ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಅಮೆರಿಕ ಭೇಟಿಯು, ಭಾರತವು ವಿಶ್ವದ ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಬಗ್ಗೆ ದೇಶ ಬಾಂಧವರಲ್ಲಿ ಭಾರಿ ಆಶಾವಾದ ಮೂಡಿಸಿರುವುದರ ಜತೆಗೆ, ಜಾಗತಿಕ ಮುಖಂಡರ ಗಮನವನ್ನೂ ಸೆಳೆದಿದೆ. ಭಾರತವು ಜಾಗತಿಕ ಬಲಿಷ್ಠ ಅರ್ಥ ವ್ಯವಸ್ಥೆಯಾಗಿ ರೂಪುಗೊಳ್ಳಲು ಎದುರಿಸುವ ಪ್ರಮುಖ ಸವಾಲುಗಳ ಬಗ್ಗೆ ಈ ಸಂದರ್ಭದಲ್ಲಿ ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯ ಚಿಂತನಾರ್ಹವಾಗಿದೆ.
ಭಾರತವು ಅಭಿವೃದ್ಧಿಶೀಲ ದೇಶದಿಂದ ಅಭಿವೃದ್ಧಿ ಹೊಂದಿದ ದೇಶವಾಗುವ ನಿಟ್ಟಿನಲ್ಲಿ ಹಾಗೂ ಜಾಗತಿಕ ಆರ್ಥಿಕ ಶಕ್ತಿಯಾಗುವ ಹಾದಿಯಲ್ಲಿರುವ ಅಡಚಣೆಗಳು ಏನು? ಎಂದು ಮೋದಿ ಅವರ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ, ಈ ಅರ್ಥಶಾಸ್ತ್ರಜ್ಞರು ನೀಡಿದ ಉತ್ತರ ತುಂಬ ಮಾರ್ಮಿಕವಾಗಿದೆ. ಮೋದಿ ತಮ್ಮ ಭರವಸೆಗಳನ್ನು ಜಾರಿಗೊಳಿಸುವುದರಲ್ಲಿ ವಿಫಲರಾಗುವ ಸಾಧ್ಯತೆಯೇ ಅತಿದೊಡ್ಡ ಸವಾಲಾಗಿದೆಯೇ ಹೊರತು, ಭಯೋತ್ಪಾದನೆ, ಯುದ್ಧ, ತೈಲ ಬಿಕ್ಕಟ್ಟು ಅಥವಾ ಸಾಂಕ್ರಾಮಿಕ ರೋಗಗಳಲ್ಲ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯವಾಗಿದೆ.
ಈ ಅರ್ಥಶಾಸ್ತ್ರಜ್ಞರು ಮಾಡಿರುವ ಅಂದಾಜು ಸರಿಯಾಗಿಯೇ ಇದೆ. ಮೋದಿ ಅಭಿಮಾನಿಗಳಷ್ಟೇ ಅಲ್ಲದೇ, ಟೀಕಾಕಾರರು ಮತ್ತು ರಾಜಕೀಯ ವಿರೋಧಿಗಳೂ, ಈ ಭೇಟಿಯ ಫಲಶ್ರುತಿಯ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ಉದಾಸೀನ ಧೋರಣೆಯ ಅಧಿಕಾರಶಾಹಿ ಮತ್ತು ದಪ್ಪ ಚರ್ಮದ ರಾಜಕಾರಣಿಗಳ ವರ್ತನೆಯಿಂದ ಸಂಕ-ಷ್ಟಕ್ಕೆ ಒಳಗಾಗಿರುವ ಜನಸಾಮಾನ್ಯರು ಹಾಗೂ ಹಲವಾರು ಅಡಚಣೆಗಳಿಂದ ಬೇಸತ್ತಿರುವ ಉದ್ಯಮಿಗಳು, ಬದಲಾವಣೆಯ ಒಟ್ಟಾರೆ ಸ್ವರೂಪ ಹೇಗಿರುತ್ತದೆ ಎನ್ನುವುದನ್ನು ಎದುರು ನೋಡುತ್ತಿದ್ದಾರೆ.
ಕೊಳೆತು ನಾರುತ್ತಿರುವ ಒಟ್ಟಾರೆ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತೊಗೆದು ಆರ್ಥಿಕ ಬೆಳವಣಿಗೆಗೆ ಪೂರಕವಾದ ಬದಲಾವಣೆಗಳನ್ನು ಮೋದಿ ಅವರು ತ್ವರಿತವಾಗಿ ಜಾರಿಗೆ ತರಲಿದ್ದಾರೆ ಎಂದು ಅವರೆಲ್ಲ ಬಹುವಾಗಿ ನಿರೀಕ್ಷಿಸಿದ್ದಾರೆ. ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಕಂಡು ಬಂದಿದ್ದ ಹತಾಶೆ ಮತ್ತು ವಿಷಣ್ಣತೆಯ ಭಾವನೆಯನ್ನು ದೂರ ಮಾಡುವುದು ಮೋದಿ ಅವರ ಮೊದಲ ಕರ್ತವ್ಯವಾಗಬೇಕಾಗಿದೆ.
ತಮ್ಮ ಚುನಾವಣಾ ಪ್ರಚಾರ ಭಾಷಣವು ಬರೀ ಹುಸಿ ಬಣ್ಣದ ಮಾತುಗಳಿಂದ ಕೂಡಿರಲಿಲ್ಲ ಎನ್ನುವುದನ್ನು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಉದ್ದಿಮೆ - ವಹಿವಾಟಿಗೆ ಭಾರತ ಈಗ ಇನ್ನಷ್ಟು ತೆರೆದ ಮನಸ್ಸಿನಿಂದ ಸಿದ್ಧವಾಗಿರುವುದನ್ನು ವಿದೇಶಿ ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ಮೋದಿ ಅವರ ಮಾತುಗಳಲ್ಲಿ, ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ದ ಮತ್ತು ವ್ಯಾಪಾರಿ ಗುಣ ತಮ್ಮ ರಕ್ತದಲ್ಲಿಯೇ ಇರುವುದರ ಸ್ಪಷ್ಟ ಸಂದೇಶ ಇದೆ.
ವಿಶ್ವದ ಇತರ ಯಾವುದೇ ದೇಶದಲ್ಲಿ ಕಾಣದ ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯ ವಿಶಿಷ್ಟ ಸಮನ್ವಯತೆ ಭಾರತದಲ್ಲಿ ಇರುವುದರತ್ತಲೂ ಅವರು ಅಮೆರಿಕನ್ನರ ಗಮನ ಸೆಳೆದಿದ್ದಾರೆ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್, ವಿದೇಶ ಬಾಂಧವ್ಯ ಮಂಡಳಿ, ಅಮೆರಿಕದ ಮುಂಚೂಣಿ ಹೂಡಿಕೆದಾರರು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡದ ವಿಷಯಗಳೇ ಇಲ್ಲ ಎನ್ನಬಹುದು.
ಓಬಿರಾಯನ ಕಾಲದ ಕಾನೂನುಗಳನ್ನು ರದ್ದುಗೊಳಿಸುವುದಾಗಿಯೂ ಪ್ರಕಟಿಸಿದ್ದಾರೆ. ಉಪಯುಕ್ತವಲ್ಲದ ಪ್ರತಿಯೊಂದು ಕಾನೂನನ್ನು ದಿನಕ್ಕೆ ಒಂದರಂತೆ ರದ್ದುಗೊಳಿಸಿ ಅವುಗಳ ಉಪದ್ರವದಿಂದ ರೋಸಿ ಹೋದ ಜನರನ್ನು ಮುಕ್ತಗೊಳಿಸುವ ಭರವಸೆಯನ್ನೂ ನೀಡಿದ್ದಾರೆ.
ಭಾರತದ ‘ತೆರಿಗೆ ಭಯೋತ್ಪಾದನೆ’ ನಿವಾರಿಸಿ, ದೂರಗಾಮಿ ಪ್ರಭಾವ ಬೀರುವ, ‘ಹೂಡಿಕೆದಾರ ಸ್ನೇಹಿ’ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ, ‘ಕೆಂಪು ಪಟ್ಟಿ’ಯ ಹಾವಳಿ ಬದಲಿಗೆ ‘ಕೆಂಪು ರತ್ನಗಂಬಳಿ’ಯ ಸ್ವಾಗತ ನೀಡುವ ವಾಗ್ದಾನ ನೀಡಿದ್ದಾರೆ.
ಸರಕುಗಳನ್ನು ತಯಾರಿಸುವ ಮತ್ತು ವಿದೇಶಿ ನೇರ ಬಂಡವಾಳ (ಎಫ್ಡಿಐ) ಹೂಡಿಕೆದಾರರ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವ ಭರವಸೆಯ ಮಾತುಗಳನ್ನಾಡಿದ್ದಾರೆ. ‘ಭಾರತದಲ್ಲಿ ತಯಾರಿಸಿ’ ಘೋಷಣೆಗೆ ಸ್ಪಂದಿಸಲು ಜಾಗತಿಕ ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ತುಂಬಲೂ ಪ್ರಯತ್ನಿಸಿದ್ದಾರೆ.
ಮೋದಿ ಅವರ ಮಾತು ಮತ್ತು ಚಿಂತನೆಗಳಲ್ಲಿನ ಸ್ಪಷ್ಟತೆ ಮತ್ತು ಭಾರತ ಮುನ್ನಡೆಸುವ ಅವರ ಸಾಮರ್ಥ್ಯ ಕಂಡು ಅಮೆರಿಕದ ಉದ್ಯಮಪತಿಗಳು ಪ್ರಭಾವಿತರಾಗಿದ್ದಾರೆ. ಮೋದಿ ಭೇಟಿ ಬಗ್ಗೆ ಅಮೆರಿಕದಲ್ಲಿಯೂ ಟೀಕಾಕಾರರಿಗೇನೂ ಕೊರತೆ ಇದ್ದಿರಲಿಲ್ಲ. ಮೋದಿ ಭೇಟಿ ಮುನ್ನವೇ, ಅಲ್ಲಿನ ಉದ್ಯಮಿಗಳ ನಿಯೋಗವು, ಭಾರತದಲ್ಲಿ ಉದ್ಯಮ ಆರಂಭಿಸಲು ತಮಗೆ ಎದುರಾಗುವ ಅಡಚಣೆಗಳ ದೊಡ್ಡ ಪಟ್ಟಿಯನ್ನೇ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಎಫ್ಡಿಐ ಸ್ವಾಗತಿಸುವ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡುತ್ತಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ, ಬಹುಬ್ರ್ಯಾಂಡ್ ಚಿಲ್ಲರೆ ವಹಿವಾಟಿನಲ್ಲಿ ಎಫ್ಡಿಐಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಲು ಹಿಂದೇಟು ಹಾಕುತ್ತಿರುವುದರ ನಿದರ್ಶನವನ್ನೂ ನೀಡಿದ್ದರು.
ಎಲ್ಲ ವಲಯಗಳಲ್ಲಿಯೂ ವಿದೇಶಿ ಹೂಡಿಕೆಗೆ ಕೆಂಪು ರತ್ನಗಂಬಳಿ ಸ್ವಾಗತ ನೀಡುವುದಾಗಿ ಮೋದಿ ಹೇಳಿದ್ದರೂ, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಭಿನ್ನ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ್ದ ಉದ್ಯಮಿಗಳು, ಭಾರತ ಯಾವಾಗಲೂ ಗೊಂದಲಕಾರಿ ಸಂಕೇತ ನೀಡುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತಕ್ಕಿಂತ, ಕಮ್ಯುನಿಸ್ಟ್ ಸರ್ಕಾರ ಇರುವ ಚೀನಾದಲ್ಲಿ ಉದ್ದಿಮೆ ವಹಿವಾಟು ನಡೆಸುವುದು ಹೆಚ್ಚು ಸುಲಭ ಎಂದೂ ಪ್ರತಿಪಾದಿಸಿದ್ದರು. ತೆರಿಗೆ ಪಾವತಿ ವಿಷಯದಲ್ಲಿ ಹಿಂದಿನ ಯುಪಿಎ ಸರ್ಕಾರದಲ್ಲಿ ನಷ್ಟಕ್ಕೆ ಗುರಿಯಾಗಿದ್ದ, ಸುಪ್ರೀಂಕೋರ್ಟ್ನಲ್ಲಿ ಗೆಲುವು ಸಾಧಿಸಿರುವ ವಿಶ್ವದ ಎರಡನೆ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆ ವೊಡಾಫೋನ್ನ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಟ್ಟೊರಿಯೊ ಕೊಲಾವೊ ಅವರೂ ಕೂಡ ಮೋದಿ ಆಡಳಿತದ ಬಗ್ಗೆ ಆಶಾವಾದಿಯಾಗಿದ್ದಾರೆ.
ಅಧಿಕಾರಶಾಹಿಯ ವರ್ತನೆಯಲ್ಲಿ ಮಾತ್ರ ತಕ್ಷಣಕ್ಕೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.
ದೇಶದ ಒಟ್ಟಾರೆ ಅರ್ಥ ವ್ಯವಸ್ಥೆಯ ಚಿತ್ರಣ ಬದಲಿಸುವ ತಮ್ಮ ಕನಸು ನನಸಾಗಿಸುವ ದೈತ್ಯ ಗುರಿ ತಮ್ಮ ಮುಂದೆ ಇರುವುದು ಮೋದಿ ಅವರಿಗೆ ಚೆನ್ನಾಗಿ ಅರಿವಿದೆ. ಗುಜರಾತ್ನಲ್ಲಿಯೂ ಅವರು ಇದೇ ಬಗೆಯ ಸವಾಲು ಎದುರಿಸಿದ್ದರು. ಗಾಂಧಿ ಜಯಂತಿ ದಿನ ಚಾಲನೆ ನೀಡಿದ ‘ಸ್ವಚ್ಛ ಭಾರತ’ ಆಂದೋಲನವು ಮೋದಿ ಅವರ ಇನ್ನೊಂದು ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ.
ಮಂತ್ರಮುಗ್ಧಗೊಳಿಸುವ ಮಾತುಗಳಿಂದ ಅಮೆರಿಕದಲ್ಲಿನ ಭಾರತೀಯರ ಮತ್ತು ಉದ್ಯಮಿಗಳ ಮನಗೆದ್ದ ಮರುದಿನವೇ ಅವರು ಸ್ವದೇಶದಲ್ಲಿ ಬೀದಿ ಸ್ವಚ್ಛಗೊಳಿಸಲು ಪೊರಕೆ ಹಿಡಿದು ನಿಂತಿದ್ದರು. ಸ್ವಚ್ಛ ಭಾರತವೂ ಉತ್ತಮ ಅರ್ಥ ವ್ಯವಸ್ಥೆಗೆ ಪೂರಕ ಎನ್ನುವ ಸಂದೇಶವನ್ನೂ ದೇಶಬಾಂಧವರಿಗೆ ರವಾನಿಸಿದ್ದಾರೆ. ಕೊಚ್ಚೆಯಲ್ಲಿ ಹೊರಳಾಡುತ್ತಿರುವ ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿದೇಶದ ಯಾವುದೇ ಬಂಡವಾಳ ಹೂಡಿಕೆದಾರ ಮನಸ್ಸು ಮಾಡುವುದಿಲ್ಲ.
ಕೊಳಕುತನದ ಕಾರಣಕ್ಕೆ ವಿದೇಶಿ ಕಂಪೆನಿಗಳು ಪ್ರತಿಭಾನ್ವಿತರನ್ನು ಸುಲಭವಾಗಿ ಭಾರತಕ್ಕೆ ಕರೆತರಲೂ ಸಾಧ್ಯವಾಗಲಾರದು. ಗಲೀಜು, ಅನೈರ್ಮಲ್ಯ ವ್ಯಕ್ತಿಯ ಆರೋಗ್ಯಕ್ಕೆ ಹಾನಿ ಉಂಟು ಮಾಡುವಂತೆ, ದೇಶದ ಅರ್ಥ ವ್ಯವಸ್ಥೆಗೂ ಗಂಡಾಂತರಕಾರಿಯಾಗಿ ಪರಿಣಮಿಸುತ್ತದೆ. ಮಾಲಿನ್ಯ ಮುಕ್ತ ನದಿಗಳು – ಪರಿಸರ, ಎಲ್ಲೆಡೆ ನೈರ್ಮಲ್ಯ, ಕಸದಿಂದ ಮುಕ್ತಿ, ಕಸದ ಮರು ಬಳಕೆಯು ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆ ದೂರ ಮಾಡುವುದಲ್ಲದೇ ಆರೋಗ್ಯಕರ ಮತ್ತು ಜನ ಸಮುದಾಯದ ನೆಮ್ಮದಿಯ ಮತ್ತು ಸಂತೃಪ್ತ ಜೀವನಕ್ಕೂ ಕಾರಣವಾಗುತ್ತದೆ. ಇದು ದೇಶವೊಂದರ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲೂ ನೆರವಾಗುತ್ತದೆ.
ಮೋದಿ ಅವರ ಅಮೆರಿಕ ಭೇಟಿ ಬಗ್ಗೆ ಪ್ರತಿಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷವು ರಾಜಕೀಯ ಕಾರಣಗಳಿಗೆ ಏನೇ ಟೀಕೆ ಮಾಡಲಿ, ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಒಳ್ಳೆಯ ಸಂದೇಶ ಇರುವುದನ್ನೂ ನಾವಿಲ್ಲಿ ಅಲ್ಲಗಳೆಯಲಿಕ್ಕಾಗದು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿನ ರಾಜಕೀಯ ಅಸ್ಥಿರತೆ, ಗೊಂದಲಗಳ ಪ್ರಯೋಜನ ಪಡೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣಕ್ಕೆ ಕಾರ್ಯೋನ್ಮುಖವಾಗಬೇಕಾಗಿದೆ.
ಬಂಡವಾಳ ಹೂಡಿಕೆದಾರರು ರಾಜಕೀಯ ಸ್ಥಿರತೆ ಮತ್ತು ಉನ್ನತ ನಾಯಕರಲ್ಲಿ ಪ್ರಾಮಾಣಿಕತೆ ಇರುವುದನ್ನು ಬಯಸುತ್ತಾರೆ. ರಾಜಕೀಯ ಸ್ಥಿರತೆಗೆ ಬೇಕಾಗುವ ಸ್ಪಷ್ಟ ಬಹುಮತ ಹೊಂದಿರುವ ಮತ್ತು ಒಳ್ಳೆಯ ಹೆಸರು ಹೊಂದಿರುವ ಸಿದ್ದರಾಮಯ್ಯ ಅವರು ದೂರಗಾಮಿ ಪರಿಣಾಮ ಬೀರುವ ಆಡಳಿತಾತ್ಮಕ ಮತ್ತು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಉತ್ತಮ ಆಡಳಿತ ನೀಡಲು ಪಾರದರ್ಶಕ, ನ್ಯಾಯೋಚಿತವಾದ ತ್ವರಿತ ನಿರ್ಧಾರಗಳನ್ನು ಕೈಗೊಳ್ಳಬೇಕು. ಮೂಲಸೌಕರ್ಯ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸುವುದರ ಜತೆಗೆ ನಗರ, ಪಟ್ಟಣ ಮತ್ತು ಪ್ರವಾಸಿ ತಾಣ-ಗಳನ್ನು ಕಸದಿಂದ ಮುಕ್ತಗೊಳಿಸಬೇಕಾಗಿದೆ. ಬಂಡವಾಳ ಹೂಡಿಕೆದಾರರು ಮತ್ತು ಪ್ರವಾಸಿಗರನ್ನು ಕರ್ನಾಟಕದತ್ತ ಚುಂಬಕ-ದಂತೆ ಸೆಳೆಯಲು ಸೂಕ್ತ ಕಾರ್ಯತಂತ್ರವನ್ನೂ ರೂಪಿಸಬೇಕಾಗಿದೆ. ಕಾಲ ಮಿಂಚುವ ಮೊದಲೇ ಕಾರ್ಯೋನ್ಮುಖವಾಗಲು ಸಿದ್ದರಾಮಯ್ಯ ಅವರು ಮರೆಯಬಾರದಷ್ಟೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.