ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಸೇರಿದ ತಂತ್ರಜ್ಞರು, ಸಾಮಾನ್ಯರು...

Last Updated 9 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ಮೋದಿ ಅವರ ಸಂಪುಟಕ್ಕೆ ಭಾನುವಾರ ಸೇರ್ಪಡೆಯಾದ 21 ಸಚಿವರಲ್ಲಿ ನಾಲ್ವರಿಗೆ ಸಂಪುಟ ದರ್ಜೆ ಸ್ಥಾನ­ಮಾನ ಲಭಿಸಿದೆ. ಉಳಿದಂತೆ ಮೂವರಿಗೆ ಸ್ವತಂತ್ರ ನಿರ್ವಹಣೆ ರಾಜ್ಯಖಾತೆ ಲಭಿಸಿದ್ದರೆ 14 ಮಂದಿಗೆ ರಾಜ್ಯ ಖಾತೆ ಸಚಿವ ಸ್ಥಾನ ಸಿಕ್ಕಿದೆ. ವಿವಿಧ ವೃತ್ತಿಯವರು ಸಚಿವರಾಗಿದ್ದಾರೆ.

ಮೋದಿ ಪರಮಾಪ್ತ
ಮನೋಹರ ಪರಿಕ್ಕರ್‌ (59), ಎಂಜಿನಿಯರಿಂಗ್‌ ಪದವೀಧರ (ಮುಂಬೈ ಐಐಟಿ ): ಮೂರು ಬಾರಿ ಗೋವಾ ಮುಖ್ಯ­ಮಂತ್ರಿ. 2014ರ ಲೋಕಸಭಾ ಚುನಾವಣೆ ಮೋದಿ ನಾಯಕತ್ವದಲ್ಲಿ ನಡೆಯಲಿ ಎಂದು ಬಹಿರಂಗ ವಕಾಲತ್ತು ವಹಿಸಿದ ಮೊದಲ ಮುಖ್ಯಮಂತ್ರಿ. ಮೋದಿ ಪರಮಾಪ್ತರಲ್ಲಿ ಒಬ್ಬರು. ನಿಷ್ಕಳಂಕ ವ್ಯಕ್ತಿತ್ವ ಮತ್ತು  ಉತ್ತಮ ಆಡಳಿತ ನೀಡಿದ ಹೆಗ್ಗಳಿಕೆ. ಗೋವಾದಲ್ಲಿ ಬಿಜೆಪಿಗೆ ನೆಲೆ ಒದಗಿಸಿದ ಹಿರಿಮೆ.

ದಕ್ಷತೆಗೆ ಸಿಕ್ಕ ಪ್ರತಿಫಲ
ಸುರೇಶ್‌ ಪ್ರಭು (61), ವೃತ್ತಿ: ಚಾರ್ಟ್‌ರ್ಡ್‌ ಅಕೌಂಟಂಟ್‌, ಬ್ಯಾಂಕರ್‌: ವಾಜಪೇಯಿ ಸಂಪುಟ ದಲ್ಲಿ ಸಚಿವರಾಗಿದ್ದಾಗ ವಿದ್ಯುತ್‌ ಸಚಿವಾಲ ಯದ ಕಾರ್ಯನಿರ್ವಹಣೆಯಲ್ಲಿ ಹೊಸತನ ತಂದಿದ್ದಕ್ಕಾಗಿ ಪ್ರಶಂಸೆ. ದಕ್ಷ ಆಡಳಿತಗಾರ, ನಿಪುಣ ತಂತ್ರಗಾರ, ಮೋದಿ ಅವರ ವಿಶ್ವಾಸಿಕ, ಬೆಂಬಲಿಗ. ಬ್ರಿಸ್ಬೆನ್‌ನಲ್ಲಿ ಸದ್ಯವೇ ನಡೆಯಲಿರುವ ಜಿ–20 ಆರ್ಥಿಕ ಶೃಂಗಸಭೆಯಲ್ಲಿ ಮೋದಿ ಅವರಿಗೆ ನೆರವು ನೀಡಲು ನೇಮಕ.  ಸಂಪುಟ ಸೇರುವ ಮುನ್ನ ಶಿವಸೇನೆಯಿಂದ ಬಿಜೆಪಿಗೆ ಹಾರಿದ ಚಾಣಾಕ್ಷ.

ತಂತ್ರಗಾರನಿಗೆ ಕೊಡುಗೆ
ಜಗತ್‌ ಪ್ರಕಾಶ್‌ ನಡ್ಡಾ (53), ರಾಜ್ಯಸಭಾ ಸದಸ್ಯ, ಪದವೀಧರ: ಮೂಲತಃ ಬಿಹಾರದ ನಡ್ಡಾ ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ   ನಂಬುಗೆಯ ಬಲಗೈ ಬಂಟ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಪ್ರಬಲ ಪೈಪೋಟಿ ನೀಡಿದ್ದರು. ಕೊನೆಯ ಕ್ಷಣದಲ್ಲಿ ಷಾ ಅವರಿಗೆ ಬೆಂಬಲ ಸೂಚಿಸಿದ್ದರು. ಪಕ್ಷ ಹಾಗೂ ಸರ್ಕಾರದ   ನಿರ್ಣಯಗಳಲ್ಲಿ ಪ್ರಮುಖ ಪಾತ್ರ.  

ಅಲ್ಪಸಂಖ್ಯಾತರ ಮುಖ
ಮುಖ್ತಾರ್‌ ಅಬ್ಬಾಸ್ ನಕ್ವಿ (57), ರಾಜ್ಯ­ಸಭಾ ಸದಸ್ಯ, ಕಾನೂನು ಪದವೀಧರ:  ಬಿಜೆಪಿ ಯಲ್ಲಿರುವ ಪ್ರಮುಖ ಮುಸ್ಲಿಂ ಮುಖಂಡ.  ಅಲ್ಪಸಂಖ್ಯಾತರ ವಿಷಯದಲ್ಲಿ ಪಕ್ಷದ ನಿಲುವನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡ ನಾಯಕ. ಎರಡು ಬಾರಿ ರಾಜ್ಯ ಸಭಾ ಸದಸ್ಯ. ಸದ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಅನೇಕ ವರ್ಷಗಳಿಂದ ಪಕ್ಷದ ವಕ್ತಾರ. ವಾಜಪೇಯಿ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವರಾಗಿ ಅನುಭವ. 15 ವರ್ಷದ ನಂತರ ಮತ್ತೆ ಸಂಪುಟ ಸೇರ್ಪಡೆ. ಜೆಪಿ ಚಳವಳಿಯಿಂದ ರಾಜಕೀಯ ರಂಗಕ್ಕೆ.

ಲಾಲುಪ್ರಸಾದ್‌ ಬಂಟ
ರಾಮ್‌ ಕೃಪಾಲ್‌ ಯಾದವ್‌ (57), ಕ್ಷೇತ್ರ: ಪಾಟಲಿಪುತ್ರ, ಕಾನೂನು ಪದವೀಧರ: ಒಂದು ಕಾಲಕ್ಕೆ ಲಾಲು ಪ್ರಸಾದ್  ಅವರ ಹನುಮಾನ್ ಎಂದು ಖ್ಯಾತಿ.  ಲಾಲು ಒಳ್ಳೆಯ ಹಾಗೂ ಕೆಟ್ಟ ದಿನದಲ್ಲಿ ಜತೆಗಾರನಾಗಿದ್ದ ನಂಬುಗೆಯ ಬಲಗೈ ಬಂಟ.  ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದ್ದರಿಂದ  ಮುನಿಸಿಕೊಂಡು ಆರ್‌ಜೆಡಿ ತೊರೆದು ಬಿಜೆಪಿ ಸೇರ್ಪಡೆ. ಪಾಟಲಿಪುತ್ರ ಕೇತ್ರ­ದಲ್ಲಿ ಲಾಲು ಪುತ್ರಿ ಮಿಸಾ ಭಾರತಿ ಅವರನ್ನು ಸೋಲಿಸಿ ಮೊದಲ ಬಾರಿ ಸಂಸತ್ ಪ್ರವೇಶ. ಮೊದಲ  ಬಾರಿಗೆ ಮಂತ್ರಿಯಾಗುವ ಯೋಗ. ಮುಂಬ­­ರುವ ಬಿಹಾರ ವಿಧಾನಸಭಾ ಚುನಾವಣೆ ಯಲ್ಲಿ ಯಾದವ ಮತಬ್ಯಾಂಕ್‌ ದೃಷ್ಟಿಯಲ್ಲಿ­ಟ್ಟುಕೊಂಡು ಸಂಪುಟಕ್ಕೆ ಸೇರ್ಪಡೆ.

ಬಿಜೆಪಿಯ ಆಧುನಿಕ ಮುಖ
ರಾಜೀವ್ ಪ್ರತಾಪ್ ರೂಡಿ (52), ಕ್ಷೇತ್ರ: ಸರನ್‌, ಪಂಜಾಬ್‌ ವಿವಿಯ ಸ್ನಾತಕೋತ್ತರ ಪದವೀಧರ: ಲೋಕಸಭಾ ಚುನಾವಣೆಯಲ್ಲಿ ಸರನ್ ಕ್ಷೇತ್ರದಲ್ಲಿ ಲಾಲು ಪ್ರಸಾದ್ ಪತ್ನಿ ರಾಬ್ಡಿ ದೇವಿ ಅವರನ್ನು ಸೋಲಿಸಿದ ರೂಡಿ,  ಪೈಲಟ್‌ ಹಾಗೂ ಅಧ್ಯಾಪಕ ವೃತ್ತಿ ತೊರೆದು ರಾಜಕಾರಣಿಯಾದ­ವರು.  ಸುದ್ದಿವಾಹಿನಿಗಳಲ್ಲಿ  ಪದೇ ಪದೇ ಕಾಣಿಸಿಕೊಳ್ಳುವ ಆಧುನಿಕ  ಮುಖ.  ಮುಂಬರುವ ಬಿಹಾರ ಚುನಾವಣೆಯಲ್ಲಿ ಬಹು ಸಂಖ್ಯಾತ ರಜಪೂತ್‌ ಜನಾಂಗದ  ಮತಕ್ಕಾಗಿ ರೂಡಿಗೆ ಅವಕಾಶ. 2001ರಲ್ಲಿ ವಾಜಪೇಯಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಅನುಭವ.

ಹಗರಣ ಬಯಲಿಗೆಳೆದಿದ್ದಕ್ಕೆ ಪುರಸ್ಕಾರ
ಹಂಸರಾಜ್ ಗಂಗಾರಾಮ್‌ ಅಹೀರ್‌ (58),  ಕ್ಷೇತ್ರ: ಚಂದ್ರಾಪುರ (ಮಹಾರಾಷ್ಟ್ರ), ವೃತ್ತಿ: ಕೃಷಿ: ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ಆದ ಅವ್ಯವಹಾರವನ್ನು ಮೊದಲು ಬಯಲಿಗೆ ಎಳೆದವರು. ಈ ಅವ್ಯವಹಾರದ ಬಗ್ಗೆ ಸಂಸ ದೀಯ ಸಮಿತಿ ಹಾಗೂ ಕೇಂದ್ರ ಜಾಗೃತ ಆಯೋಗ (ಸಿವಿಸಿ)ಕ್ಕೆ ಅಹೀರ್‌ ದೂರು ನೀಡಿ ದ್ದರು. ಆನಂತರವೇ ಈ ಕುರಿತ ಸಿಬಿಐ ತನಿಖೆಗೆ ಆದೇಶಿಸಲಾಯಿತು.  14ನೇ ಲೋಕಸಭೆಯಲ್ಲಿ ಸ್ಪೀಕರ್ ಸೋಮನಾಥ ಚಟರ್ಜಿ ಇವರನ್ನು ಆದರ್ಶ ಸಂಸದರೆಂದು ಹೆಸರಿಸಿದ್ದರು.

ಮಂತ್ರಿಯಾದ ಕಾರ್ಮಿಕ
ವಿಜಯ್‌ ಸಂಪ್ಲಾ (53), ಕ್ಷೇತ್ರ: ಹೋಶಿಯಾರಪುರ, ವೃತ್ತಿ: ಕೊಳಾಯಿ ದುರಸ್ತಿ ಹತ್ತನೇ ತರಗತಿ: ಕೊಲ್ಲಿ ರಾಷ್ಟ್ರದಲ್ಲಿ  ಕೊಳಾಯಿ ದುರಸ್ತಿಗಾರರಾಗಿದ್ದ ಸಂಪ್ಲಾ ಇಂದು ಕೇಂದ್ರ ಸಚಿವ.  ಹೋಶಿಯಾರಪುರ ಮೀಸಲು ಕ್ಷೇತ್ರ ದಿಂದ ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾದ ಸಂಪ್ಲಾ ಅವರಿಗೆ ಮಂತ್ರಿಯಾಗುವ ಸುಯೋಗ.  ಮುಂಬ­ರುವ ಹರಿಯಾಣ ಚುನಾವಣೆಯಲ್ಲಿ ದಲಿತ ಮತಗಳನ್ನು ಬಾಚಿಕೊಳ್ಳುವ ಲೆಕ್ಕಾಚಾರ ದಿಂದ  ಸಂಪ್ಲಾ ಅವರಿಗೆ ಸಂಪುಟದಲ್ಲಿ ಅವಕಾಶ.

ವಿವಾದಾತ್ಮಕ ಗಿರಿರಾಜ್‌ ಸಿಂಗ್‌
ಕ್ಷೇತ್ರ: ನವಾಡ,  ವೃತ್ತಿ : ಕೃಷಿಕ: ವಿವಾದಾತ್ಮಕ ಹಾಗೂ ಉಗ್ರ ಹೇಳಿಕೆಗಳಿಂದ ಗುರುತಿಸಿ ಕೊಂಡಿ ರುವ ಗಿರಿರಾಜ್‌ಸಿಂಗ್‌ (62)ಬಿಹಾರದ ಭುಮಿಹಾರ್ ಸಮುದಾಯದ ಪ್ರತಿನಿಧಿಯಾಗಿ ಸಂಪುಟದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾ­ರದ ಸಂದರ್ಭದಲ್ಲಿ ಮೋದಿ ಅವರನ್ನು ಬೆಂಬಲಿ­ಸದೇ ಇರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂಬ ಹೇಳಿಕೆ ನೀಡಿದ್ದರು. ಮೋದಿ ಅವರನ್ನು ಬೆಂಬಲಿಸುತ್ತ ನಿತೀಶ್‌ ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.

ಹಾರ್ವರ್ಡ್‌ನಿಂದ ..
ಜಯಂತ್‌ ಸಿನ್ಹಾ (51),   ಕ್ಷೇತ್ರ: ಹಜಾರಿ ಬಾಗ್‌ (ಜಾರ್ಖಂಡ್‌) ವೃತ್ತಿ: ಹೂಡಿಕೆದಾರ, ನಿರ್ವಹಣಾ ಸಲಹೆಕಾರ, ಹಿರಿಯ ಬಿಜೆಪಿ ನಾಯಕ ಯಶವಂತ್‌ ಸಿನ್ಹಾ ಅವರ ಪುತ್ರ. ದೆಹಲಿ ಐಐಟಿ ಯಿಂದ ಪದವಿ ಪಡೆದು ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ನಿಂದ ಎಂಬಿಎ. 25 ವರ್ಷಗಳ ಕಾಲ ಕಾರ್ಪೊರೇಟ್‌ ಜಗತ್ತಿನ ಸಂಪರ್ಕ.

ಒಲಿಂಪಿಕ್‌ ಶೂಟರ್‌
ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ (43), ಕ್ಷೇತ್ರ: ಜೈಪುರ ಗ್ರಾಮೀಣ ವೃತ್ತಿ: ಮಾಜಿ ಯೋಧ, ಕ್ರೀಡಾಪಟು: 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಡಬಲ್‌ ಟ್ರ್ಯಾಪ್‌ ಶೂಟಿಂಗ್‌ ನಲ್ಲಿ ಬೆಳ್ಳಿ ಪದಕ, 23 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಕರ್ನಲ್‌ ಹುದ್ದೆಗೆ ಏರಿ ಸ್ವಯಂ ನಿವೃತ್ತಿ. ಸೆಪ್ಟೆಂಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆ.

ಬಿಜೆಪಿಯಲ್ಲಿ ಕೈಗೂಡಿದ ಆಸೆ
ಬೀರೇಂದರ್‌ ಸಿಂಗ್ (68), ಹರಿಯಾಣ: ಮೂಲತಃ ಕಾಂಗ್ರೆಸ್‌ನ ಪ್ರಭಾವಿ ಜಾಟ್‌ ಜನಾಂಗದ ನಾಯಕ. ರಾಜ್ಯಸಭಾ ಸದಸ್ಯರಾಗಿದ್ದ  ಅವರು ಎರಡನೇ ಅವಧಿಯಲ್ಲಿ ಮನೋಹನ್ ಸಿಂಗ್‌ ಸಂಪುಟ ಸೇರುವ ನಿರೀಕ್ಷೆ ಇತ್ತು. ಹರಿಯಾಣ ವಿಧಾನಸಭಾ ಚುನಾವಣಾ ವೇಳೆ ನಾಲ್ಕು ದಶಕಗಳ ಕಾಂಗ್ರೆಸ್‌ ಸಂಬಂಧ ಕಳಚಿ ಬಿಜೆಪಿ ಸೇರಿದ್ದರು.  ಕಾಂಗ್ರೆಸ್‌ನಲ್ಲಿ  ಕೈತಪ್ಪಿದ್ದ ಅವಕಾಶ ಬಿಜೆಪಿಯಲ್ಲಿ  ಕೈಗೂಡಿದೆ. 

ಪ್ರಾಧ್ಯಾಪಕ
ಸನ್ವರ್‌ಲಾಲ್‌ ಜಾಟ್‌ (59 ವರ್ಷ), ಕ್ಷೇತ್ರ: ಅಜ್ಮೇರ್‌  ವೃತ್ತಿ: ಪ್ರಾಧ್ಯಾಪಕ: ರಾಜಸ್ತಾನ ಮುಖ್ಯ­ಮಂತ್ರಿ ವಸುಂಧರಾ ರಾಜೆ ಅವರ ಆಪ್ತ ರಾಗಿರುವ ಸನ್ವರ್‌ಲಾಲ್‌ ಜಾಟ್‌ ರಾಜ ಸ್ತಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಚಿನ್‌ ಪೈಲಟ್‌ರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾದವರು. ಐದು ಬಾರಿ ಶಾಸಕರಾಗಿದ್ದರು. ಎಂ.ಕಾಂ. ಹಾಗೂ ಪಿಎಚ್‌.ಡಿ. ಮಾಡಿರುವ ಸನ್ವರ್‌ಲಾಲ್‌ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗಿದ್ದರು.

ನಾಯ್ಡು ಸ್ನೇಹಕ್ಕೆ ಪುರಸ್ಕಾರ
ಯಲಮಂಚಿಲಿ ಸತ್ಯನಾರಾಯಣ ಚೌಧರಿ (53), ರಾಜ್ಯಸಭಾ ಸದಸ್ಯ, ವೃತ್ತಿ: ಉದ್ಯಮಿ, ಎಂಜನಿಯರಿಂಗ್‌ ಪದವೀಧರ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜತೆಗಿನ ಸ್ನೇಹ ಈ ಉದ್ಯಮಿಗೆ ಕೇಂದ್ರ ಸಚಿವರ ಪಟ್ಟ ತಂದುಕೊಟ್ಟಿದೆ. ತೆಲುಗುದೇಶಂ ಪಕ್ಷದ ಮುಖ್ಯ ದೇಣಿಗೆದಾರ. ಹವ್ಯಾಸಿ ಛಾಯಾ­ಗ್ರಾಹಕ, ಹಳೆಯ ಕಾರುಗಳ ಸಂಗ್ರಾಹಕ.

ಸಂಗೀತಗಾರ
ಬಬುಲ್‌ ಸುಪ್ರಿಯೊ (44), ಕ್ಷೇತ್ರ: ಅಸಾನ್‌ ಸೋಲ್‌ (ಪ. ಬಂಗಾಳ) ವೃತ್ತಿ: ಹಾಡುಗಾರ: ತಮ್ಮ ಕಂಠದ ಮೂಲಕ ಖ್ಯಾತಿ ಗಳಿಸಬೇಕೆಂದು ಹೊರಟಿದ್ದ ಈ ಸಂಗೀತಗಾರರ ಮೇಲೆ ಪ್ರಧಾನಿ ನರೇಂದ್ರ ಮೋದಿ ಕೃಪಾಕಟಾಕ್ಷ ಬಿದ್ದಿದೆ. ರಾಜಕೀಯವಾಗಿ ಮಹತ್ವವಿರುವ ಪಶ್ಚಿಮ ಬಂಗಾಳದಿಂದ ಗೆದ್ದ ಇಬ್ಬರು ಬಿಜೆಪಿ ಸಂಸದರ ಪೈಕಿ ಬಬುಲ್‌ ಸಹ ಒಬ್ಬರು.

ರಾಜಕಾರಣಿಯಾದ ವೈದ್ಯ
ಮಹೇಶ್ ಶರ್ಮಾ (55), ಕ್ಷೇತ್ರ: ಗೌತಮ ಬುದ್ಧ ನಗರ, ಉತ್ತರ ಪ್ರದೇಶ, ವಿದ್ಯಾಭ್ಯಾಸ: ಎಂಬಿಬಿಎಸ್: ವೈದ್ಯ ವೃತ್ತಿಯಿಂದ ರಾಜಕಾರಣ ದತ್ತ ವಾಲಿದ ಶರ್ಮಾ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಲೋಕಸಭಾ ಕ್ಷೇತ್ರ­ದಿಂದ ಮೊದಲ ಬಾರಿ ಲೋಕಸಭೆಗೆ ಆಯ್ಕೆ. 20­12ರಲ್ಲಿ ನೊಯಿಡಾ ಶಾಸಕರಾಗಿ  ಆಯ್ಕೆ­ಯಾ­­ಗಿದ್ದರು. ಆರ್‌ಎಸ್‌ಎಸ್ ಜತೆ ನಿಕಟ ಸಂಪರ್ಕ.

ತೆಲಂಗಾಣದ ಏಕೈಕ ಪ್ರತಿನಿಧಿ


ಬಂಡಾರು ದತ್ತಾತ್ರೇಯ (67), ಸಿಕಂದರಾ ಬಾದ್‌, ತೆಲಂಗಾಣ: ಅವಿಭಜಿತ ಆಂಧ್ರಪ್ರದೇಶದ ಹಿರಿಯ ಹಾಗೂ ಅನುಭವಿ ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ  ಅವರು ಮೋದಿ ಸಂಪುಟದಲ್ಲಿರುವ  ತೆಲಂಗಾಣದ ಏಕೈಕ ಪ್ರತಿನಿಧಿ.
4 ಬಾರಿ ಸಂಸದರಾಗಿ ಆಯ್ಕೆಯಾಗಿ ರುವ ಅವರು  ಎರಡು ಅವಧಿಗೆ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸರಳ ಹಾಗೂ ವಿನಮ್ರತೆ ಅವರ ವ್ಯಕ್ತಿತ್ವದ ವೈಶಿಷ್ಟ.

ಸಚಿವರಾದ ವಜ್ರದ ವ್ಯಾಪಾರಿ 
ಹರಿಭಾಯ್ ಚೌಧರಿ (60), ಕ್ಷೇತ್ರ: ಬಾಣಸ­ಕಾಂಥಾ, ಗುಜರಾತ, ವಿದ್ಯಾಭ್ಯಾಸ: ಎಂ.ಕಾಂ: ಗುಜರಾತ್‌ನಿಂದ 4ಬಾರಿ ಸಂಸದರಾಗಿ ಆಯ್ಕೆ. ವಜ್ರದ ವ್ಯಾಪಾರಿಯಾಗಿ ಜೀವನ ಆರಂಭ.  ಅನೇಕ ಸಂಸದೀಯ ಸ್ಥಾಯಿ ಸಮಿತಿಗಳ ಸದಸ್ಯ.

ಗ್ರಾಮೀಣಾಭಿವೃದ್ಧಿಯ ಅನುಭವ
ಮೋಹನಭಾಯ್‌ ಕುಂದಾರಿಯಾ (63), ಕ್ಷೇತ್ರ: ರಾಜ್‌ಕೋಟ್‌, ಗುಜರಾತ್, ಆರ್‌ಎಸ್‌ಎಸ್‌ ಪ್ರಚಾರಕ ಹಾಗೂ ಗುಜರಾತ್‌ನ ಪ್ರಭಾವಿ ಪಟೇಲ್‌ ಸಮುದಾಯದ ನಾಯಕ. ಗ್ರಾಮೀಣಾಭಿವೃದ್ಧಿಯಲ್ಲಿ ಅಪಾರ ಅನುಭವ. ಮೋದಿ ಸಂಪುಟದಲ್ಲೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT