ಬನ್ನೂರು: ಇಲ್ಲಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಇತಿಹಾಸ ಪ್ರಸಿದ್ಧ ವಡ್ಗಲ್ಲು ರಂಗನಾಥಸ್ವಾಮಿ ಬೆಟ್ಟದಲ್ಲಿ ಮೂಲ ಸೌಕರ್ಯಗಳಿಲ್ಲದೆ ಭಕ್ತರು ಪರದಾಡುವ ಸ್ಥಿತಿ ಬಂದಿದೆ. ಬೆಟ್ಟದಲ್ಲಿ ಕುಡಿಯುವ ನೀರಿಗೆ ಪರದಾಡುವಂತಾಗಿದ್ದು, ₨ 3 ಲಕ್ಷ ವೆಚ್ಚದಲ್ಲಿ ಕಟ್ಟಲಾಗಿರುವ ಎರಡು ತೊಂಬೆಗಳು ವ್ಯರ್ಥವಾಗಿ ನಿಂತಿವೆ. ಇದರಿಂದಾಗಿ ಜನ ನೀರಿಗಾಗಿ ಪರಿತಪಿಸುವಂತಾಗಿದೆ. ಈ ಸಮಸ್ಯೆ ಎಷ್ಟಿದೆ ಎಂದರೆ ಮೂಲ ವಿಗ್ರಹ ತೊಳೆಯಲು ಸಹ ಇಲ್ಲಿ ನೀರಲ್ಲ! ಮುಜರಾಯಿ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಇದು.
ದೇವಸ್ಥಾನದ ಸಮೀಪದಲ್ಲೇ ಬೃಹತ್ ಟ್ಯಾಂಕ್ ನಿರ್ಮಾಣವಾಗಿದ್ದರೂ ಕಳಪೆ ಕಾಮಗಾರಿಯಿಂದ ನೀರು ಸಂಗ್ರಹಣವಾಗಿಲ್ಲ. ಇದನ್ನರಿತ ಮಾಜಿ ಶಾಸಕಿ, ಹಾಲಿ ಜಿಲ್ಲಾ ಪಂಚಾಯಿತಿ ಸದಸ್ತೆ ಜೆ. ಸುನೀತಾ ವೀರಪ್ಪಗೌಡ ಅವರು ₨ 25 ಲಕ್ಷ ಅನುದಾನ ಬಿಡುಗಡೆ ಮಾಡಿ, ಶಾಶ್ವತ ಕುಡಿಯುವ ನೀರನ್ನು ನೀಡಲು ನೆರವಾದರು. ಆದರೆ, ಅದುಕೂಡ ನಿಸ್ಪ್ರಯೋಜಕವಾಗಿದೆ. ಟೆಂಡರ್ ಪಡೆದವರಿಗೆ ಬಿಲ್ ಪಾವತಿ ಮಾಡದ ಕಾರಣ ಈ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ರಥಸಪ್ತಮಿ: ಇದೆ ತಿಂಗಳ 25ರಂದು ರಥಸಪ್ತಮಿ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ ಇದವರೆಗೂ ಯಾವುದೇ ವ್ಯವಸ್ಥೆ ಮಾಡಿಲ್ಲ. ಹಬ್ಬದ ಪೂರ್ವ ಸಿದ್ಧತೆಯಂತೆ 24ರಿಂದಲೇ ಆಗಮಿಸುವ ಭಕ್ತಾದಿಗಳು ಇಲ್ಲಿಯೇ ಉಳಿದು 25ನೇ ತಾರೀಖಿನ ಸಂಜೆ 6 ಗಂಟೆಗೆ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ವಿವಿಧ ಊರುಗಳಿಂದ ಬರುವ ಭಕ್ತಾದಿಗಳಿಗೆ ವಸತಿ, ಶೌಚಾಲಯ, ನೀರು, ರಕ್ಷಣೆ, ಏನೂ ಇಲ್ಲ. ದೇವಾಲಯದ ಪ್ರಾಂಗಣವನ್ನು ಸ್ವಚ್ಛಗೊಳಿಸುವಂತ ಕಾರ್ಯ ಕೂಡ ಇನ್ನೂ ಆಗಿಲ್ಲ. ಇದರಿಂದ ಭಕ್ತರಲ್ಲಿ ಬೇಸರ ಮೂಡಿದೆ.
ಹದಗೆಟ್ಟ ರಸ್ತೆ: ಜ. 26ರಂದು ರಥ ಸಾಗುವ ದಾರಿ ಸಂಪೂರ್ಣವಾಗಿ ಮಣ್ಣಿನ ಸವಕಳಿಯಿಂದ ಹಾಳಾಗಿದೆ. ರಥ ಸಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಟ್ಟಕ್ಕೆ ಸಾಗುವಂತ ರಸ್ತೆಯ ಸ್ಥಿತಿಯೂ ಹೇಳತೀರದಷ್ಟು ಕೆಟ್ಟಿದೆ. ಸರಿಯಾಗಿ ಹಣ ಪಾವತಿ ಮಾಡದ ಕಾರಣದಿಂದಾಗಿ ಆಗಿಂದಾಗೆ ಬೆಟ್ಟದ ಮೇಲೆ ವಿದ್ಯುತ್ ಕಡಿತವಾಗುತ್ತಲೇ ಇರುತ್ತದೆ.
ಆರಕ್ಷಕ ಠಾಣೆಗೆ ಮಾಹಿತಿ ಇಲ್ಲ: ಬೆಟ್ಟದಲ್ಲಿ ಪೊಲೀಸ್ ಠಾಣೆ ಇಲ್ಲದ್ದರಿಂದ ಭಕ್ತರು ನೆಮ್ಮದಿಯಿಂದ ಇರುಲು ಸಾಧ್ಯವಾಗುತ್ತಿಲ್ಲ. ಬೆಟ್ಟದ ಸೇತುವೆಗೆ ರಕ್ಷಣಾಗೋಡೆ ಇಲ್ಲದ ಕಾರಣ ಪ್ರಯಾಣಿಕರಿಗೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ರಾತ್ರಿ ವಿದ್ಯುತ್ ಇಲ್ಲ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಸಂಚರಿಸುವುದು ಅಪಾಯವೆ.
ನ್ಯಾಯಾಲಯಕ್ಕೆ ಮೊರೆ: ದೇವಸ್ಥಾನಕ್ಕೆ ಅಗತ್ಯ ಸೌಕರ್ಯ ಕಲ್ಪಿಸದಿದ್ದರೆ ನ್ಯಾಯಾಲೆಯದ ಮೋರೆ ಹೋಗುತ್ತೇವೆ. ದೇವಾಲಯ ಹುಂಡಿಯನ್ನು ಒಡೆಯಲು ಬಿಡುವುದಿಲ್ಲ ಎನ್ನುತ್ತಾರ ದೇವಾಲಯದ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಅತ್ತಳ್ಳಿ ಶ್ರೀನಿವಾಸ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.