ಉಡುಪಿ: ‘ಎಲ್ಲ ಶೋಧನೆಗಳಿಗೆ ಜನಪದ ಸಂಶೋಧನೆ ಬುನಾದಿ. ಜನಪದ ಸಂಶೋಧನೆಯಿಂದಲೇ ಸಂಸ್ಕೃತಿಯ ಶೋಧನೆ ಉಳಿದಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು.
ಕೆಮ್ಮಲಜೆ ಜನಪದ ಪ್ರಕಾಶನ ಇಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎ.ವಿ. ನಾವಡ ಅವರಿಗೆ ಬನ್ನಂಜೆ ಬಾಬು ಅಮಿನ್ ಜನಪದ ವಿದ್ವಾಂಸ ಪ್ರಶಸ್ತಿ ಹಾಗೂ ದೇವಾವೇಶದ ಪಾತ್ರಿ ಆನಂದ ಪೂಜಾರಿ ಅವರಿಗೆ ಜನಪದ ಕಲಾವಿದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಆಳುವ ವರ್ಗದ ವೈಭವದ ಚರಿತ್ರೆ ಯನ್ನು ಕಟ್ಟುತ್ತಿದ್ದೇವೆ. ಇದು ಜನ ಸಾಮಾನ್ಯರ ಚರಿತ್ರೆಯಲ್ಲ. ಸಿರಿ ಪಾಡ್ದನ ಗಳು, ಜನಪದ ಕಥೆಗಳ ವಿಶ್ಲೇಷಣೆ ಮಾಡಿದರೆ ಸಾಮಾನ್ಯ ಜನರ ಇತಿಹಾಸ ಗೊತ್ತಾಗುತ್ತದೆ. ಪರಿಪೂರ್ಣವಾದ ಚರಿತ್ರೆಯನ್ನು ಕಟ್ಟಲು ಪಾಡ್ದನ ಮತ್ತು ಜನಪದ ಕಥೆಗಳ ಅಧ್ಯಯನ ಅತ್ಯಗತ್ಯವಾಗಿದೆ. ಕಥನ, ಆಚರಣೆ, ಆರಾಧನೆಗಳ ವಿಶ್ಲೇಷಣೆಯ ಮೂಲಕ ನೈಜ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟುವ ಕೆಲಸ ಮಾಡಬೇಕು ಎಂದರು.
‘ರಾಷ್ಟ್ರ– ರಾಜ್ಯಮಟ್ಟದ ಉತ್ಸವಗಳು ನಡೆದಾಗ ಹೊರ ರಾಜ್ಯದ ಕಲಾವಿದರನ್ನು ಕರೆಯಿಸಿ ಕೀರ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ಜನಪದ ಕಲಾವಿದರು ಮತ್ತು ವಿದ್ವಾಂಸರನ್ನು ಎರಡನೇ ದರ್ಜೆಯವರನ್ನಾಗಿ ನೋಡಲಾಗುತ್ತಿದೆ. ಇದು ನಮಗೆ ನಾವೇ ಮಾಡಿಕೊಳ್ಳುವ ಅಪಮಾನ’ ಎಂದರು.
ಬನ್ನಂಜೆ ಬಾಬು ಅಮಿನ್ ಅವರ ‘ಸಂಸ್ಕೃತಿ ಸಂಪನ್ನೆ ಸಿರಿ’ ಕೃತಿ ಬಿಡುಗಡೆ ಮಾಡಲಾಯಿತು. ಚಲನಚಿತ್ರ ಕಲಾವಿದ ಸೂರ್ಯೋದಯ ಪೆರಂಪಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕೆಮ್ಮಲಜೆ ಪ್ರಕಾಶನದ ಅಧ್ಯಕ್ಷ ಡಾ. ಗಣನಾಥ ಎಕ್ಕಾರು, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಡಾ. ವೈ.ಎನ್. ಶೆಟ್ಟಿ, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮಿನ್, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಡಾ. ದುಗ್ಗಪ್ಪ ಕಜೆಕಾರ್ ಇದ್ದರು.