ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಕಾಲತ್ತು ವಹಿಸುವ ಕಾವ್ಯ ಬೇಡ’

ಜಿಎಸ್‌ಎಸ್‌ ಗೌರವ ಕಾವ್ಯ ಸ್ಪರ್ಧೆಯ ಪ್ರಶಸ್ತಿ ಪ್ರದಾನ
Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂದಿನ ಕಾವ್ಯ ಒಂದು ಸಮುದಾಯದ ಪರ ವಕಾಲತ್ತು ವಹಿಸುತ್ತಿದೆ. ಮಹಿಳೆಯರು ಸ್ತ್ರೀಪರ­ವಾದ ಕವನ ಮಾತ್ರ ಬರೆಯುವುದು, ದಲಿತರು ದಲಿತರ ಪರವಾದ ಕವಿತೆ ಮಾತ್ರ ಬರೆಯುವುದನ್ನು ಕಾಣುತ್ತಿ­ದ್ದೇವೆ. ಕಾವ್ಯ ಇಂಥ ಸಂಗತಿಗಳನ್ನು ದಾಟಿ ನಿಲ್ಲಬೇಕಾಗಿದೆ. ಲೋಕದ ಬಗ್ಗೆ ಆಲೋಚನೆ ಮಾಡುವ ಕಾವ್ಯ ಮೂಡಿಬರಬೇಕಿದೆ. ಈ ಬಗ್ಗೆ ಕವಿಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕು’
–ಹೀಗೆಂದು ಸಲಹೆ ನೀಡಿದ್ದು ಹಿರಿಯ ವಿಮರ್ಶಕ ಎಚ್‌.ಎಸ್‌.­ರಾಘವೇಂದ್ರ ರಾವ್‌.

ಜೆ.ಪಿ.ನಗರ­ದಲ್ಲಿ­ರುವ ಕಾವಿಮನೆಯಲ್ಲಿ ಭಾನು­ವಾರ ‘ಶೂದ್ರ’ ಸಾಹಿತ್ಯಕ ಪತ್ರಿಕೆ ಆಯೋಜಿ­ಸಿದ್ದ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ (ಜಿಎಸ್‌ಎಸ್‌) ಗೌರವ ಕಾವ್ಯ ಸ್ಪರ್ಧೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನವ್ಯ ಕಾವ್ಯ ಸಂದರ್ಭ ಕುರಿತು ಉಪನ್ಯಾಸ ನೀಡಿದ ಅವರು, ‘ಕವಿತೆಯು ಜನರ ಹೃದಯದಿಂದ ದೂರ ಸರಿಯುತ್ತಿದೆ. ಆ ಸ್ಥಾನದಲ್ಲಿ ಕಥೆ, ಕಾದಂಬರಿ ನೆಲೆಸುತ್ತಿವೆ. ಏಕೆ ಈ ರೀತಿಯಾಗುತ್ತಿದೆ ಎಂಬ ಪ್ರಶ್ನೆ ಪ್ರಮುಖವಾಗಿ ಕವಿಗೆ ಮೂಡ­ಬೇಕಾಗಿದೆ’ ಎಂದರು.

‘ಶಾಶ್ವತವಾಗಿ ಉಳಿಯುವಂಥ ಕವಿತೆ ಮೂಡಿಬರಬೇಕಾದ ಅಗತ್ಯವೂ ಇದೆ. ಕೆಲವರು ಹೊರತರುವ ಕವನ ಸಂಕಲನ ಪುಸ್ತಕದಲ್ಲಿ ಎಲ್ಲವೂ ಒಂದೇ ದಾಟಿಯ ಕವಿತೆಗಳಿರುತ್ತವೆ. ಇಂಥವರು ತಮ್ಮ  ಸುತ್ತಮುತ್ತಲಿನ ಲೋಕಕ್ಕೂ ಕಿವಿ ತೆರೆದಿರು­ವುದಿಲ್ಲ. ಪಾರಂಪರಿಕ ಲೋಕಕ್ಕೂ ಕಿವಿ ತೆರೆದಿರುವುದಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಕಾವ್ಯ ಪ್ರೀತಿ ಬೆಳೆಸಬೇಕು’: ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಕವಿ ಪ್ರೊ.ಜಿ.ಎಸ್‌.­ಸಿದ್ಧಲಿಂಗಯ್ಯ, ‘ಕಾವ್ಯ ಪ್ರೇಮ ಎಂಬುದು ಬದುಕಿನಲ್ಲಿ ಜೀವಂತಿಕೆ ಹಾಗೂ ರೋಮಾಂಚನ­ವನ್ನು ಉಳಿಸುವಂಥದ್ದು. ಬದುಕಿಗೆ ಅಮೃತಕೊಡು­ವಂಥದ್ದು. ಸೌಂದರ್ಯ ಪ್ರೀತಿಯನ್ನು ಬೆಳೆಸುವಂಥದ್ದು. ಇದ­ಕ್ಕೆಲ್ಲಾ ಮೂಲ ಪ್ರೇರಣೆಯಾದ ಕಾವ್ಯ ಪ್ರೀತಿ ಬೆಳೆಸುವ ಕೆಲಸ ನಡೆಯ­ಬೇಕಾಗಿದೆ’ ಎಂದು ಸಲಹೆ ನೀಡಿದರು.

ಕವಿ ಎಚ್.ಎಸ್‌.ವೆಂಕಟೇಶಮೂರ್ತಿ ಮಾತನಾಡಿ, ‘ಪ್ರಸ್ತುತ ಸನ್ನಿವೇಶದಲ್ಲಿ ಕವಿಗಳು ಹೆಚ್ಚಾಗಿದ್ದಾರೆ. ಆದರೆ, ಕವಿತೆಗಳ ಓದುಗರ ಸಂಖ್ಯೆ ಕಡಿಮೆ­ಯಾಗುತ್ತಿದೆ. ಕವಿತೆ ಬರೆಯುವು­ದರಿಂದ ಆರ್ಥಿಕ ಲಾಭವೂ ಇಲ್ಲ, ಇತ್ತ ಗ್ರಾಹಕರೂ ಇಲ್ಲ ಎನ್ನುವಂಥ ಪರಿಸ್ಥಿತಿ ಉದ್ಭವಿಸಿದೆ. ಹಾಗಾಗಿ ಕಾವ್ಯ ಸಂಸ್ಕೃತಿ ಬೆಳೆಸಬೇಕಾದ ಅಗತ್ಯವಿದೆ. ಕವಿತೆ­ಯನ್ನು ಓದಿ ಸಂತೋಷಪಡುವ ವಾತಾ­ವರಣ ನಿರ್ಮಾಣ ಮಾಡಬೇಕಿದೆ’ ಎಂದರು.

ಕವಿ ಸಿದ್ದಲಿಂಗಯ್ಯ ಅವರು ‘ಕವಿತೆ ಓದುಗರಿಗಾಗಿ ಹುಡುಕಾಟ ನಡೆಸಬೇ­ಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ ಕವಿಗಳು ನಿರಾಸೆಗೆ ಒಳಗಾ­ಗಬಾರದು. ಭರವಸೆಯೊಂದಿಗೆ ಬರವ­ಣಿಗೆ ಮುಂದುವರಿಸಬೇಕು’ ಎಂದು ಹೇಳಿದರು.

ಪ್ರಬಂಧ ಸಂಕಲನಕ್ಕೆ ಪ್ರಶಸ್ತಿ: ಚಿಂತಕ ಶೂದ್ರ ಶ್ರೀನಿವಾಸ್‌ ಅವರು, ‘ಕಾವ್ಯ­ವನ್ನು ಹೆಚ್ಚು ಜನರಿಗೆ ತಲುಪಿಸಬೇಕು ಎಂಬುದು ನಮ್ಮ ಉದ್ದೇಶ. 18 ವರ್ಷಗಳಿಂದ ಈ ಸ್ಪರ್ಧೆ ನಡೆಸುತ್ತಾ ಬಂದಿದ್ದೇವೆ. ಮುಂದಿನ ವರ್ಷದಿಂದ ಎ.ಎನ್‌.ಮೂರ್ತಿರಾವ್‌ ಹೆಸರಿನಲ್ಲಿ ಅತ್ಯುತ್ತಮ ಪ್ರಬಂಧ ಸಂಕಲನಕ್ಕೆ ಪ್ರಶಸ್ತಿ ನೀಡಬೇಕೆಂದು ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದರು.

ಮೂವರಿಗೆ ಪ್ರಶಸ್ತಿ
ಲೇಖಕರಾದ ಪಿ.ಚಂದ್ರಿಕಾ (‘ತಾಮ್ರ ವರ್ಣದ ತಾಯಿ’ ಕವನ ಸಂಕಲನ), ಎಂ.ಎಸ್‌.­ರುದ್ರೇಶ್ವರಸ್ವಾಮಿ (‘ಆ ತೀರದ ಮೋಹ’ ಕವನ ಸಂಕಲನ) ಹಾಗೂ ಬಸವರಾಜ ಸೂಳಿಭಾವಿ (‘ಬಟ್ಟೆ­ಯೆಂಬುದು ಬೆಂಕಿಯ ಹಾಗೆ’ ಕವನ ಸಂಕಲನ) ಅವರು 2012  (ಇಬ್ಬರಿಗೆ) ಹಾಗೂ 2013ನೇ ಸಾಲಿನ ಪ್ರಶಸ್ತಿ ಪುರಸ್ಕೃತರು.  ಪ್ರಶಸ್ತಿ ಪತ್ರದ ಜೊತೆಗೆ  ₨ 10 ಸಾವಿರ ನಗದು ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT