ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುವೆಂಪು ಮೂಲಕ ಅಮ್ಮನ ದಾಖಲೆ’

Last Updated 28 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ‘ಮಗಳು ಕಂಡಂತೆ ಕುವೆಂಪು’ ಕೃತಿ ಬಂದು 11 ವರ್ಷ­ಗಳಾಯಿತು. ಈಗ ಅಮ್ಮ ಹೇಮಾವತಿ ಕುರಿತು ಬರೆಯುತ್ತಿರುವೆ. ಇದರಲ್ಲಿ ತಂದೆ ಮೂಲಕ ಅಮ್ಮನನ್ನು ಕಂಡಿದ್ದನ್ನು ದಾಖಲಿಸುವೆ. ಇದನ್ನು 2015ರೊಳಗೆ ಮುಗಿ­ಸುವ ಯೋಜನೆಯಿದೆ’ ಎಂದು ಕುವೆಂಪು ಅವರ ಪುತ್ರಿ ತಾರಿಣಿ ತಿಳಿಸಿದರು.

ಕುವೆಂಪು ವಾಸವಿದ್ದ ‘ಉದಯರವಿ’ ಮನೆ­ಯಲ್ಲಿ ಪತಿ, ಶಿವಮೊಗ್ಗದ ಕುವೆಂಪು ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಅವ­ರೊಂದಿಗೆ ವಾಸವಾಗಿರುವ ಅವರು, ಕುವೆಂಪು ಅವರ 111ನೇ ಜನ್ಮದಿನದ (ಡಿ. 29) ಅಂಗವಾಗಿ ಕುಪ್ಪಳಿಯಲ್ಲಿ ಆಯೋಜಿಸಿ­ರುವ ಕಾರ್ಯಕ್ರಮ­ದಲ್ಲಿ ಪಾಲ್ಗೊ­ಳ್ಳಲು ಹೊರಟಿದ್ದ ವೇಳೆ ಭಾನು­ವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘ಅಮ್ಮನ ಹೆತ್ತವರಾದ ಸೀತಮ್ಮ ಹಾಗೂ ರಾಮಣ್ಣಗೌಡ ಅವರ ಕುರಿತು, ಅವರಿಂದ ಅಮ್ಮ ಹೇಗೆ ಪ್ರಭಾವಿತ­­ಳಾದಳು, ತಂದೆಗೆ ಹೇಗೆ ಸಹಕಾರಿ­ಯಾ­ದಳು. ತಂದೆಯವರು ‘ರಾಮಾ­ಯಣ ದರ್ಶನಂ’ ಮಹಾ­ಕಾವ್ಯ ಬರೆಯುವಾಗ ತೊಂದರೆ­ಯಾಗದ ಹಾಗೆ ನಾಲ್ಕು ಮಕ್ಕಳನ್ನು ನೋಡಿ­ಕೊಂಡಳು, ಅಮ್ಮನನ್ನು ಅಂತಿಮ ಸಂಸ್ಕಾರಕ್ಕಾಗಿ ಒಯ್ಯುವ ಮುನ್ನ ಆಕೆಯ ಕಾಲನ್ನು ಮುಟ್ಟಿ ತಂದೆ ನಮಸ್ಕಾರ ಮಾಡಿದ್ದನ್ನು ಬಿ.ಎಸ್‌. ರುಕ್ಕಮ್ಮ ಮೇಡಮ್‌ ಹೇಳಿದ್ದರು. ಅಮ್ಮ­ನನ್ನು ದೇವಿ ಸ್ವರೂಪಳು ಎಂದೇ ತಂದೆ ತಿಳಿದಿದ್ದರು.

ಅಮ್ಮನ ಕುರಿತೇ ಅನೇಕ ಕವಿತೆಗಳನ್ನು ಬರೆದರು. ಹೀಗೆ, ಅಮ್ಮನ ಕುರಿತು ಪುಸ್ತಕ ಬರೆದರೂ ತಂದೆಯ ಕುರಿತಾಗಿರುತ್ತದೆ. ಮಗಳು ಕಂಡಂತೆ ಕುವೆಂಪು ಕೃತಿಯಲ್ಲೂ ಅಮ್ಮನ ಕುರಿತ ವಿವರ­ಗಳಿವೆ. ಆದರೆ, ಅಲ್ಲಿ ಇರದ ವಿವರಗಳು ಹೊಸ ಕೃತಿಯಲ್ಲಿ ಸಿಗಲಿವೆ’ ಎನ್ನುವ ವಿವರ ಅವರದು.

‘ಪ್ರತಿ ವರ್ಷ ಡಿ. 29ರಂದು ನಮಗೆಲ್ಲ ಹಬ್ಬ. ಅಂದು, ನಮ್ಮ ತಂದೆ ಕುವೆಂಪು ಜನ್ಮದಿನ. ಆ ದಿನ ಬೆಳಿಗ್ಗೆ ಆರು ಗಂಟೆಗೆ ತಂದೆಯವರ ಆಪ್ತ ಶಿಷ್ಯ ಪ್ರಭುಶಂಕರ, ಅವರ ಪತ್ನಿ ಶಾಂತಾ ಅವರು ಬುಟ್ಟಿ ತುಂಬ ಹಣ್ಣು ತಂದು ಶುಭಾಶಯ ಕೋರುತ್ತಿ­ದ್ದರು. ಅವರು ವಾಪಸು ಹೋಗುವಾಗ ಅಮ್ಮ ಹೇಮಾ­ವತಿ ಹಣ್ಣು ಕೊಟ್ಟು ಕಳುಹಿಸುತ್ತಿದ್ದಳು’ ಎಂದು ಸ್ಮರಿಸಿಕೊಂಡರು.

‘ನಮ್ಮ ತಂದೆಗೆ ಶುಭ ಕೋರಲು ಬೆಳಿಗ್ಗೆ ಆರು ಗಂಟೆಯಿಂದಲೇ ಜನರು ಬರುತ್ತಿದ್ದರು. ಬಂದವರಿಗೆಲ್ಲ ತಂದೆ­ಯವರು ಕೊಡಲಿ ಎಂದು ಅವರ ಬಳಿ ಬುಟ್ಟಿ ತುಂಬ ಕಲ್ಲುಸಕ್ಕರೆಯನ್ನು ಇಟ್ಟಿರು­ತ್ತಿದ್ದಳು. ಬಂದವರೆಲ್ಲ ತಂದೆ­ಯವರಿಗೆ ಹಾರ ಹಾಕಲು ತಂದಿದ್ದರೆ ಅವರು ಹಾಕಿಸಿಕೊಳ್ಳುತ್ತಿರಲಿಲ್ಲ. ಮಂಡ್ಯ ಜಿಲ್ಲೆಯ ನಾಗಮಂಗಲದ  ಜನರು ಸನ್ಮಾನ ಮಾಡಿ ನೀಡಿದ್ದ ಪಂಚಲೋಹದ ‘ನಾಟ್ಯ ಸರಸ್ವತಿ’ ಸ್ಮರಣಿಕೆ ಹಾಗೂ ಜ್ಞಾನಪೀಠ ಪ್ರಶಸ್ತಿ ನೀಡುವಾಗ ಕೊಟ್ಟಿದ್ದ ವಾಗ್ದೇವಿ ಸ್ಮರಣಿಕೆಗೆ ಹಾಕಿ ಎಂದು ಸಲಹೆ ಕೊಡುತ್ತಿದ್ದರು. ಇದೆಲ್ಲ ನೆನಪಾಗಿ ಈ ದಿನವೇ (ಡಿ. 28) ನಾಟ್ಯ ಸರಸ್ವತಿ ಹಾಗೂ ವಾಗ್ದೇವಿ ಸ್ಮರಣಿಕೆಗಳನ್ನು ಮನೆಯ ಹಜಾರದಲ್ಲಿ ಇಟ್ಟಿರುವೆ’ ಎಂದು ಖುಷಿಯಾಗಿ ಹೇಳಿದರು.

‘ತಂದೆ ತೀರಿಕೊಂಡು 20 ವರ್ಷ­ಗಳಾಯಿತು. ಈಗ ತಾನೆ ತೀರಿ­ಕೊಂಡರು ಎನ್ನುವ ಹಾಗೆ ಅನ್ನಿಸುತ್ತಿದೆ. ಮನೆಯ ಮುಂದೆ ಪತ್ರಿಕೆ ಓದುತ್ತ ಕುಳಿತಿದ್ದಾರೆ, ಹೊರಗೆ ಹೋಗುವಾಗ ಹೋಗಿ­ಬರ್ತೀನಿ ಅಂತಿದ್ದರು. ಹಾಗೆ ಹೇಳಿಹೋಗಿದ್ದಾರೆ, ಇನ್ನೇನು ಬಂದಾರು ಎಂದು ಅನ್ನಿಸುತ್ತಿದೆ. ಕಾರಿನ ಕೀ ಇಡುವ ಸ್ಥಳವನ್ನು ಬದಲಾ­ಯಿ­ಸಿದರೆ ಕೇಳುತ್ತಿದ್ದರು. ಈಗಲೂ ಸ್ಥಳ ಬದಲಾದರೆ ಕೇಳಿಬಿಡುತ್ತಾರೆಂದೇ ಭಯ. ಬರೆಯುವಾಗ ಏನು ಬರೆ­ಯುತ್ತಿ­ದ್ದೀಯಾ ಎಂದು ಕೇಳುವ ಹಾಗೆ ಇಣುಕುತ್ತಿದ್ದರು. ಈಗಲೂ ಬರೆಯು­ವಾಗ ಹಾಗೆ ಕಾಡುವುದಿದೆ’ ಎಂದು ಅವರು ಭಾವುಕರಾದರು.

‘ಈಗಿನ ಯುವ ತಲೆಮಾರು ಸಣ್ಣ ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳು­ವುದು ಕಂಡಾಗ, ಸ್ವಾತಂತ್ರ್ಯ ಕೊಟ್ಟು ತಪ್ಪು ಮಾಡದ ಹಾಗೆ ನಮ್ಮ ತಂದೆ ಬೆಳೆಸಿದ್ದು ನೆನಪಾಗುತ್ತದೆ. ವಿಶ್ವಾಸಕ್ಕೆ, ಪ್ರೀತಿಗೆ, ಸಂಸ್ಕಾರಕ್ಕೆ ಅವರ ಕೃತಿಗಳು ಎಂದಿಗೂ ಪೂರಕ’ ಎಂದು ತಾರಿಣಿ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT