ಮಂಗಳೂರು: ಸಂದೇಶ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ’ಗೆ ಈ ಬಾರಿ ಸಾಹಿತಿ ವೈದೇಹಿ ಅವರು ಆಯ್ಕೆಯಾಗಿದ್ದಾರೆ. ಸಂದೇಶ ಚಲನಚಿತ್ರ ಪ್ರಶಸ್ತಿಯನ್ನು ನಿರ್ದೇಶಕ ಪಿ.ಶೇಷಾದ್ರಿ ಅವರಿಗೆ ನೀಡಲಾಗುವುದು.
‘ಸಂದೇಶ ಪ್ರಶಸ್ತಿ–2014’ ಪ್ರದಾನ ಸಮಾರಂಭ ಜ. 15 ರಂದು ಸಂಜೆ 5.30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿಸೋಜ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿರಿಲ್ ಜೆ.ಸಿಕ್ವೇರಾ ಅವರಿಗೆ ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ, ಲಲಿತಾ ರೈ (ತುಳು ಸಾಹಿತ್ಯ), ರಂಗಾಯಣದ ಮಾಜಿ ಅಧ್ಯಕ್ಷ ಡಾ.ಬಿ.ವಿ. ರಾಜಾರಾಮ್ (ಮಾಧ್ಯಮ), ಅಂಕಣಕಾರ ಅಬ್ದುಲ್ ರಶೀದ್ (ಪತ್ರಿಕೋದ್ಯಮ), ಲಾರೆನ್ಸ್ ಸಲ್ಡಾನ (ಕೊಂಕಣಿ ಸಂಗೀತ), ಐರಿನ್ ಮಸ್ಕರೇನಸ್ (ಉತ್ತಮ ಶಿಕ್ಷಕಿ) ಹಾಗೂ ವೈಟ್ ಡಾವ್ಸ್ ಸಂಸ್ಥೆಗೆ (ವಿಶೇಷ ಪ್ರಶಸ್ತಿ ) ನೀಡಿ ಗೌರವಿಸಲಾಗುವುದು ಎಂದರು. ಪ್ರಶಸ್ತಿಯು ತಲಾ ₨ ಹತ್ತು ಸಾವಿರ ಒಳಗೊಂಡಿದೆ.