ದಂಪತಿ ಚೆನ್ನಾಗಿಯೇ ಇದ್ದರು. ಗಂಡ ವ್ಯಾಪಾರ ಮಾಡುತ್ತಿದ್ದ. ಸಾಕಷ್ಟು ಗಳಿಕೆಯೂ ಇತ್ತು. ಅವನಿಗೆ ಮೂರು ಜನ ಗಂಡುಮಕ್ಕಳು. ಅವರನ್ನು ಚೆನ್ನಾಗಿ ಓದಿಸಿ ಬೆಳೆಸಿದ. ಒಂದು ದೊಡ್ಡ ಮನೆಯನ್ನು ಕಟ್ಟಿಸಿಕೊಂಡು ಸುಖವಾಗಿದ್ದ. ಸಮಯ ಯಾವಾಗಲೂ ಹಾಗೆಯೇ ಇರುತ್ತದೆಯೇ? ಚೆನ್ನಾಗಿದ್ದ ಹೆಂಡತಿ ಹೃದಯಾಘಾತವಾಗಿ ತೀರಿಹೋದಳು.
ಯಜಮಾನ ಒಬ್ಬನೇ ಆದ. ಅವನ ಮೂರೂ ಮಕ್ಕಳು ತಮ್ಮ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಮನೆಗಳಲ್ಲಿ, ಊರು-ಗಳಲ್ಲಿ ನೆಲೆನಿಂತಿದ್ದರು. ತಂದೆ ಹೋಗಿ ಹಿರಿಯ ಮಗನ ಮನೆಯಲ್ಲಿ ಉಳಿದ. ಅವರಿಗೆ ಯಾವ ತೊಂದರೆಯೂ ಆಗದಂತೆ ಮಗ, ಸೊಸೆ ನೋಡಿಕೊಂಡರು. ಅವರಿಗೆ ಬೇಕಾದ ರುಚಿ, ರುಚಿಯಾದ ಊಟ, ಕಾಲಕಾಲಕ್ಕೆ ಕಾಫಿ, ಇಷ್ಟವಾದ ಪತ್ರಿಕೆಗಳು ಹೀಗೆ ಯಾವುದಕ್ಕೂ ಕೊರತೆ ಇರಲಿಲ್ಲ. ಒಂದು ದಿನ ಮಕ್ಕಳೆಲ್ಲ ಬಂದು ಸೇರಿದರು.
ಒಬ್ಬ ಮಗ ಹೇಳಿದ, ‘ಅಪ್ಪಾ, ನೀನು ಕಟ್ಟಿಸಿದ ಮನೆ ಖಾಲಿಯಾಗಿ ಹಾಗೆಯೇ ಇದೆ. ಅದಕ್ಕೇನಾದರೂ ಮಾಡಬೇಕು’. ‘ಏನು ಮಾಡಬೇಕು?’ ಅಪ್ಪ ಕೇಳಿದ. ಇನ್ನೊಬ್ಬ ಮಗ ಹೇಳಿದ, ‘ಅದನ್ನು ಹಾಗೆಯೇ ಬಿಟ್ಟರೆ ಹಾಳಾಗಿ ಹೋಗುತ್ತದೆ. ಅದನ್ನು ಮಾರಿಬಿಟ್ಟರೆ ಒಳ್ಳೆಯ ರೇಟೂ ಬರುತ್ತದೆ’. ತಂದೆಗೆ ಸೂಚನೆ ಗೊತ್ತಾಯಿತು. ಅವರು ಅಂದಂತೆಯೇ ಆಗಲಿ ಎಂದುಕೊಂಡು ಮನೆ ಮಾರಿದರು. ಬಂದ ಹಣವನ್ನು ಮೂವರೂ ಮಕ್ಕಳಲ್ಲಿ ಸರಿಯಾಗಿ ಹಂಚಿಬಿಟ್ಟರು. ನಂತರ ಹೆಂಡತಿಯ ಆಭರಣಗಳು, ಮನೆಯಲ್ಲಿದ್ದ ಬಂಗಾರ, ಬೆಳ್ಳಿಗಳನ್ನೆಲ್ಲ ಮಾರಿ ಬಂದ ಹಣವನ್ನೆಲ್ಲ ಮಕ್ಕಳಿಗೆ ಸರಿಯಾಗಿ ನೀಡಿಬಿಟ್ಟರು. ಈಗ ಅವರ ಬಳಿ ಏನೂ ಇಲ್ಲ.
ಒಂದು ವರ್ಷ ಹೆಚ್ಚು ಬದಲಾವಣೆಯೇನೂ ಆಗಲಿಲ್ಲ. ಅವರಿಗೆ ಬೇಕಾದ್ದು, ಬೇಕಾದಾಗ ಸಿಗುತ್ತಿತ್ತು. ಆದರೆ, ಬರಬರುತ್ತ ಸಣ್ಣಪುಟ್ಟ ವ್ಯತ್ಯಾಸಗಳಾಗತೊಡಗಿದವು. ದೊರೆತ ಕಾಫಿ ಆರಿರುತ್ತಿತ್ತು. ಬೆಳಿಗ್ಗೆ ಎದ್ದು ಪತ್ರಿಕೆ ಓದುವ ಅಭ್ಯಾಸ ಇದ್ದ ಇವರಿಗೆ ಪತ್ರಿಕೆ ದೊರೆಯುವುದು ಎಲ್ಲರೂ ಓದಿಯಾದ ಮೇಲೆ ಮಧ್ಯಾಹ್ನದ ಮೇಲೆ. ಇವರೊಂದಿಗೆ ಮಾತುಕತೆ ಅಪರೂಪವಾಯಿತು. ಇವರು ತಮ್ಮ ಕೊಠಡಿಯಲ್ಲೇ ಬಂದಿಯಾದಂತಾದರು. ಹೊರಗಡೆ ಬಂದು ಟಿ.ವಿ.ಯನ್ನಾದರೂ ನೋಡೋಣವೆಂದರೆ ಮಗ- ಸೊಸೆ ತಮಗೆ ಬೇಕಾದ ಕಾರ್ಯಕ್ರಮವನ್ನು ನೋಡುತ್ತಿದ್ದರು. ಯಜಮಾನರಿಗೆ ಬೇಜಾರಾಗತೊಡಗಿತು.
ಒಂದು ಭಾನುವಾರ ಎಲ್ಲ ಮಕ್ಕಳನ್ನು ಬರಹೇಳಿದರು. ‘ಮಕ್ಕಳೇ, ನಾನು ನನ್ನ ಸಕಲ ಆಸ್ತಿಯನ್ನು ಮಾರಿ ನಿಮ್ಮಲ್ಲಿ ಹಂಚಿಬಿಟ್ಟಿದ್ದೇನೆಂದು ಹೇಳಿದ್ದೆನಲ್ಲವೇ? ಅದು ಸುಳ್ಳು. ನನಗೂ ಎಲ್ಲರಿಗಿರುವಂತೆ ಆಸೆಗಳಿವೆ. ಅದಕ್ಕೇ ನಮ್ಮ ಅಜ್ಜಿಯಿಂದ ನನ್ನ ಹೆಂಡತಿಗೆ ಬಂದ ವಿಶೇಷವಾದ ವಜ್ರದ ಮತ್ತು ಬಂಗಾರದ ಆಭರಣಗಳನ್ನು ನಾನು ಮಾರದೇ ಇಟ್ಟುಕೊಂಡಿದ್ದೇನೆ. ಇಂದು ಆಭರಣಗಳ ಬೆಲೆ ಅದೆಷ್ಟು ಕೋಟಿಯಾಗುತ್ತದೋ ತಿಳಿಯದು. ಅವೆಲ್ಲವುಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಬ್ಯಾಂಕಿನ ವಿಶೇಷ ಲಾಕರ್ನಲ್ಲಿ ಇಟ್ಟಿದ್ದೇನೆ.
ಒಂದು ಕೀಲಿಕೈಯನ್ನು ನನ್ನ ಸ್ನೇಹಿತರಾದ ತಹಶೀಲ್ದಾರ ನಾರಾಯಣರಾಯರಿಗೆ ಕೊಟ್ಟಿದ್ದೇನೆ. ಇನ್ನೊಂದು ಕೀಲಿಕೈಯನ್ನು ನಿಮಗೆ ಕೊಡುತ್ತೇನೆ. ನಾನು ಸಾಯುವವರೆಗೆ ಅದನ್ನು ತೆಗೆಯುವಂತಿಲ್ಲ. ನಾನು ಸತ್ತ ಮರುದಿನ ಅದನ್ನು ತೆರೆದು ಆಭರಣಗಳನ್ನು ಮಾರಿ ಬಂದ ಹಣವನ್ನು ಮತ್ತೆ ಸರಿಯಾಗಿ ಹಂಚಿಕೊಳ್ಳಿ’ ಎಂದರು. ಹೇಳಿದಂತೆ ಒಂದು ಕೀಲೀಕೈಯನ್ನು ಹಿರಿಯ ಮಗನಿಗೆ ಕೊಟ್ಟರು. ಆಮೇಲೆ ಮತ್ತೆ ಯಜಮಾನರಿಗೆ ರಾಜೋಪಚಾರ ಪ್ರಾರಂಭವಾಯಿತು.
ಒಂದು ದಿನ ಆಯಸ್ಸು ತೀರಿ ಯಜಮಾನರು ಮರೆಯಾದರು. ಮರುದಿನ ಎಲ್ಲ ಮಕ್ಕಳು ಬ್ಯಾಂಕಿಗೆ ನಾರಾಯಣರಾಯರನ್ನು ಕರೆದುಕೊಂಡು ಹೋಗಿ ಲಾಕರ್ ಬೀಗ ತೆರೆದು ಒಳಗಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡರು. ಅದನ್ನು ತೆರೆದು ನೋಡಿದಾಗ ಒಂದು ಚೀಟಿ ಮಾತ್ರ ಇತ್ತು. ಅದರಲ್ಲಿ ಬರೆದಿತ್ತು. ‘ಒಂದು ಬುದ್ಧಿಯಿಲ್ಲದ ಕತ್ತೆ ಮಾತ್ರ ಯಾವುದನ್ನೂ ಇಟ್ಟುಕೊಳ್ಳದೇ ಕೊಟ್ಟುಬಿಡುತ್ತದೆ’.
ಇಂದು ಇದು ಸಾಮಾನ್ಯವಾಗಿ ಕಾಣುವ ಗುಣ ಎನಿಸುತ್ತಿದೆ. ಅಂತಃಕರಣ, ಬಾಂಧವ್ಯ ಪ್ರೀತಿಗಳು ಕೂಡ ಹಣವನ್ನು ಆಶ್ರಯಿಸಿವೆ ಎಂಬಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಣಕ್ಕೋಸ್ಕರ ಸಂಬಂಧಗಳನ್ನು ಬಲಿಕೊಡುತ್ತಿರುವ ಪರಿಸ್ಥಿತಿಗಳು ದಿನನಿತ್ಯ ಗೋಚರಿಸುತ್ತಿವೆ ಎಂಬುದು ದುಃಖದ ಸಂಗತಿಯಾದರೂ ವಾಸ್ತವ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.