್ವರಿತ ನಿರ್ಧಾರಗಳನ್ನು ಕೈಗೊಳ್ಳ­ಬೇಕು.  ಮೂಲಸೌಕರ್ಯ ಯೋಜನೆ­ಗಳನ್ನು ಆದ್ಯತೆ ಮೇರೆಗೆ  ಜಾರಿಗೊಳಿಸುವುದರ ಜತೆಗೆ ನಗರ,  ಪಟ್ಟಣ  ಮತ್ತು ಪ್ರವಾಸಿ ತಾಣ­-ಗ­ಳನ್ನು ಕಸದಿಂದ ಮುಕ್ತಗೊಳಿಸ­ಬೇಕಾಗಿದೆ. ಬಂಡ­ವಾಳ ಹೂಡಿಕೆದಾ­ರರು ಮತ್ತು ಪ್ರವಾಸಿ­ಗ­ರನ್ನು ಕರ್ನಾಟಕ­ದತ್ತ ಚುಂಬಕ-­ದಂತೆ ಸೆಳೆಯಲು ಸೂಕ್ತ ಕಾರ್ಯತಂತ್ರವನ್ನೂ ರೂಪಿಸಬೇಕಾಗಿದೆ. ಕಾಲ ಮಿಂಚುವ ಮೊದಲೇ ಕಾರ್ಯೋ­ನ್ಮುಖ­ವಾ­ಗಲು ಸಿದ್ದರಾಮಯ್ಯ ಅವರು ಮರೆಯಬಾರ­ದಷ್ಟೆ.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT