ಸಾಗರ: ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕೈಮಗ್ಗ ಸತ್ಯಾಗ್ರಹದ ಅಂಗವಾಗಿ ಕರ್ನಾಟಕದ ವಿವಿಧೆಡೆ ಸರ್ವೋದಯ ದಿನವಾದ ಜ.30ರಂದು (ಗುರುವಾರ) ನೇಕಾರರು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.
ಅದರ ಭಾಗವಾಗಿ ಇಲ್ಲಿಗೆ ಸಮೀಪದ ಹೆಗ್ಗೋಡು ಗ್ರಾಮದಲ್ಲಿರುವ ಶ್ರಮಜೀವಿ ಆಶ್ರಮದಲ್ಲಿ ರಂಗಕರ್ಮಿ ಹಾಗೂ ಚರಕ ಸಂಸ್ಥೆಯ ಪ್ರಮುಖ–ರಾದ ಪ್ರಸನ್ನ ಅವರು ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.
ಸರ್ಕಾರ ಪಾರಂಪರಿಕ ನೇಕಾರರ ರಕ್ಷಣೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವುದಾಗಿ ಘೋಷಿಸುವವರೆಗೂ ಪ್ರಸನ್ನ ಅವರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಚರಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಹಾಗೂ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಗೌರಮ್ಮ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗುರುವಾರ ಬೆಳಿಗ್ಗೆ 10 ಗಂಟೆಗೆ ಶ್ರಮಜೀವಿ ಆಶ್ರಮದಲ್ಲಿ ಸರ್ವೋದಯ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು ರೈತ ಮುಖಂಡ ಕಡಿದಾಳು ಶಾಮಣ್ಣ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ವಿಮರ್ಶಕ ಡಿ.ಎಸ್.ನಾಗಭೂಷಣ್, ಕವಯಿತ್ರಿ ಸವಿತಾ ನಾಗಭೂಷಣ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರಸನ್ನ ಮಾತನಾಡಿ ಪಾರಂಪರಿಕ ಕೈಮಗ್ಗ ನೇಕಾರಿಕೆಯನ್ನು ಉಳಿಸುವ ಸಂಬಂಧ ಐದು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಈ ಸಂಬಂಧ ಗಜೇಂದ್ರಗಡದಿಂದ ಬಾದಾಮಿಯವರೆಗೆ 13 ದಿನಗಳ ಕಾಲ 245 ಕಿ.ಮೀ ದೂರ ನೇಕಾರರು ಪಾದಯಾತ್ರೆ ನಡೆಸಿದ್ದಾರೆ. ಆದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಉಪವಾಸ ಕೈಗೊಳ್ಳುವುದು ಬೇಡ ಎಂದು ಮಾಡಿರುವ ಮನವಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಅನಂತಮೂರ್ತಿ ಅವರ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಆದರೆ ಇದು ಹಠಕ್ಕೆ ಬಿದ್ದು ಮಾಡುತ್ತಿರುವ ಉಪವಾಸ ಅಲ್ಲ.
ಅದೇ ರೀತಿ ಸರ್ಕಾರ ಅಥವಾ ಯಾವುದೇ ಪಕ್ಷದ ವಿರುದ್ದವೂ ಅಲ್ಲ. ಸರ್ಕಾರವನ್ನಷ್ಟೆ ಅಲ್ಲದೆ ಆಧುನಿಕ ನಾಗರಿಕತೆಯ ಹುಸಿ ಅಭಿವೃದ್ಧಿಯ ಭ್ರಮೆಯಲ್ಲಿರುವ ಜನರನ್ನು ಎಚ್ಚರಿಸಲು ಕೈಗೊಳ್ಳುತ್ತಿರುವ ಉಪವಾಸ’ ಎಂದು ಹೇಳಿದರು.