ಬೆಂಗಳೂರು: ‘ನಮ್ಮೊಳಗಿನ ಸಂವೇದನೆ, ಮನುಷ್ಯತ್ವ ಗುಣವನ್ನು ಕಳೆದುಕೊಂಡು ದಿನದಿಂದ ದಿನಕ್ಕೆ ರಾಕ್ಷಸರಂತೆ ವರ್ತಿಸುತ್ತಿದ್ದೇವೆ’ ಎಂದು ರಂಗಾಯಣ ಕಲಬುರ್ಗಿ ಕೇಂದ್ರದ ನಿರ್ದೇಶಕ ಆರ್.ಕೆ.ಹುಡುಗಿ ವಿಷಾದಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷ ನಗರದ ಎಸ್ಸಿಎಂ ಹೌಸ್ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಿಳೆಯರ ಮೇಲಿನ ದೌರ್ಜನ್ಯಗಳು: ಸಮಸ್ಯೆ–ಸವಾಲುಗಳು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ‘ರಾಜ್ಯದ ಅಭಿವೃದ್ಧಿಯ ಬಗೆಗೆ ಚರ್ಚಿಸಬೇಕಾದ ಸ್ಥಳದಲ್ಲಿ ಒಬ್ಬ ಹೆಣ್ಣುಮಗಳ ಚಿತ್ರವನ್ನು ನೋಡಿ, ಅವಳನ್ನು ಅವಮಾನಿಸುವ ನಿಟ್ಟಿನಲ್ಲಿ ನಮ್ಮ ರಾಜಕೀಯ ನಾಯಕರು ವರ್ತಿಸುತ್ತಾರೆ ಎಂದರೆ ನಮ್ಮ ಸಮಾಜದ ಪರಿಸ್ಥಿತಿ ಏನಾಗಿದೆ ಎಂದು ಯೋಚಿಸಬೇಕಾಗುತ್ತದೆ’ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ‘ಹೆಣ್ಣುಮಗಳನ್ನು ಇಂದು ಹೊಸ ಹೊಸ ರೂಪದಲ್ಲಿ ಹತ್ತಿಕ್ಕಲಾಗುತ್ತಿದೆ. ಆದರೆ, ಸಮಸ್ಯೆಗಳನ್ನು ಸವಾಲುಗಳನ್ನಾಗಿಸಿಕೊಂಡು ಹೋರಾಡುವ ಎದೆಗಾರಿಕೆಯನ್ನು ಇಂದಿನ ಹೆಣ್ಣುಮಕ್ಕಳು ತೋರಿಸುತ್ತಿಲ್ಲ. ಅಶಿಕ್ಷಿತರಿಗಿಂತ ಶಿಕ್ಷಿತ ಹೆಣ್ಣುಮಕ್ಕಳೆ ಎದೆಗಾರಿಕೆಯಿಂದ ಹೋರಾಡಲು ಹಿಂಜರಿಯುತ್ತಾರೆ’ ಎಂದು ಹೇಳಿದರು. ‘ಹೆಣ್ಣುಮಕ್ಕಳ ಸಮಸ್ಯೆಗಳನ್ನು, ತಲ್ಲಣಗಳನ್ನು, ನೋವುಗಳನ್ನು ಒಂದು ಚಳವಳಿಯಾಗಿ ಮಾರ್ಪಡಿಸಬೇಕು. ಸಮಾಜಕ್ಕೆ ಒಂದು ಛಾಟಿ ಬೀಸಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಶ್ನೆ ಮಾಡಬೇಕಾಗಿದೆ’ ಎಂದರು.