ಉಡುಪಿ: ‘ಎಲ್ಲರೂ ಸಕಾಲದಲ್ಲಿ ಆದಾಯ ತೆರಿಗೆ ಪಾವತಿ ಮಾಡಬೇಕು. ಪಾವತಿಗೆ ಕಚೇರಿಗೆ ಬರುವ ಅಗತ್ಯ ಇಲ್ಲ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು’ ಎಂದು ಆದಾಯ ತೆರಿಗೆ ಇಲಾಖೆಯ ಬೆಂಗಳೂರು 1 ಮತ್ತು ಪಣಜಿಯ ಮುಖ್ಯ ಕಮಿಷನರ್ ಕೆ. ಸತ್ಯನಾರಾಯಣ ಹೇಳಿದರು.
ಉಡುಪಿಯಲ್ಲಿ ಆರಂಭಿಸಿರುವ ತೆರಿಗೆ ಸೇವಾ ಕೇಂದ್ರ (ಆಯಕಾರ್) ಮತ್ತು ಅತಿಥಿ ಗೃಹವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ಹೊರತುಪಡಿಸಿದರೆ ಎರಡನೇ ತೆರಿಗೆ ಸೇವಾ ಕೇಂದ್ರವನ್ನು ಉಡುಪಿಯಲ್ಲಿ ಆರಂಭಿಸಲಾಗಿದೆ. ಉಡುಪಿ ಶಿಕ್ಷಣ ಮತ್ತು ಉದ್ದಿಮೆ ಕೇಂದ್ರವಾಗಿರುವುದು ಇದಕ್ಕೆ ಕಾರಣ. ಮಂಗಳೂರಿನಲ್ಲಿ ಈ ವರ್ಷ ರೂ700 ಕೋಟಿ ಆದಾಯ ತೆರಿಗೆ ಸಂಗ್ರಹಿಸುವ ಗುರಿ ಇದ್ದು, ಈಗಾಗಲೇ ರೂ659 ಕೋಟಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಉಡುಪಿ ವಿಭಾಗಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲ್ಲೂಕುಗಳು ಸೇರುತ್ತವೆ. ಈ ಜಿಲ್ಲೆಯಲ್ಲಿ ಈಗಾಗಲೇ ರೂ352 ಕೋಟಿ ಆದಾಯ ತೆರಿಗೆ ಸಂಗ್ರಹಿಸಲಾಗಿದೆ. ಕರ್ನಾಟಕ ಮತ್ತು ಪಣಜಿ ವ್ಯಾಪ್ತಿಯಲ್ಲಿ ಕಳೆದ ವರ್ಷ ರೂ51,150 ಕೋಟಿ ಆದಾಯ ತೆರಿಗೆ ಸಂಗ್ರಹಿಸಲಾಗಿದೆ. ದೆಹಲಿ ಮತ್ತು ಮುಂಬೈ ಹೊರತುಪಡಿಸಿದರೆ ಅತಿ ಹೆಚ್ಚು ತೆರಿಗೆ ಸಂಗ್ರಹ ಕರ್ನಾಟಕ– ಗೋವಾದಲ್ಲಿ ಆಗುತ್ತದೆ ಎಂದು ಅವರು ಮಾಹಿತಿ ನೀಡಿದರು.
‘ಜನರು ತೆರಿಗೆ ಸೇವಾ ಕೇಂದ್ರವನ್ನು ಬಳಸಿಕೊಂಡು ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸಬೇಕು. ತೆರಿಗೆ ಸೇವಾ ಕೇಂದ್ರವನ್ನು ಪಾವತಿದಾರರ ಸ್ನೇಹಿ ಕೇಂದ್ರವನ್ನಾಗಿಸಬೇಕು’ ಎಂದು ಕಾರ್ಪೋರೇಷನ್ ಬ್ಯಾಂಕ್ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ಆರ್ ಬನ್ಸಾಲ್ ಹೇಳಿದರು.
‘ದೇಶದಲ್ಲಿ ಸಂಗ್ರಹ ಆಗುವ ಒಟ್ಟು ತೆರಿಗೆಯಲ್ಲಿ ಶೇ 63ರಷ್ಟನ್ನು ಶೇ 1.3 ರಷ್ಟು ಮಂದಿ ಪಾವತಿಸುತ್ತಿದ್ದಾರೆ. ಹಣವಂತರು ಸಮುದಾಯದ ಬಗ್ಗೆ ಹೆಚ್ಚು ಯೋಚನೆ ಮಾಡಿ ಕೈಲಾದಷ್ಟು ಸಮಾಜಕ್ಕೆ ನೀಡಿದರೆ ಜೀವನ ಸಾರ್ಥಕ ಎನಿಸುತ್ತದೆ’ ಎಂದು ಮಣಿಪಾಲ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು.
ಐಟಿಇಎಫ್ ಉಪಾಧ್ಯಕ್ಷ ರಾಜೇಂದ್ರನ್ ಪೆರುಮಾಳ್, ಕೆ.ಆರ್. ನಾರಾಯಣ್ ಉಪಸ್ಥಿತರಿದ್ದರು.