ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆ ಮೂರು ದಿನಗಳ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಶಿವಸೇನಾ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಈ ಮೂಲಕ ಬಿಜೆಪಿ–ಶಿವಸೇನೆ ನಡುವಣ ಶೀತಲ ಸಮರ ಬಹಿರಂಗ ವೇದಿಕೆ ಅಲಂಕರಿಸಿದೆ.
ಬಹುಮತ ಸಾಬೀತು ಪಡಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಈ ಅಧಿವೇಶನದಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ.
ಕೇಸರಿ ಪಟಕಾ ಧರಿಸಿ ವಿಧಾನಸಭೆಗೆ ಬಂದ ಶಿವಸೇನಾ ಶಾಸಕರು, ವಿರೋಧ ಪಕ್ಷದ ಸ್ಥಾನಗಳಲ್ಲಿ ಆಸೀನರಾದರು. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನಾ ಎರಡನೇ ಬಹುದೊಡ್ಡ ಪಕ್ಷವಾಗಿರುವುದರಿಂದ ನಿಯಮದಂತೆ ಅವರಿಗೆ ಅಲ್ಲಿಯೇ ಆಸನಗಳನ್ನು ನಿಗದಿಪಡಿಸಲಾಗಿತ್ತು.
ಸೋಮವಾರ ಬೆಳಿಗ್ಗೆ 11ಗಂಟೆಗೆ ವಿಧಾನಸಭೆಯ ಕಲಾಪ ಆರಂಭಗೊಳ್ಳುವ ಮೊದಲು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಶಾಸಕ ಜೀವ ಪಾಂಡು ಗವಿತ್ ಅವರು ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ಸ್ವೀಕರಿಸಿದರು. ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ಅವರು ಗವಿತ್ ಅವರಿಗೆ ಅಧಿಕಾರ ಗೌಪ್ಯತೆ ಬೋಧಿಸಿದರು.
ಬಳಿಕ ಗವಿತ್ ಅವರು ಹೊಸದಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ನಾಳೆಯವರೆಗೂ ಪ್ರಮಾಣ ವಚನ ಬೋಧಿಸುವ ಕಾರ್ಯ ನಡೆಯಲಿದ್ದು, ಅಧಿವೇಶನದ ಕೊನೆಯ ದಿನ ನವೆಂಬರ್ 12ರಂದು ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಪಕ್ಷವೂ ಅಭ್ಯರ್ಥಿಯನ್ನು ನಿಲ್ಲಿಸುವ ಸಾಧ್ಯತೆಗಳಿವೆ ಎಂದು ಶಿವಸೇನೆ ಮೂಲಗಳು ಹೇಳಿವೆ.
ಶಾಸಕರಾಗಿ ಪ್ರಮಾಣ ಸ್ವೀಕರಿಸುವ ಮೊದಲು ಕೆಲವರು ದೇವರನ್ನು ಪ್ರಾರ್ಥಿಸಿದರೆ ಇನ್ನು ಕೆಲವರು ‘ಜೈ ವಿದರ್ಭ’ ಎಂದರು. ಮತ್ತೆ ಕೆಲವರು ‘ನಮೋ’ ಜಪ ಮಾಡಿದರು!