ನವದೆಹಲಿ: ಮುಖ್ಯಮಂತ್ರಿ ಆಗಿ ಎರಡು ವರ್ಷ ಪೂರೈಸಿರುವ ಸಿದ್ದರಾಮಯ್ಯ ಶನಿವಾರ ದಾವಣಗೆರೆಯಲ್ಲಿ ಸಾಧನೆ ಸಮಾವೇಶ ನಡೆಸಿರುವ ಬೆನ್ನಲ್ಲೇ, ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಪಕ್ಷದ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರಿಂದ ಕಾಂಗ್ರೆಸ್ ಹೈಕಮಾಂಡ್ ಮಾಹಿತಿ ಪಡೆದಿದೆ.
ವರಿಷ್ಠರ ಆಹ್ವಾನದ ಮೇಲೆ ಗುರುವಾರ ದೆಹಲಿಗೆ ಬಂದಿದ್ದ ಕೃಷ್ಣ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸುಮಾರು 45 ನಿಮಿಷ ಭೇಟಿ ಮಾಡಿದರು. ಇವರಿಬ್ಬರ ಚರ್ಚೆ ಮುಖ್ಯವಾಗಿ ರಾಜ್ಯದ ಮೇಲೇ ಕೇಂದ್ರೀಕೃತವಾಗಿತ್ತು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಸರ್ಕಾರ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ, ಪ್ರಗತಿಗೆ ಪೂರಕವಾಗಿರುವ ದೂರದೃಷ್ಟಿ ಯೋಜನೆಗಳನ್ನು ಜಾರಿಗೊಳಿಸಲು ಸೋತಿದೆ ಎನ್ನುವ ಭಾವನೆ ಜನರಲ್ಲಿದೆ’ ಎಂದು ಕೃಷ್ಣ ತಮ್ಮ ಆತಂಕವನ್ನು ಸೋನಿಯಾ ಬಳಿ ತೋಡಿಕೊಂಡಿದ್ದಾರೆ.
‘ಸಿದ್ದರಾಮಯ್ಯ ಸಂಪುಟದ ಅನೇಕ ಸಚಿವರು ನಿಷ್ಕ್ರಿಯರಾಗಿದ್ದಾರೆ. ಏನೂ ಕೆಲಸ ಮಾಡುತ್ತಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಆರೋಪಗಳನ್ನು ಎದುರಿಸುತ್ತಿರುವ ಕೆಲವರು ಸಂಪುಟದಲ್ಲಿರುವುದರಿಂದ ಪಕ್ಷ – ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ’ ಎಂದು ದೂರಿದ್ದಾರೆ.
‘ರಾಜ್ಯ ಸರ್ಕಾರ ಕೆಲವೇ ಜಾತಿ–ವರ್ಗಗಳಿಗೆ ಮಣೆ ಹಾಕುತ್ತಿದೆ; ಇಡೀ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ ಎಂಬ ಅಭಿಪ್ರಾಯವಿದೆ. ಮುಖ್ಯಮಂತ್ರಿ ತಮ್ಮ ಮನೋಭಾವನೆ ಬದಲಾಯಿಸಿಕೊಳ್ಳದಿದ್ದರೆ ಪಕ್ಷ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂಬ ಅಭಿಪ್ರಾಯವನ್ನು ಪಕ್ಷದ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ.