ಶುಕ್ರವಾರ ನಡೆದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಮಹಿಳಾ ಸಬಲೀಕರಣಕ್ಕೆ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಆದರೆ, ಅವರ ಹಕ್ಕು ಮತ್ತು ಅವಕಾಶಗಳನ್ನು ಅವರ ಪತಿ ಕಸಿದುಕೊಳ್ಳುವುದು ನಡೆದಿದೆ. ಈ ವ್ಯವಸ್ಥೆ ಕೊನೆಯಾಗಬೇಕು. ಮಹಿಳೆಯರಿಗೂ ಆಡಳಿತ ಅವಕಾಶ ಲಭಿಸಬೇಕು’ ಎಂದು ಮೋದಿ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ಮಾತುಗಳನ್ನು ಉಲ್ಲೇಖಿಸಿದ ಪ್ರಧಾನಿ, ‘ಭಾರತ ಹಳ್ಳಿಗಳ ದೇಶ. ನಮ್ಮ ಹಳ್ಳಿಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಪಂಚಾಯತ್ ಜನಪ್ರತಿನಿಧಿಗಳು ಯೋಚಿಸಬೇಕು. ಕೆಲವು ಕುಗ್ರಾಮಗಳಲ್ಲಿ ಈಗಲೂ ಸಮಸ್ಯೆಗಳು ಹೆಚ್ಚಾಗಿವೆ. ಆದರೆ, ಅಲ್ಲಿನ ಜನರ ಕನಸುಗಳು ದೊಡ್ಡದಾಗಿವೆ. ಮುಂದಿನ ಐದು ವರ್ಷಗಳಲ್ಲಿ ಹಳ್ಳಿಗಳಲ್ಲಿ ಏನು ಅಭಿವೃದ್ಧಿಯಾಗಬೇಕು ಎಂಬ ದೂರದರ್ಶಿತ್ವ ಪಂಚಾಯತ್ ವ್ಯವಸ್ಥೆಯ ಜನಪ್ರತಿನಿಧಿಗಳಲ್ಲಿ ಮೂಡಬೇಕು’ ಎಂದಿದ್ದಾರೆ.