ಮಡಿಕೇರಿ: ನಗರದಲ್ಲಿ ಜನವರಿ ಏಳರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ರಾಜ್ಯದ ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಬಡಿಸಲಿವೆ. ಸಮ್ಮೇಳನದ ಮುಖ್ಯ ವೇದಿಕೆಯಾಗಿರುವ ಭಾರತೀಸುತ ವೇದಿಕೆ ಹಾಗೂ ಸಮಾನಾಂತರ ವೇದಿಕೆಯಾಗಿರುವ ಗೌರಮ್ಮ ವೇದಿಕೆಯಲ್ಲಿ ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಏಳರಿಂದ ಸುಮಾರು ನಾಲ್ಕುವರೆ ಗಂಟೆಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
‘ರಾಜ್ಯಮಟ್ಟದ 30ಕ್ಕೂ ಹೆಚ್ಚು ಕಲಾವಿದರು ಹಾಗೂ ಕೊಡಗಿನ 30ಕ್ಕೂ ಹೆಚ್ಚು ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಾಹಿತ್ಯಾಸಕ್ತರನ್ನು ರಂಜಿಸಲಿದ್ದಾರೆ. ಇದಕ್ಕಾಗಿ ಸುಮಾರು ₨ 15 ಲಕ್ಷ ವೆಚ್ಚ ಮಾಡಲಾಗುತ್ತಿದೆ’ ಎಂದು ಸಾಂಸ್ಕೃತಿಕ ಸಮಿತಿಯ ಪ್ರಧಾನ ಸಂಚಾಲಕ ಜಿ. ಚಿದ್ವಿಲಾಸ್ ಭಾರತೀಸುತ ವೇದಿಕೆಯಲ್ಲಿ ಕೊಡಗಿನ ವಿಶೇಷ ನೃತ್ಯ ಪ್ರಕಾರಗಳಾದ ಉಮ್ಮತ್ತಾಟ್ (ರಾಣಿ ಮಾಚಯ್ಯ ಮತ್ತು ತಂಡ) ಪ್ರದರ್ಶನಗೊಳ್ಳಲಿದೆ.
ಜಿಲ್ಲೆಯ ನೃತ್ಯ ಸಂಗಮ ತಂಡದಿಂದ ‘ಕೋಟಿ ಪುಣ್ಯದ ಕೊಡಗಿದು’ ನೃತ್ಯ ರೂಪಕ, ಗೌಡ ಮಹಿಳಾ ಒಕ್ಕೂಟದಿಂದ ‘ಗೌಡ ಸಂಸ್ಕೃತಿ ದರ್ಶನ’, ಮಡಿಕೇರಿಯ ಕಲಾವಿದರಾದ ಅಂಬಳೆ ಹೇರಂಬ–ಹೇಮಂತ ಸಹೋದರರಿಂದ ವೇಣು ವಾದನ, ಕಡಗದಾಳು ಗ್ರಾಮದ ಬೊಟ್ಲಪ್ಪ ಯುವಸಂಘದ ತಂಡದಿಂದ ಕೋಲಾಟ, ವಿರಾಜಪೇಟೆಯ ಅಮ್ಮಳೆ ಕಲಾತಂಡದಿಂದ ಜೇನುಕುರುಬ ಸಂಸ್ಕೃತಿ ಹಾಗೂ ಗಾನ ಸಂಗಮ ತಂಡದ ಸುಗಮ ಸಂಗೀತ ಕಾರ್ಯಕ್ರಮಗಳು ಮುಖ್ಯ ಆಕರ್ಷಣೆಯಾಗಲಿವೆ.
ಭಾರತೀಸುತ ವೇದಿಕೆಯ ಕಾರ್ಯಕ್ರಮಗಳ ಪಟ್ಟಿ:
ಜ. 7 (ಸಂಜೆ 7ರಿಂದ ಆರಂಭ)– ಮಡಿಕೇರಿಯ ರಾಣಿ ಮಾಚಯ್ಯ ತಂಡದಿಂದ ಉಮ್ಮತ್ತಾಟ್, ಕೊಡಗು ಜಿಲ್ಲೆಯ ನೃತ್ಯ ಸಂಗಮ ತಂಡದಿಂದ ‘ಕೋಟಿ ಪುಣ್ಯದ ಕೊಡಗಿದು’ ನೃತ್ಯ ರೂಪಕ. ಬೆಳಗಾವಿಯ ಸುನೀತಾ ಕೆ. ಪಾಟೀಲ (ಸುಗಮ ಸಂಗೀತ), ಬಸವರಾಜ ತಿಮ್ಮಾಪೂರ (ತತ್ವಪದ), ಬಸವರಾಜ ಹಿರೇಮಠ (ಜಾನಪದ ಗೀತೆ). ಬೆಂಗಳೂರಿನ ಕಿಕ್ಕೇರಿ ಕೃಷ್ಣಮೂರ್ತಿ ಬಳಗದಿಂದ ಸುಗಮ ಸಂಗೀತ, ಚಿಕ್ಕಮಗಳೂರು ಬಾಪೂಜಿ ವೀರಗಾಸೆ ಕಲಾಸಂಘದಿಂದ ವೀರಗಾಸೆ ಕುಣಿತ, ಚಿಕ್ಕಬಳ್ಳಾಪುರ ಅನನ್ಯ ಕಲಾರಂಗ ವೇದಿಕೆಯಿಂದ ಕನ್ನಡ ಜಾಗೃತಿ ಗಾಯನ, ಹೊಸಪೇಟೆಯ ಸವಿತಾ ನುಗುಡೋಣಿ ಅವರಿಂದ ಹಿಂದೂಸ್ತಾನಿ ಗಾಯನ, ಚಾಮರಾಜನಗರದ ಪಿ.ಎಂ. ಮಂಜುನಾಥ್ ಅವರಿಂದ ಸುಗಮ ಸಂಗೀತ, ಮೈಸೂರಿನ ವಕೀಲರ ಕಲಾಸಂಘದಿಂದ ಕೋಮು ಶಾಂತಿ ನಾಟಕ.
ಜ. 8 (ಸಂಜೆ 7ರಿಂದ ಆರಂಭ) – ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ಗೌಡ ಸಂಸ್ಕೃತಿ ದರ್ಶನ, ರಾಮನಗರ ಕಲ್ಪಶ್ರೀ ಪರಫಾರ್ಮಿಂಗ್ ಆರ್ಟ್ಸ್ ಸೆಂಟರ್ ತಂಡದಿಂದ ಕರ್ನಾಟಕ ವೈಭವ ನೃತ್ಯ ರೂಪಕ, ಶಿವಮೊಗ್ಗದ ಅರ್ಪಿತಾ ಮಂದರಕುಮಾರ್ ಅವರಿಂದ ಸುಗಮ ಸಂಗೀತ, ಮಡಿಕೇರಿಯ ಅಂಬಳೆ ಹೇರಂಬ– ಹೇಮಂತ ಸಹೋದರರಿಂದ ವೇಣು ವಾದನ, ಮೈಸೂರಿನ ರಂಗಾಯಣ ಜನಾರ್ಧನ (ಜನ್ನಿ) ಮತ್ತು ತಂಡದಿಂದ ಜಾನಪದ ಗಾಯನ, ಹುಬ್ಬಳ್ಳಿಯ ಡಾ.ಬಿ.ಎಚ್. ಆನಂದಪ್ಪ ಅವರಿಂದ ಕಿಂದರಿಜೋಗಿ ಕಲೆ, ಬಾಗಲಕೋಟೆಯ ಸರಸ್ವತಿ ಸಬರದ ಅವರಿಂದ ವಚನ ಗಾಯನ, ಚಿತ್ರದುರ್ಗದ ಚಂದ್ರಪ್ಪ ಮತ್ತು ಸಂಗಡಿಗರಿಂದ ಲಾವಣಿ ಪದ, ಗದುಗಿನ ವೀರಣ್ಣ ಚನ್ನಪ್ಪ ಅಂಗಡಿ ಅವರಿಂದ ಗೀಗೀ ಪದ, ಕೊಡಗಿನ (ಕಡಗದಾಳು) ಬೊಟ್ಲಪ್ಪ ಯುವಕ ಸಂಘದಿಂದ ಕೋಲಾಟ, ದಾವಣಗೆರೆಯ ಮಹಾಂತೇಶ ಶಾಸ್ತ್ರಿ ಹಿರೇಮಠ ಅವರಿಂದ ತತ್ವಪದ, ಕೊಪ್ಪಳದ ದುರ್ಗಪ್ಪ ಹಿರೇಮನಿ ಅವರಿಂದ ಸುಗಮ ಸಂಗೀತ, ಜೀವನಸಾಬ್ ವಾಲಿಕಾರ ಅವರಿಂದ ಜಾನಪದ ಗಾಯನ ಹಾಗೂ ಕಟೀಲಿನ ದುರ್ಗಾ ಮಕ್ಕಳ ಮೇಳದಿಂದ ‘ಬಭ್ರುವಾಹನ’ ಯಕ್ಷಗಾನ ನಡೆಯಲಿದೆ.
ಜ. 9 (ಸಂಜೆ 7ರಿಂದ ಆರಂಭ)– ಹಾಸನದ ಅಂಬಳೆ ರಾಜೇಶ್ವರಿ ಭಾರತೀಯ ಸಂಗೀತ ನೃತ್ಯ ಕಲಾಶಾಲೆಯಿಂದ ‘ಶಾಂತಲಾ ಸ್ವಪ್ನ’ ನೃತ್ಯರೂಪಕ. ಉಡುಪಿಯ ಗಣೇಶ ಗಂಗೊಳ್ಳಿ ಅವರಿಂದ ಗೀತಗಾಯನ, ಗುಲ್ಬರ್ಗದ ಬಸವರಾಜ ಶಾಲಿ ಅವರಿಂದ ವಚನ ಗಾಯನ, ವಿರಾಜಪೇಟೆಯ ಅಮ್ಮಳೆ ಕಲಾತಂಡದವರಿಂದ ಜೇನುಕುರುಬ ಸಂಸ್ಕೃತಿ, ಬೆಂಗಳೂರಿನ ಜಯಶ್ರೀ ಅರವಿಂದ್ ತಂಡದವರಿಂದ ಸುಗಮ ಸಂಗೀತ, ಬೆಂಗಳೂರಿನ ಮಂಜುಳಾ ಅಮರೇಶ್ ಅವರಿಂದ ಭರತ ನಾಟ್ಯ, ಕೊಡಗು ಗಾನ ಸಂಗಮ ತಂಡದಿಂದ ಸುಗಮ ಸಂಗೀತ, ವಿಜಾಪುರದ ಜ್ಞಾನಭಾರತಿ ಕಲಾತಂಡದಿಂದ (ಸಿಂದಗಿ) ನೃತ್ಯ, ಕೋಲಾರದ ಪಿಚ್ಚಳ್ಳಿ ಶ್ರೀನಿವಾಸ ತಂಡದಿಂದ ಜಾನಪದ ಗಾಯನ, ಹಾವೇರಿಯ ಬಸವರಾಜು ಶಿಗ್ಗಾವಿ ಅವರಿಂದ ತತ್ವಪದ ಹಾಗೂ ಮಂಡ್ಯದ ಪ್ರಾದೇಶಿಕ ಕಲಾವೇದಿಕೆಯಿಂದ ಚಾರಿತ್ರಿಕ ನಾಟಕ– ‘ರಣದುಂಧುಬಿ’ ಪ್ರದರ್ಶನಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.