ರಾಮದುರ್ಗ (ಬೆಳಗಾವಿ ಜಿಲ್ಲೆ): ‘ಶಿಕ್ಷಣ ಕ್ಷೇತ್ರದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಎಲ್ಲ ವರ್ಗದ ಜನರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಏಕರೂಪದ ಶಿಕ್ಷಣ ಪದ್ಧತಿ ಅನುಷ್ಠಾನಗೊಳಿಸಲು ಧೈರ್ಯ ಮಾಡಬೇಕು’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯು ಇಲ್ಲಿಯ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಕೊನೆಯ ಪಕ್ಷ ಒಂದರಿಂದ ಐದನೇ ತರಗತಿವರೆಗಿನ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸಲು ಸರ್ಕಾರ ಚಿಂತನೆ ನಡೆಸಬೇಕು. ಪ್ರತಿ ರಾಜ್ಯದಲ್ಲೂ ಪ್ರಾದೇಶಿಕ ಭಾಷೆಯನ್ನು ಕಡ್ಡಾಯಗೊಳಿಸಬೇಕು. ಆ ಪ್ರದೇಶದ ಮಕ್ಕಳು ಅದೇ ಭಾಷೆಯಲ್ಲಿಯೇ ಓದುವುದರಿಂದ ಅವರ ನಡುವಣ ಅಸಮಾನತೆ ದೂರವಾಗುತ್ತದೆ. ಆದ್ದರಿಂದ ಆರ್ಟಿಇ ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು’ ಎಂದು ಅವರು ಒತ್ತಿ ಹೇಳಿದರು
‘ರಾಜಕಾರಣಿಗಳು ಮತ್ತು ವಸಾಹತುಶಾಹಿಗಳ ಹಿಡಿತದಲ್ಲಿ ಶಿಕ್ಷಣ ಕ್ಷೇತ್ರ ಸಿಲುಕಿಕೊಂಡಿದೆ. ಅಲ್ಲಿಯೂ ಪಂಕ್ತಿಭೇದ, ಜಾತಿಭೇದ, ವರ್ಗಭೇದ ತಾಂಡವಾಡುತ್ತಿದೆ. ಇಂಥ ಗುಲಾಮಗಿರಿಯಿಂದ ಶಿಕ್ಷಣ ಕ್ಷೇತ್ರ ಹೊರಬರಬೇಕು. ಈ ನಿಟ್ಟಿನಲ್ಲಿ ಆಂದೋಲನ ನಡೆಯಬೇಕಿದೆ’ ಎಂದರು.
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನಮಟ್ಟು ಮಾತನಾಡಿ, ‘ಇಂದಿನ ದಿನಗಳಲ್ಲಿ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳುವುದಕ್ಕಿಂತಲೂ, ಮಕ್ಕಳಿಗಾಗಿ ಸಮಾಜ ಯಾವ ರೀತಿಯ ಪರಿಸರ ನಿರ್ಮಿಸಿದೆ ಎನ್ನುವುದು ಮುಖ್ಯ’ ಎಂದರು.