ಬೆಂಗಳೂರು: ‘ನನಗೆ ರಾಜಕೀಯ ಅಂಟಿಬಿಟ್ಟರೆ ಒಳಗಿನ ಸಾಹಿತಿ ಸತ್ತುಬಿಡುತ್ತಾನೆ ಎಂದು ಸಾಹಿತಿಯೊಬ್ಬರು ಧಾರವಾಡದಲ್ಲಿ ಅಪ್ಪಣೆ ಕೊಡಿಸಿದ್ದಾರೆ. ಕತ್ತಲಲ್ಲೇ ಉಳಿಯುತ್ತೇವೆ, ಬೆಳಕು ಬೇಡ ಎನ್ನುವ ವಾದ ಅದಾಗಿದೆ’ ಎಂದು ಚಿಂತಕ ಡಾ.ಜಿ.ರಾಮಕೃಷ್ಣ ಅಭಿಪ್ರಾಯಪಟ್ಟರು.
ಕ್ರೈಸ್ಟ್ ವಿಶ್ವವಿದ್ಯಾಲಯದ ಕನ್ನಡ ಸಂಘದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ಕವಿದಿನ’ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಇತ್ತೀಚೆಗೆ ನಡೆದ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಡಾ.ಎಸ್.ಎಲ್. ಭೈರಪ್ಪ, ‘ರಾಜಕೀಯ ಸೇರಿದರೆ ನಾನು ಸಾಹಿತಿಯಾಗಿ ಸಾಯುತ್ತೇನೆ’ ಎಂದಿದ್ದರು.
‘ಲಿಯೊ ಟಾಲ್ಸ್ಟಾಯ್, ವೀರಕೇಸರಿ ಸೀತಾರಾಮಶಾಸ್ತ್ರಿ ಅವರಂತಹ ಘಟಾನುಘಟಿಗಳು ಸಹ ರಾಜಕೀಯ ಹೋರಾಟ ನಡೆಸಿದವರು. ಸಾಹಿತ್ಯದ ತುಮುಲಕ್ಕೆ ಜೀವನದ ನೇರ ಸಂಬಂಧ ಇದೆ. ಸಾಹಿತ್ಯಕ್ಕೆ ಎಲ್ಲ ಕ್ಷೇತ್ರಗಳ ನಂಟು ಅತ್ಯಗತ್ಯ’ ಎಂದು ಪ್ರತಿಪಾದಿಸಿದರು.
ಪ್ರಶಂಸೆ ಒಳ್ಳೆಯದಲ್ಲ: ‘ಯುವ ಕವಿಗಳಿಗೆ ಅತಿಯಾದ ಪ್ರಶಂಸೆ ಯಾವಾಗಲೂ ಒಳ್ಳೆಯದಲ್ಲ. ಇದರಿಂದ ಅಹಂಕಾರ ಬೆಳೆದು, ಮನಸ್ಸು ಕಲುಷಿತವಾಗುತ್ತದೆ’ ಎಂದು ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.
ಕಥೆಗಾರ ಡಾ.ಕೆ. ಸತ್ಯನಾರಾಯಣ, ‘ನಮ್ಮ ವಿದ್ಯಾರ್ಥಿ ಜೀವನದಲ್ಲಿ ಕಾಲೇಜುಗಳಲ್ಲಿ ಸಿಗುತ್ತಿದ್ದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ವಾತಾವರಣ ಈಗಿಲ್ಲ’ ಎಂದು ವಿಷಾದಿಸಿದರು.
ಮುಖ್ಯ ಅತಿಥಿಯಾಗಿದ್ದ ಚಿಂತಕ ಡಾ.ಜಿ.ರಾಮಕೃಷ್ಣ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಕ್ರೈಸ್ಟ್ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ. ಕೆ.ಜೆ. ವರ್ಗಿಸ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಎಂ.ಟಿ. ರತಿ ಹಾಜರಿದ್ದರು.
ಡಾ. ದ.ರಾ. ಬೇಂದ್ರೆ ಸ್ಮೃತಿ ಅಂತರ ಕಾಲೇಜು ಕವನ ಸ್ಪರ್ಧೆ ಮತ್ತು ಡಾ.ಅ.ನ.ಕೃ ಸ್ಮಾರಕ ಅಂತರ ಕಾಲೇಜು ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಎಚ್.ಎಸ್.ರಾಘವೇಂದ್ರರಾವ್ ಅನುವಾದಿತ ಕೃತಿ ಹತ್ತು ದಿಕ್ಕಿನ ಬೆಳಕು (ಪುಟಗಳು: 254, ಬೆಲೆ ₨ 200) ಮತ್ತು ಕನಸ ಬೆನ್ನತ್ತಿ ನಡಿಗೆ (ಬಹುಮಾನಿತ ಕವನಗಳು, ಪುಟಗಳು: 52), ಡಾ.ಅ.ನ.ಕೃ ಸ್ಮಾರಕ ಬಹುಮಾನಿತ ಕಥೆಗಳು (ಪುಟಗಳು: 50) ಈ ಸಂದರ್ಭದಲ್ಲಿ ಬಿಡುಗಡೆಯಾದ ಕೃತಿಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.