ಪುಸ್ತಕ ಸಗಟು ಖರೀದಿ ಕುರಿತ ನನ್ನ ಪತ್ರಕ್ಕೆ ಡಿ.ಎ. ಶಂಕರ್ ಸೇರಿದಂತೆ ಏಳು ಮಂದಿ ಒಟ್ಟಾಗಿ ಹಾಗೂ ಬಿ.ಜಿ.ಸತ್ಯಮೂರ್ತಿ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿ (ವಾ.ವಾ., ಡಿ.11) ಈ ಕುರಿತು ಮಾತನಾಡುವುದಕ್ಕೆ ನನ್ನ ಯೋಗ್ಯತೆಯೇನು ಎಂಬ ಪ್ರಶ್ನೆ ಎತ್ತಿದ್ದಾರೆ. ನಾನು ನಲ್ವತ್ತಕ್ಕೂ ಮಿಕ್ಕು ವರ್ಷಗಳಿಂದ ಲೇಖಕ (ಪ್ರಥಮ ಕೃತಿ ೧೯೭೩), ಮೂವತ್ತಾರು ವರ್ಷ ವೃತ್ತಿ ಪುಸ್ತಕ ವ್ಯಾಪಾರಿ (೧೯೭೫-೨೦೧೨), ಇಪ್ಪತ್ತಕ್ಕೂ ಮಿಕ್ಕು ವರ್ಷ ಪ್ರಕಾಶಕನಾಗಿ 50ಕ್ಕೂ ಹೆಚ್ಚು ಕೃತಿ ಪ್ರಕಟಣೆ, ಎಲ್ಲಕ್ಕೂ ಮುಖ್ಯವಾಗಿ ಆರೋಗ್ಯಕರ ಪುಸ್ತಕೋದ್ಯಮದ ಬಗ್ಗೆ ‘ಪುಸ್ತಕ ಮಾರಾಟ– ಹೋರಾಟ’ ಕೃತಿ ಪ್ರಕಟಿಸಿದ್ದು ನನ್ನ ಯೋಗ್ಯತೆ.
ಸಗಟು ಖರೀದಿಯನ್ನು ಬೆಂಬಲಿಸುವುದಕ್ಕೆ ಸತ್ಯಮೂರ್ತಿ, ಸೃಜನೇತರ ಪ್ರಕಾರವನ್ನು ಎಳೆದುತಂದಿದ್ದಾರೆ. ಇದು ಹಾಸ್ಯಾಸ್ಪದ. ನನ್ನ ಶೇ ೯೫ರಷ್ಟು ಪ್ರಕಟಣೆಗಳೂ ಸೃಜನೇತರವೇ! ವಾಸ್ತವದಲ್ಲಿ ರಾಜ್ಯದಾದ್ಯಂತ ಇದ್ದ ಇನ್ನೂರಕ್ಕೂ ಮಿಕ್ಕು ಬಿಡಿ ಪುಸ್ತಕ ಮಾರಾಟಗಾರರ ಆರೋಗ್ಯಕರ ಜಾಲವನ್ನು ನಾಶಮಾಡಿದ್ದೇ ಸರ್ಕಾರಿ ಪುಸ್ತಕೋದ್ಯಮ. ಸಗಟು ಖರೀದಿ ಇದರ ಒಂದು ಅನೈತಿಕ ಸಂತಾನ.
ಡಿ.ಎ. ಶಂಕರ್ ಆದಿಯಾಗಿ ಏಳು ಗಣ್ಯರು ಅಪಸ್ವರವನ್ನೇ ಒಕ್ಕೊರಲಲ್ಲಿ ಹೇಳಿದರೆ ಸಂಗೀತವಾಗುತ್ತದೆಂಬ ಭ್ರಮೆಯಲ್ಲಿ ಇನ್ನೂ ಇರುವುದು ಆಶ್ಚರ್ಯಕರ. ಅತ್ಯಂತ ಪಾರದರ್ಶಕವಾಗಿದ್ದರೂ ಸಗಟು ಖರೀದಿ ಒಂದು ವಾಣಿಜ್ಯ ವ್ಯವಹಾರ ಮಾತ್ರ. ಇಲ್ಲಿ ಪುಸ್ತಕ ಕೇವಲ ಮಾಲು. ಇದಕ್ಕೂ ಪುಸ್ತಕ ಪ್ರತಿನಿಧಿಸುವ ವಿದ್ಯಾ ಅಥವಾ ಜ್ಞಾನ ಸಂಸ್ಕೃತಿಗೂ ಏನೇನೂ ಸಂಬಂಧ ಉಳಿದಿಲ್ಲ.