ಶ್ರೀ ಕೃಷ್ಣ ಪಾರಿಜಾತ ಎಂದಾಕ್ಷಣ ಉತ್ತರ ಕರ್ನಾಟಕದಲ್ಲಿ ಎಲ್ಲರ ನೆನಪಿಗೆ ಬರುವುದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕುಲಿಗೋಡ ಬಲಭೀಮ. ಇಲ್ಲಿ ಹನುಮನೇ ಭೀಮನಾಗಿ ಅವತರಿಸಿದ್ದು ಎಂಬ ನಂಬಿಕೆ.
ನಸುಗೆಂಪು ಬಣ್ಣದ ಶಿಲೆಯಲ್ಲಿ ಹನುಮ ಭೀಮನಾಗಿ ಮೂಡಿಬಂದಿದ್ದಾನೆ.
ವ್ಯಾಸರಾಜರಿಂದ ಪೂಜೆ ಮಾಡಿಸಿಕೊಂಡಿರುವ ಈ ಮಾರುತಿ, `ಜಾಗೃತ ಹನುಮಂತ'ನೆಂದೇ ಪ್ರಸಿದ್ಧ. ಭಕ್ತರ ಇಷ್ಟಾರ್ಥಗಳನ್ನು ಬೇಗನೇ ಈಡೇರಿಸುವ ಕುಲಿಗೋಡಪ್ಪನೆಂದೇ ಖ್ಯಾತನಾಗಿದ್ದಾನೆ. ಸಂತಾನವಿಲ್ಲದವರು ದೇವರಿಗೆ ಹರಕೆ ಹೊತ್ತು, ತಮಗಾಗುವ ಮಗುವನ್ನು ಮಂದಿರದ ಮೇಲಿನಿಂದ ಹಾರಿಸುವುದಾಗಿ ಬೇಡಿಕೊಂಡರೆ ವರ್ಷದೊಳಗಾಗಿ ಮಕ್ಕಳಾಗುವುದೆಂಬ ನಂಬಿಕೆಯೂ ಭಕ್ತರಲ್ಲಿದೆ.
ಇಲ್ಲಿನ ಕೇಳ್ಕರ ಮನೆತನದವರು ಹನುಮನಿಗೆ ವಜ್ರಕಾಂತಿ ಮಾಡಿಸಿದ್ದಾರೆ. ಪೂಜೆಯ ಸಂದರ್ಭದಲ್ಲಿ ಇದರಿಂದ ಹೊಮ್ಮುವ ಪ್ರಕಾಶ ಭಕ್ತಾದಿಗಳ ಮೇಲೆ ಬಿದ್ದರೆ ಶುಭ ಎನ್ನಲಾಗುತ್ತದೆ. ಬಲಭೀಮನಿಗೆ ನಿತ್ಯ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತದೆ.
ಪೂಜೆಯ ನಂತರ ಭಕ್ತರು ತಮ್ಮ ಭವಿಷ್ಯದ ಬಗ್ಗೆ ಕೇಳಿಕೊಳ್ಳಲು ಕೌಲು ಕಟ್ಟಲಾಗುತ್ತದೆ. ಭಕ್ತರಿಗೆ ಅಪಾರ ನಂಬಿಕೆ ಇದೆ. ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಂದು ಅನ್ನಸಂತರ್ಪಣೆ ನಡೆಯುತ್ತದೆ. ಭಕ್ತರು ಉಳಿದುಕೊಳ್ಳಲು ಇಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳಿವೆ.
ಮಂದಿರದ ಹೊರಗಡೆ ಭವ್ಯ ದೀಪಸ್ತಂಭವಿದೆ. ದೇವಾಲಯದ ಎದುರಿಗೆ ಪಾರಿಜಾತದ ಜನಕ ಅಪರಾಳ ತಮ್ಮಣ್ಣಪ್ಪನ ಮೂರ್ತಿ ಇದೆ. ದೇವಾಲಯದ ಆವರಣದಲ್ಲಿ ನಾರಾಯಣ ದೇವರ ಮೂರ್ತಿ, ಉತ್ಖನನ ಸಂದರ್ಭದಲ್ಲಿ ದೊರೆತ ಗಣಪತಿ ಮೂರ್ತಿಗಳಿವೆ. 12ನೇ ಶತಮಾನಕ್ಕಿಂತಲೂ ಹಿಂದೆ ಜೈನ ಸಂಸ್ಥಾನಿಕರು ಈ ಭಾಗದ ಆಳರಸರಾಗಿದ್ದರಿಂದ ಗೊಮ್ಮಟೇಶ್ವರನ ಮೂರ್ತಿಗಳೂ ಇಲ್ಲಿವೆ. ಈ ಸುಂದರ ತಾಣಕ್ಕೆ ಭೇಟಿ ನೀಡಲು ಇಚ್ಛಿಸುವವರು ಮಾಹಿತಿಗಾಗಿ 9663505179 ಸಂಪರ್ಕಿಸಬಹುದು.