ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲ್ಮಲೆಯ ಶೋಕವಿದು

Last Updated 22 ಜೂನ್ 2015, 19:30 IST
ಅಕ್ಷರ ಗಾತ್ರ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಒಳಗೊಳಗೆ ಹರಿಯುವವಳು
ಜೀವ ಹಿಂಡಿ ಹಿಪ್ಪೆಮಾಡಿ
ಒಳಗೊಳಗೇ ಕೊರೆಯುವವಳು
ಸದಾ ಗುಪ್ತ ಗಾಮಿನಿ
ನನ್ನ ಶಾಲ್ಮಲಾ...
ಹಸಿರು ಮುರಿವ ಎಲೆಗಳಲ್ಲಿ
ಬಸಿರ ಬಯಕೆ ಒಸರುವವಳು
ಭೂಗರ್ಭದ ಮೌನದಲ್ಲಿ
ಜುಮ್ಮೆನುತ ಬಳಕುವವಳು...
ಕವಿ ಚಂದ್ರಶೇಖರ ಪಾಟೀಲ ಅವರು ಕಾವ್ಯದ ಮೂಲಕ ಶಾಲ್ಮಲಾ ನದಿಯನ್ನು ಬಣ್ಣಿಸಿರುವುದು ಹೀಗೆ.

ಸಹೃದಯನ ಮನದಲ್ಲಿ ಅಪಾರ ಪ್ರೀತಿ, ಭಕ್ತಿ ಹುಟ್ಟುವ ಹಾಗೆ, ಕವಿ ಕಾವ್ಯದ ಸ್ಮರಣೆಗೆ ಕಾರಣವಾದ ಆ ನದಿ ಈಗ ಎಲ್ಲಿದೆ, ಹೇಗಿದೆ ಎಂದು ಹುಡುಕಿಕೊಂಡು ಹೋದರೆ ಆಘಾತ ಕಟ್ಟಿಟ್ಟ ಬುತ್ತಿ!

ಉತ್ತರ ಭಾರತದ ಸರಸ್ವತಿ ನದಿಯ ಹಾಗೆ ದಕ್ಷಿಣದಲ್ಲಿಯೂ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನದಿ ಈ ಶಾಲ್ಮಲೆ. ಅದು ಧಾರವಾಡದ ಸಪ್ತಸಾಲು ಗುಡ್ಡಗಳ ನಡುವೆ ಪ್ರಶಾಂತವಾಗಿ ಹರಿಯುತ್ತಿದೆ. ಶಾಂತವಾಗಿ ಮಲೆಗಳ ನಡುವೆ ಹರಿಯುವುದರಿಂದಾಗಿಯೇ ಈ ನದಿಗೆ ಶಾಂತ+ಮಲೆ= ಶಾಂತ್ಮಲೆ=ಶಾಲ್ಮಲೆ ಎಂಬ ಹೆಸರು.

ಒಂದೊಮ್ಮೆ ಸಂಪದ್ಭರಿತವಾಗಿ ಮೈತುಂಬಿಕೊಂಡು ಹರಿಯುತ್ತಿದ್ದಳು ಈ ಶಾಲ್ಮಲೆ. ಇದೇ ಕಾರಣಕ್ಕೆ ಮಹರ್ಷಿ ಅಗಸ್ತ್ಯ ಕೂಡ ಇಲ್ಲಿ ತಪಗೈದಿದ್ದರು. ಅವರ ತಪಸ್ಸಿನ ಫಲವಾಗಿ ಇಲ್ಲಿ ಒಂದು ಲಿಂಗವು ಉದ್ಭವವಾಗಿ ಅದಕ್ಕೆ ಅಗಸ್ತ್ಯ ಮಹರ್ಷಿ ದಿನವೂ ಪೂಜಿಸುತ್ತಿದ್ದರು.

ಮುಂದೆ ಈ ಸ್ಥಳದ ಮಹಿಮೆ ತಿಳಿದ ಮಹಾಶಿಲ್ಪಿ ಜಕ್ಕಣಾಚಾರಿ ಕಲ್ಲಿನ ಭವ್ಯವಾದ ದೇವಾಲಯವನ್ನು ಈ ಲಿಂಗಕ್ಕೆ ಕಟ್ಟಿ ಅಗಸ್ತ್ಯತೀರ್ಥ ನಿರ್ಮಿಸಿದನೆಂದು ಐತಿಹ್ಯ. ಹೀಗೆ ನಿರ್ಮಾಣವಾದ ಈ ಪುರಾತನ ದೇವಾಲಯ ಇಂದು ಯಾತ್ರಾಸ್ಥಳವಾಗಿ ಪರಿಣಮಿಸಿದೆ. ಆಸ್ತಿಕರ ಪಾಲಿನ ಇಷ್ಟದೈವ ಸೋಮೇಶ್ವರನಿಂದ ಪ್ರಸಿದ್ಧಿ ಹೊಂದಿ ದಾನಿಗಳಿಂದಾಗಿ ಅಭಿವೃದ್ಧಿಯಾಗಿದೆ.

ಆದರೆ ಈ ದೇವಸ್ಥಾನದ ಹುಟ್ಟಿಗೆ ಕಾರಣವಾದ ಶಾಲ್ಮಲೆ ಮಾತ್ರ ಇಂದು ಕೊರಗುತ್ತಿದ್ದಾಳೆ. ಸೋಮೇಶ್ವರಕ್ಕೆ ಬರುವ ಭಕ್ತರು ಮೊದಲು ಶಾಲ್ಮಲೆಯಲ್ಲಿ ಮಿಂದು ದೇವರ ದರ್ಶನಕ್ಕೆ ಬರಬೇಕು. ಹೀಗಾಗಿ ಕೆಲವು ಆಸಕ್ತರು ಇತ್ತೀಚೆಗೆ ನದಿ ಉಗಮಸ್ಥಳದಲ್ಲಿ ಒಂದು ಸಿಮೆಂಟಿನ ಹೊಂಡ ಕಟ್ಟಿಸಿದ್ದಾರೆ. ಹರಿಯುವ ಶಾಲ್ಮಲೆಗೆ ಅಡ್ಡಲಾಗಿ ಎಂದೋ ಒಂದು ಕೆರೆಯನ್ನೂ ಕಟ್ಟಲಾಗಿದೆ. ಹೊಂಡದ ಸಮೀಪ ಮೂರ್ತಿಯನ್ನು ಸ್ಥಾಪಿಸಲಾಗಿದೆ.

ಇವೆಲ್ಲವುಗಳ ನಡುವೆ ಅದ್ಭುತ ಪ್ರವಾಸಿತಾಣ, ಯಾತ್ರಾಸ್ಥಳವಾಗಿ ಮನಸೆಳೆಯಬೇಕಾದ ಶಾಲ್ಮಲೆಯ ಈ ಸ್ಥಳ ಇಂದು ಹಂದಿಗಳು, ಬಿಡಾಡಿ ದನಗಳು ಉರುಳಾಡುವ ಕೊಚ್ಚೆಯಾಗಿದೆ. ಬಹಿರ್ದೆಸೆ ಮಾಡುವವರ, ವಾಹನಗಳನ್ನು ತೊಳೆಯುವವರ, ಒತ್ತುವರಿ ಮಾಡಿಕೊಳ್ಳುವವರ ಮುಕ್ತತಾಣವಾಗಿದೆ.

ನಯನ ಮನೋಹರವಾಗಿದ್ದ ಅದರ ಸುತ್ತಲಿನ ಗುಡ್ಡಗಳನ್ನು ಕೊರೆದು ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಸುತ್ತಲ ಬಡಾವಣೆಗಳ ಮಲಿನ ನೀರು ಶಾಲ್ಮಲೆಯ ಒಡಲನ್ನು ಸೇರಿ ಕಲುಷಿತಗೊಳಿಸಿದೆ. ನದಿಯ ಹರಿವಿನ ಹಾಗೂ ಅದರ ಬಯಲು ಪ್ರದೇಶವನ್ನು ಸಂರಕ್ಷಿಸುವ, ಅಭಿವೃದ್ಧಿಪಡಿಸುವ ಕೆಲಸವೂ ಇಲ್ಲವಾಗಿದೆ.

ಇದರಿಂದಾಗಿ, ಒಂದು ಕಾಲದಲ್ಲಿ ಧಾರವಾಡದ ಕವಿಗಳೆಲ್ಲರ ವಿಹಾರದ ಹಾಗೂ ಕಾವ್ಯ ಸ್ಫೂರ್ತಿಯ ತಾಣವಾಗಿದ್ದ ಶಾಲ್ಮಲೆ ಇಂದು ತನ್ನನ್ನು ಬಣ್ಣಿಸದ, ಗಮನಿಸದ ಜನರಿಂದಾಗಿ ಮುನಿಸಿಕೊಂಡಿದ್ದಾಳೆ. ಅಂದು ಅವಳನ್ನು ಹಾಡಿ ಹೊಗಳಿದ, ಅವಳ ಹೆಸರನ್ನು ಮನೆಗಳಿಗೆ, ಮಕ್ಕಳಿಗೆ ಇಟ್ಟು, ಅವಳ ಅಂಗಳದಲ್ಲಿ ಆಡಿದ ಕವಿಗಳ ಪೈಕಿ ಹೆಚ್ಚಿನವರು ಇಂದು ಧಾರವಾಡದಲ್ಲಿ ಉಳಿದಿಲ್ಲ.

ತನ್ನನ್ನು ಕೇಳುವವರು ಇಲ್ಲ ಎಂದೋ ಗೊತ್ತಿಲ್ಲ, ಮನನೊಂದಂತೆ ಕಾಣುವ ಶಾಲ್ಮಲೆ ಅಂತರ್ಮುಖಿಯಾಗಿ ಹರಿಯುತ್ತ ಹೋಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬಳಿ ಮತ್ತೆ ಬಹಿರ್ಮುಖ ತೋರಿಸಿದ್ದಾಳೆ. ಅಲ್ಲಿ ಹರಿಯುತ್ತ ತನ್ನ ಒಡಲೊಳಗಿನ ಶಿಲೆಗಳನ್ನು ಅವಳು ಅಲ್ಲಿ ‘ಸಹಸ್ರ ಲಿಂಗ’ಗಳಾಗಿ ರೂಪಿಸಿದ್ದಾಳೆ, ನಿತ್ಯ ಪೂಜಿತೆಯಾಗಿದ್ದಾಳೆ. ಆದರೆ ಧಾರವಾಡ ಹಾಗೂ ಶಾಲ್ಮಲೆಯ ಅನನ್ಯ ಬೆಸುಗೆಯ ಕೊಂಡಿ ಕಳಚುವ ಭಯ ಕಾಡುತ್ತಿದೆ.

ಜೀವ ಸಂಕುಲವ ಪೊರೆವ ನದಿಯ ಪಾತ್ರ ಒಂದು ನಾಗರಿಕತೆಯನ್ನು ಬೆಳೆಸುವುದಷ್ಟೆ ಅಲ್ಲ, ಆ ಪ್ರದೇಶದ ಜನರ ಸಾಂಸ್ಕೃತಿಕ ಸಮೃದ್ಧಿಯನ್ನು ತೋರಿಸುತ್ತದೆ. ಒಂದು ನದಿಯ ಕಾರಣದಿಂದಾಗಿಯೇ ಬದುಕಿನ ಹಲವಾರು ದಾರಿಗಳು ತೆರೆದುಕೊಳ್ಳುತ್ತವೆ. ಕೇವಲ ನಗರ ಸೌಂದರ್ಯ, ಪ್ರವಾಸೋದ್ಯಮ ಅಷ್ಟೇ ಅಲ್ಲ,  ಕೃಷಿ ಮತ್ತು ಸಸ್ಯ ಸಂಪತ್ತಿನ ವೃದ್ಧಿಗೆ ಅದು ಕಾರಣವಾಗುತ್ತದೆ.

ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ನೀಗುತ್ತದೆ. ಅಂತರ್ಜಲ ವೃದ್ಧಿಯಾಗುತ್ತದೆ. ಮತ್ಸ್ಯೋದ್ಯಮಕ್ಕೆ ಸಹಾಯವಾಗುತ್ತದೆ. ಹೀಗೆ ಒಂದು ಊರಿನ ಭಾವನಾತ್ಮಕ ಬೆಸುಗೆಯಷ್ಟೇ  ಅಲ್ಲ, ಅದು ಜೀವನದ ಹರಿವು ಆಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಶಾಲ್ಮಲೆಯ ಅಭಿವೃದ್ಧಿಯತ್ತ ದೃಷ್ಟಿ ಹರಿಸಿದರೆ ಒಳಿತು.

ಮಲಿನಗೊಂಡ ಗಂಗಾ ನದಿಯನ್ನು ಶುದ್ಧಗೊಳಿಸಲು 1980ರ ದಶಕದಿಂದ ಸುಮಾರು 30 ವರ್ಷಗಳ ಕಾಲ  ಸರ್ಕಾರಗಳು ಸುಮಾರು 26 ಸಾವಿರ ಕೋಟಿ ಹಣ ಖರ್ಚುಮಾಡಿವೆ. ಆ ಹಣ ಗಂಗೆಯ ಹಾಗೆ ಹರಿದು ಯಾರದ್ದೋ ಪಾಲಾಗಿ ಹೋಗಿದೆ. ಈಗ ಮತ್ತೆ ಸದ್ಯದ ಸರ್ಕಾರ ಗಂಗೆಯ ಒಡಲನ್ನು ಹಸನುಗೊಳಿಸಲು ‘ನಮಾಮಿ ಗಂಗೆ’ ಎಂಬ ಯೋಜನೆಯಡಿ ಸುಮಾರು ಎರಡು ಕೋಟಿ ಹಣ ಖರ್ಚುಮಾಡಲು ಹೊರಟಿದೆ.

ಕೇವಲ ಬೃಹತ್ ನದಿಗಳನ್ನಷ್ಟೇ ಶುದ್ಧಗೊಳಿಸಿದರೆ ಸಾಲದು, ಅದಕ್ಕೆ ಪೂರಕವಾಗಿ ಹರಿಯುವ ಎಲ್ಲ ಸಣ್ಣಪುಟ್ಟ ನದಿತೊರೆಗಳನ್ನು ಪರಿಶುದ್ಧಗೊಳಿಸಬೇಕಾಗಿದೆ. ‘ನಮಾಮಿ ಗಂಗೆ’ ಮಾದರಿಯಲ್ಲಿ ನಮ್ಮ ಸರ್ಕಾರ ಸಹ ಶಾಲ್ಮಲೆಯಂಥ ನದಿಗಳ ರಕ್ಷಣೆಗೆ ಮುಂದಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT