ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ಪೂಜೆ ಪಕ್ಷಕ್ಕೆ ಮಾರಕ: ಜಸ್ವಂತ್

Last Updated 25 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಬಾರ್ಮೇರ್‌ (ಪಿಟಿಐ): ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧದ ವಾಗ್ದಾಳಿ­ಯನ್ನು ಇನ್ನಷ್ಟು ತೀವ್ರಗೊಳಿಸಿ­ರುವ ಬಂಡಾಯ ಎದ್ದಿರುವ ಬಿಜೆಪಿ ನಾಯಕ ಜಸ್ವಂತ್‌ ಸಿಂಗ್ ‘ವ್ಯಕ್ತಿಯ ವೈಭವೀ­ಕರಣ’ ಪ್ರಜಾಪ್ರಭುತ್ವ ಮತ್ತು ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಬಾರ್ಮೇರ್‌ ಲೋಕಸಭಾ ಕ್ಷೇತ್ರ­ದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಒಂದು ದಿನದ ನಂತರ ಮಾತನಾಡಿದ ಅವರು ‘ಒಬ್ಬ ವ್ಯಕ್ತಿಯನ್ನು ಕೇಂದ್ರವಾಗಿ­ರಿಸಿ­ಕೊಂಡು ಎಲ್ಲವನ್ನೂ ನಡೆಸುವುದು ಸರಿಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ’ ಎಂದು ಅಭಿಪ್ರಾಯ­ಪಟ್ಟಿದ್ದಾರೆ.

‘ಬಹುಶಃ ಯಾವುದೋ ಯೋಜನೆ ಅನ್ವಯ ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್ ನನ್ನನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುತ್ತಿದ್ದಾರೆ. ನನ್ನನ್ನು ವಂಚಿಸಲಾಗಿದೆ ಮತ್ತು ಅವ­ಮಾನಿ­ಸ­ಲಾಗಿದೆ. ನನಗೆ ನಿರಾಶೆ­ಯಾ­ಗಿದೆ. ಆದರೆ ನಾನು ಪಕ್ಷ ತೊರೆಯುವು­ದಿಲ್ಲ. ಅವರು ಬೇಕಿದ್ದರೆ ಉಚ್ಚಾಟಿಸಲಿ’ ಎಂದು ಜಸ್ವಂತ್‌  ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಒಂದು ವಾರದ ಹಿಂದೆ ಬಿಜೆಪಿ ಸೇರಿರುವ ಸೋನಾರಾಂ ಚೌಧರಿ ಅವರಿಗೆ ಬಾರ್ಮೇರ್‌ ಲೋಕ­ಸಭಾ ಕ್ಷೇತದ ಟಿಕೆಟ್‌ ನೀಡಿರುವ ಪಕ್ಷದ ನಿರ್ಧಾರ ವಿರೋಧಿಸಿ ಜಸ್ವಂತ್‌ ಬಂಡಾಯ ಎದ್ದಿದ್ದಾರೆ.

ರಾಜೆ ತಿರುಗೇಟು: ಪಕ್ಷ ಮತ್ತು ಅದರ ಅಧ್ಯಕ್ಷ ರಾಜನಾಥ್‌ ಸಿಂಗ್‌ ತೆಗೆದು­ಕೊ­ಳ್ಳುವ ನಿರ್ಧಾರಗಳನ್ನು ಒಪ್ಪಿ­ಕೊಳ್ಳುವ ಹವ್ಯಾಸವನ್ನು ನಾಯಕರು ಬೆಳೆಸಿಕೊಳ್ಳಬೇಕು ಎಂದು ಹೇಳುವ ಮೂಲಕ ಜಸ್ವಂತ್‌ ಅವರಿಗೆ ರಾಜಸ್ತಾನ ಮುಖ್ಯ­ಮಂತ್ರಿ ವಸುಂಧರಾ ರಾಜೆ ತಿರುಗೇಟು ನೀಡಿದರು.

ಬಾರ್ಮೇರ್‌ ಬಿಜೆಪಿ ಅಭ್ಯರ್ಥಿ ಪರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ‘ಪ್ರತಿಯೊಬ್ಬರೂ ಪಕ್ಷದ ನಿರ್ಧಾರವನ್ನು ಸ್ವೀಕರಿಸಬೇಕು ಮತ್ತು ಪಕ್ಷ ಬಿಡಬಾರದು’ ಎಂದು ಜಸ್ವಂತ್‌ ಹೆಸರು ಪ್ರಸ್ತಾಪಿಸದೆ ವಸುಂಧರಾ ರಾಜೆ ಹೇಳಿದರು.

ಸೋನಾರಾಂ ನಾಮಪತ್ರ
ಈ ಮಧ್ಯೆ, ಬಾರ್ಮೇರ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋನಾರಾಂ ಅವರು ಮಂಗಳವಾರ ಇಲ್ಲಿ ನಾಮಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿ ಭಾನು ಪ್ರಕಾಶ್‌ ಅವರಿಗೆ ಎರಡು ಸೆಟ್‌ ನಾಮಪತ್ರಗಳನ್ನು ನೀಡಿದರು.

ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಬೆಂಬಲ­ದಿಂದಾಗಿ ಹಿರಿಯ ಮುಖಂಡ ಜಸ್ವಂತ್‌ ಸಿಂಗ್‌ ಬದಲಾಗಿ ಸೋನಾರಾಂ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ತಿರುಗಿ ಬಿದ್ದಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ಸೋನಾರಾಂ ಅವರು ತಮ್ಮ ಬೆಂಬಲಿಗ­ರೊಂದಿಗೆ ಕಳೆದ ವಾರ ಬಿಜೆಪಿ ಸೇರಿದ್ದರು.

ಸುಷ್ಮಾ–ರಾಜನಾಥ್‌ ಭಿನ್ನ ಹೇಳಿಕೆ
ನವದೆಹಲಿ (ಪಿಟಿಐ):
ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿರುವ ಪಕ್ಷದ ಅಧ್ಯಕ್ಷ ರಾಜನಾಥ್‌ ಸಿಂಗ್‌, ಜಸ್ವಂತ್‌ ಸಿಂಗ್‌ ಅವರಿಗೆ ಟಿಕೆಟ್‌ ನಿರಾಕರಿಸುವ ನಿರ್ಧಾರವನ್ನು ಕೇಂದ್ರ ಚುನಾವಣಾ ಸಮಿತಿಯಲ್ಲಿ ಚರ್ಚಿಸಿ ಕೈಗೊಳ್ಳಲಾಗಿದೆ. ಕೆಲವು ರಾಜಕೀಯ ಅನಿವಾರ್ಯತೆ­ಗಳಿಂದ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.

ಜಸ್ವಂತ್‌ ಅವರಿಗೆ ಟಿಕೆಟ್‌ ನಿರಾಕರಿಸುವ ನಿರ್ಧಾರ ಪಕ್ಷದ ಕೇಂದ್ರ ಚುನಾವಣಾ ಸಮಿತಿಯದ್ದಲ್ಲ ಎಂದು ಟಿಕೆಟ್‌ ನಿರಾಕರಣೆಯಾದ ನಂತರ ಸುಷ್ಮಾ ಸ್ವರಾಜ್‌ ಹೇಳಿದ್ದರು.

ಜಸ್ವಂತ್‌ ಅವರಿಗೆ ಟಿಕೆಟ್‌ ನೀಡಬೇಕೆಂಬುದೇ ಪ್ರತಿಯೊಬ್ಬರ ಆಕಾಂಕ್ಷೆ­ಯಾಗಿದ್ದರೂ ಟಿಕೆಟ್‌ ನೀಡುವುದು ಸಾಧ್ಯವಾಗಲಿಲ್ಲ. ಇದರಿಂದ  ತಾವು ಸೇರಿದಂತೆ ಪಕ್ಷದ ನಾಯಕರಿಗೆ ನೋವಾಗಿದೆ ಎಂದು ರಾಜನಾಥ್‌ ತಿಳಿಸಿದ್ದಾರೆ. ‘ಅಸಾಧಾರಣ ಸಂದರ್ಭಗಳಲ್ಲಿ ಅಸಾಧಾರಣ ನಿರ್ಧಾರಗಳನ್ನು ಕೈಗೊಳ್ಳ­ಲಾ­ಗುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT