ಬೆಂಗಳೂರು: ‘ನಿರಂಜನ ಅವರು ಓದುಗರಿಗೆ ಬದ್ಧರಾಗಿದ್ದರು. ಜನರಿಗೆ ಬೌದ್ಧಿಕವಾಗಿ ಅಗತ್ಯವಿರುವ ಸಾಹಿತ್ಯವನ್ನು ಸೃಷ್ಟಿಸಿದ ಅಪರೂಪದ ಲೇಖಕ’ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು. ಕನ್ನಡ ವಿಕಿಪೀಡಿಯ ಸಮುದಾಯವು ಸಾಹಿತಿ ನಿರಂಜನ ಅವರ ಪುಸ್ತಕಗಳನ್ನು ವಿಕಿಪೀಡಿಯದಲ್ಲಿ ಬಿಡುಗಡೆ ಮಾಡಲು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಾನು ಸಾಹಿತ್ಯ ರಚನೆಗೆ ತೊಡಗುವುದಕ್ಕೂ ಹಿಂದೆಯೇ ನಿರಂಜನ ಅವರು ತಮ್ಮ ಲೇಖನಗಳ ಮೂಲಕ ದೊಡ್ಡ ಪ್ರಭಾವಳಿಯನ್ನು ಸೃಷ್ಟಿಸಿದ್ದರು. ಅವರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಗಲಿಲ್ಲ. ಆದರೆ, ಅವರ ಮೇಲೆ ಗೌರವ ಇದೆ’ ಎಂದರು.
ಹೊಸತು ಪತ್ರಿಕೆಯ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ‘ನಿರಂಜನ ಅವರು ಸಾಹಿತ್ಯ ರಚನೆಯನ್ನು ಗುರಿಯಾಗಿಸಿಕೊಂಡವರಲ್ಲ. ಸಾಹಿತ್ಯವನ್ನು ಮಾಧ್ಯಮವನ್ನಾಗಿ ಬಳಸಿಕೊಂಡು ಸಾಮಾಜಿಕ ಬದಲಾವಣೆಗೆ ಬೇಕಾದ ಅಂಶಗಳನ್ನು ತಮ್ಮ ಕೃತಿಗಳ ಮೂಲಕ ನೀಡಿದರು’ ಎಂದರು.
‘ಅವರ 13ನೇ ವಯಸ್ಸಿನಲ್ಲಿ ಮೊದಲ ಕಥಾ ಸಂಕಲನ ಪ್ರಕಟವಾಯಿತು. 19ನೇ ವಯಸ್ಸಿನಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ಬದುಕೇ ಅವರ ವಿಶ್ವವಿದ್ಯಾಲಯವಾಗಿತ್ತು. 23 ಕಾದಂಬರಿ, 10 ಕಥಾ ಸಂಕಲನ ಮತ್ತು 2 ಸಾವಿರ ಅಂಕಣ ಬರಹಗಳನ್ನು ಬರೆದಿದ್ದಾರೆ’ ಎಂದರು.
ನಿರಂಜನ ಅವರ ಪುತ್ರಿ ಡಾ.ತೇಜಸ್ವಿನಿ ಅವರು ನಿರಂಜನ ಅವರ 55 ಕೃತಿಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯೊಂದಿಗೆ ವಿಕಿಪೀಡಿಯದಲ್ಲಿ ಪ್ರಕಟ ಮಾಡಲು ಸಹಿ ಹಾಕಿದರು. ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕ ಎನ್.ಎ.ಎಂ.ಇಸ್ಮಾಯಿಲ್ ಉಪಸ್ಥಿತರಿದ್ದರು.