ತುಮಕೂರು: ಆರು ಮಂದಿಯ ಸಂಶೋಧನಾ ಪ್ರಬಂಧಗಳ ಮೌಲ್ಯಮಾಪನವನ್ನು ಎರಡು ತಿಂಗಳಲ್ಲೇ ಪೂರ್ಣಗೊಳಿಸಲಾಗಿದೆ.
ಪ್ರಬಂಧಗಳು ಸಲ್ಲಿಕೆಯಾದ ಎರಡು ತಿಂಗಳಲ್ಲೇ ಮೌಲ್ಯಮಾಪನ ಮುಗಿದು ಪಿಎಚ್.ಡಿ ಕೂಡ ನೀಡಲಾಗಿದೆ. ವಿ.ವಿ.ಯ ಪರೀಕ್ಷಾಂಗ ವಿಭಾಗಕ್ಕೆ ಸಲ್ಲಿಕೆಯಾಗುವ ಸಂಶೋಧನಾ ಮಹಾಪ್ರಬಂಧಗಳು ಮೊದಲಿಗೆ ಸಂಬಂಧಿಸಿದ ವಿಭಾಗೀಯ ಪರಿಷತ್ತಿನ ಸಭೆಯ ಮುಂದೆ ಬರಬೇಕು. ಆ ಸಭೆಯಲ್ಲಿ ಭಾಗವಹಿಸುವ ವಿಶ್ವವಿದ್ಯಾಲಯದ ಹೊರಗಿನ ಇಬ್ಬರು ತಜ್ಞರು ಅವುಗಳನ್ನು ಓದಿ ಪರಿಶೀಲಿಸಬೇಕು. ಪ್ರಬಂಧಗಳನ್ನು ಮೌಲ್ಯಮಾಪನಕ್ಕೆ ಕಳುಹಿಸಿಕೊಡಬಹುದೆಂಬ ತೀರ್ಮಾನಕ್ಕೆ ಬಂದ ನಂತರ ಆ ಕುರಿತ ವರದಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ.
ಪರೀಕ್ಷಾಂಗ ಕುಲಸಚಿವರು ಸಂಭಾವ್ಯ ಮೌಲ್ಯಮಾಪಕರ ಪಟ್ಟಿ ತಯಾರಿಸುತ್ತಾರೆ. ಕೊನೆಯಲ್ಲಿ ಕುಲಪತಿ, ಪರೀಕ್ಷಾಂಗ ಕುಲಸಚಿವರು ಸೇರಿ ಪ್ರತಿ ಪ್ರಬಂಧಕ್ಕೂ ಇಬ್ಬರು ಮೌಲ್ಯಮಾಪಕರನ್ನು ನಿಯುಕ್ತಿಗೊಳಿಸಿ ಮೌಲ್ಯಮಾಪನ ಮಾಡಿಕೊಡುವಂತೆ ಕೋರಿ ಅವರಿಗೆ ಪತ್ರ ಬರೆಯುತ್ತಾರೆ. ಆ ಮೌಲ್ಯಮಾಪಕರು ಒಪ್ಪಿಗೆ ನೀಡಿದರೆ ಮಾತ್ರ ಅವರಿಗೆ ಪ್ರಬಂಧ ಕಳುಹಿಸಬೇಕು. ಮಹಾಪ್ರಬಂಧಗಳು ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಿದ್ದರೆ ಒಬ್ಬ ಮೌಲ್ಯಮಾಪಕ ಹೊರದೇಶದವರಾಗಿರಬೇಕೆಂಬ ನಿಯಮವಿದೆ.
ವಿವಾದಿತ ಈ ಆರು ಮಂದಿಯಲ್ಲಿ ಐವರ ಪ್ರಬಂಧಗಳು ಸಲ್ಲಿಕೆಯಾದ ೬೬ ದಿನಗಳಲ್ಲೇ ವಿಶ್ವವಿದ್ಯಾಲಯದ ಎಲ್ಲ ವಿಧಿ-ವಿಧಾನಗಳನ್ನು ನಡೆಸಲಾಗಿದೆ. ಎಸ್.ಜೆ.ಪ್ರಶಾಂತ್ ಪ್ರಬಂಧದ ಪ್ರಕ್ರಿಯೆಗಳೆಲ್ಲಾ ಕೇವಲ ೪೯ ದಿನದಲ್ಲೇ ಮುಗಿದಿವೆ.
ಸವಿತಾ ಒಬ್ಬರ ಪ್ರಬಂಧ ಹೊರತುಪಡಿಸಿ ಉಳಿದವರೆಲ್ಲರ ಪ್ರಬಂಧಗಳ ಮೌಲ್ಯಮಾಪನ ರಾಜ್ಯದಲ್ಲೇ ನಡೆಸಲಾಗಿದೆ. ಭೌತಶಾಸ್ತ್ರ ಸಂಶೋಧನಾ ಪ್ರಬಂಧಗಳು ಮೌಲ್ಯಮಾಪನಕ್ಕಾಗಿ ಯಾವ ವಿದೇಶಿ ವಿದ್ವಾಂಸರ ಮುಂದೆಯೂ ಹೋಗಿಲ್ಲ. ಸುನೀತಾ ಅವರ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯದ ಯು.ಎಸ್.ರಾಯ್ಕರ್ ಮತ್ತು ಕೊಲ್ಹಾಪುರದ ಶಿವಾಜಿ ಯೂನಿವರ್ಸಿಟಿ ಪ್ರಾಧ್ಯಾಪಕ ವಿಜಯ್ ಫುಲ್ಹಾರಿ ಮೌಲ್ಯಮಾಪನ ಮಾಡಿದ್ದಾರೆ.
ಪ್ರೇಮ್ ಕುಮಾರ್ ಅವರ ಪ್ರಬಂಧವನ್ನು ಬೆಂಗಳೂರು ವಿ.ವಿ. ಸಹ ಪ್ರಾಧ್ಯಾಪಕ ಡಾ.ಬಿ.ರುದ್ರಸ್ವಾಮಿ ಮತ್ತು ಆಂಧ್ರಪ್ರದೇಶದ ಯೋಗಿ ವೇಮನ ವಿಶ್ವವಿದ್ಯಾಲಯದ ಡಾ.ವೆಂಕಟಸ್ವಾಮಿ ಮಾಡಿದ್ದಾರೆ.
ಪದವಿ ಪ್ರದಾನಕ್ಕೂ ಮುನ್ನ ಮುಕ್ತ ಮೌಖಿಕ ಪರೀಕ್ಷೆ ನಡೆಯಬೇಕು. ಪ್ರಬಂಧ ಮೌಲ್ಯಮಾಪಕರಲ್ಲಿ ಕನಿಷ್ಠ ಒಬ್ಬರಾದರೂ ಈ ಪರೀಕ್ಷೆಗೆ ಹಾಜರಿರಲೇಬೇಕು. ಅಲ್ಲದೇ ಪರೀಕ್ಷೆಗೆ ಹಾಜರಾಗದ ಮೌಲ್ಯಮಾಪಕರು ಕಳುಹಿಸುವ ಲಿಖಿತ ಪ್ರಶ್ನೆಗಳಿಗೆ ಪರೀಕ್ಷೆಯಲ್ಲಿ ಅಭ್ಯರ್ಥಿ ಉತ್ತರ ನೀಡಬೇಕು. ಈ ಪ್ರಕ್ರಿಯೆ ನಂತರ ಸಂಶೋಧನಾರ್ಥಿಗೆ ಪಿಎಚ್.ಡಿ ಪದವಿ ನೀಡಬಹುದು ಎಂದು ಶಿಫಾರಸು ಮಾಡಲಾಗುತ್ತದೆ.
ಸಿಂಡಿಕೇಟ್ ಸಾಮಾನ್ಯ ಸಭೆಯ ಅನುಮೋದನೆ ಬಳಿಕ ತಾತ್ಪೂರ್ತಿಕ ಪದವಿ ಪ್ರಮಾಣ ಪತ್ರವನ್ನು ಅಂಚೆಯಲ್ಲಿ ರವಾನಿಸಲಾಗುತ್ತದೆ. ಆದರೆ, ಮುಕ್ತ ಪರೀಕ್ಷೆ ನಡೆದ ದಿನವೇ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೆ ಈ ಆರು ಮಂದಿಗೂ ತಾತ್ಪೂರ್ತಿಕ ಪದವಿ ಪತ್ರ ನೀಡಲಾಗಿದೆ. ಕುಲಪತಿ ಶರ್ಮಾ ಅಧಿಕಾರಾವಧಿ ಮುಗಿಯಲು ಕೇವಲ ಐದು ದಿನ ಮಾತ್ರ ಬಾಕಿ ಇತ್ತು.
ಪ್ರೇಮ್ಕುಮಾರ್, ಸುನೀತಾಗೆ ಮಾರ್ಗದರ್ಶಕರಾದ ಡಾ.ಎಚ್.ನಾಗಭೂಷಣ್ ಮತ್ತು ಕುಲಪತಿ ಎಸ್.ಸಿ.ಶರ್ಮಾ ಜಂಟಿಯಾಗಿ 30 ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಶರ್ಮಾ, ಸುನೀತಾ, ನಾಗಭೂಷಣ್ ಮೂವರೂ ಸೇರಿಕೊಂಡು ಐದು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಕುಲಪತಿಯೊಬ್ಬರ ಜೊತೆ ಸೇರಿ ಸಂಶೋಧನಾ ವಿದ್ಯಾರ್ಥಿ ಪ್ರಬಂಧ ಪ್ರಕಟಿಸುವುದು ಯಾವ ವಿ.ವಿ.ಯಲ್ಲೂ ಕಾಣದು. ಈ ಎಲ್ಲಾ ನಂಟುಗಳೇ ಪಿಎಚ್.ಡಿ ನೀಡುವಲ್ಲಿ ಕೆಲಸ ಮಾಡಿವೆ ಎಂಬ ಆರೋಪಗಳಿವೆ.
ಯುಜಿಸಿ ನಿಯಮಾವಳಿ ಉಲ್ಲಂಘಿಸಿ 2012ರಲ್ಲಿ ನಾಗಭೂಷಣ್ ಅವರನ್ನು ಸಹ ಪ್ರಾಧ್ಯಾಪಕರಾಗಿ ನೇರ ನೇಮಕ ಮಾಡಿಕೊಳ್ಳಲಾಗಿದೆ. ನಿಯಮಾವಳಿಗಳ ಪ್ರಕಾರ ಸಹಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯಬೇಕಿದ್ದರೆ ಅವರಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ 8 ವರ್ಷಗಳ ಪಾಠ ಮಾಡಿದ ಬೋಧನಾ ಅನುಭವ ಇರಬೇಕು. ಆದರೆ ವಿಶ್ವವಿದ್ಯಾಲಯದ ಅಂತರ್ಜಾಲ ತಾಣದಲ್ಲಿ ಇರುವ ನಾಗಭೂಷಣ್ ಸ್ವ-ವಿವರದ ಪ್ರಕಾರ ಸಹ ಪ್ರಾಧ್ಯಾಪಕರಾಗುವ ಮೊದಲು ಅವರಿಗಿದ್ದದ್ದು ಒಟ್ಟು ೬ ವರ್ಷಗಳ ಸೇವಾ ಅನುಭವ ಮಾತ್ರ.
ಶರ್ಮಾ ಅವರೊಂದಿಗೆ ನಾಗಭೂಷಣ್ ನಿಕಟ ಸಂಪರ್ಕ ಹೊಂದಿದ್ದರು. ಆ ಕಾರಣಕ್ಕಾಗಿ ಎಂಟೇ ತಿಂಗಳಲ್ಲಿ ಶರ್ಮಾ ಅವರ ಆಪ್ತರಾದ ಈ ಇಬ್ಬರು ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಮಾಡಿದ್ದಾರೆ. ಇದಕ್ಕೆ ಪ್ರತಿ ಉಪಕಾರವೆಂಬಂತೆ ಶರ್ಮಾ ಅಧಿಕಾರದಿಂದ ನಿರ್ಗಮಿಸುವ ಮುನ್ನ ನಾಗಭೂಷಣ್ ಅವರಿಗೆ ಡಿಎಸ್ಸಿ ಪದವಿ ನೀಡಿದ್ದಾರೆ.
ಡಾಕ್ಟರೇಟ್ ಪಡೆದಿರುವ ಕೇಶವ ಪ್ರಸನ್ನ ಮತ್ತು ತುಂಗಾಮಣಿ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈಗ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಶರ್ಮಾ ಇದೇ ಕಾಲೇಜಿನಲ್ಲಿ ನಿರ್ದೇಶಕರಾಗಿದ್ದಾರೆ.
ಕೇಶವ ಪ್ರಸನ್ನ, ತುಂಗಾಮಣಿ ಅವರ ಸಂಶೋಧನೆಯೇ ಅರೆಕಾಲಿಕವಾಗಿತ್ತು. ಇಬ್ಬರೂ ವಿ.ವಿ. ವಿಜ್ಞಾನ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸಂಬಳ ತೆಗೆದುಕೊಂಡಿದ್ದಾರೆ ಹಾಗೂ ವಿ.ವಿ. ಕನ್ನಡ ಭಾಷಾಭಿವೃದ್ಧಿ ಯೋಜನೆಯಿಂದ ಮಾಸಿಕ ವೇತನನ್ನೂ ಪಡೆದಿದ್ದಾರೆ.
ಮುಂದಿನ ಭಾಗದಲ್ಲಿ: ನಲವತ್ತೊಂಬತ್ತೇ ದಿನಗಳಲ್ಲಿ ಪಿಎಚ್.ಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.