ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ನಿಲ್ದಾಣ ಇಲ್ಲದ ಬದುಕಿನ ಹೋರಾಟ..!

Last Updated 20 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನಂತಹ ಮಹಾನಗರದಲ್ಲಿ ತನ್ನ ಇರುವಿಕೆಯನ್ನು ಉಳಿಸಿ ಕೊಳ್ಳುವುದಕ್ಕೆ ಎಲ್ಲಿಯೂ ಸ್ಥಳಾವಕಾಶ ಇಲ್ಲ. ಎಲ್ಲವೂ, ಎಲ್ಲರಲ್ಲೂ ತರಾತುರಿಯ ಬದುಕು. ಇವತ್ತು ಕಂಡ ಮುಖ ನಾಳೆ ಇಲ್ಲ, ಪರಸ್ವರ ಒಬ್ಬರನ್ನೊಬ್ಬರು ಸಂಧಿಸುವ, ನಾನು ನೀನೆಂಬ ಪ್ರೀತಿಯ ಆತ್ಮೀಯ ಭಾವ ಎಲ್ಲವೂ ಕಳಚಿಕೊಳ್ಳುತ್ತ ಇದೆ. ಮನುಷ್ಯನಿಂದ ಹಿಡಿದು ಪ್ರಾಣಿ, ಪಕ್ಷಿ, ಇತರ ಜೀವ ಜಂತುಗಳಿಗೂ ಇಲ್ಲಿ ಯಾವುದಕ್ಕೂ ಜಾಗ ಇಲ್ಲ.. ನೋ ಪಾರ್ಕ್..! ಒಂದಿಷ್ಟು ಜಾಗಕ್ಕಾಗಿ ಜೀವ ಸಂಕುಲನದ ಹೊರಾಟ ತಪ್ಪಿದ್ದಲ್ಲ. ಮನುಷ್ಯ ತನ್ನ ದಿನಚರಿಯ ಜೀವನದ ನಿಲ್ದಾಣದಲ್ಲಿಯೇ ಕಳೆದು ಹೋಗುತ್ತಿದ್ದಾನೆ, ಎಲ್ಲವೂ ಇಲ್ಲಿ ತಾತ್ಕಾಲಿಕ, ನಗರದಲ್ಲಿ ಅವನಿಗೆ ತನ್ನದೆನ್ನುವುದು ಯಾವುದೂ ಇಲ್ಲ. ದುಡ್ಡು ಕೊಟ್ಟು ಖರೀದಿಸಿದ್ದರೂ ಅದು ಅವನದಲ್ಲ.

ಜನದಟ್ಟಣೆ, ವಾಹನಗಳ ಭರಾಟೆಯಿಂದಾಗಿ ಜೀವನ ಅವ್ಯವಸ್ಥೆಯ ಗೂಡಾಗಿವೆ. ನಷ್ಟ ಲಾಭದ ಲೆಕ್ಕಚಾರ ಹಾಕುತ್ತಲೇ ನಮ್ಮ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳ ಜತೆಗೆ ತಿನ್ನುವ ಪೌಷ್ಟಿಕ ಆಹಾರದಿಂದಲೂ ದೂರವಾಗಿ, ಆರೋಗ್ಯವನ್ನು ಕೂಡಾ ಕಳೆದು ಕೊಳ್ಳುವ ಆನಾರೋಗ್ಯದತ್ತ ಬಂದು ಮುಟ್ಟುತ್ತಾನೆ. ಹೀಗೆನೇ ಜನ ಮನದ ಬದುಕಿನ ವೈವಿಧ್ಯಮಯವಾದ ವಿವಿಧ ಮುಖಗಳನ್ನು ತಮ್ಮ ಸೃಜನಶೀಲ ದೃಷ್ಟಿಕೋನವನ್ನಿಟ್ಟುಕೊಂಡು ಮೂರು ಮಂದಿ ಕಲಾವಿದರು ತಮ್ಮತಮ್ಮ ಮಾಧ್ಯಮದ ಮೂಲಕ ಮನಸ್ಸಿನ ಭಾವನೆಗಳನ್ನು ಹೇಳಲು ಹೊರಟಿದ್ದಾರೆ. ಶರ್ಮಿಳಾ ಅರವಿಂದ್, ಪೆರುಮಾಳ್‌ ವೆಂಕಟೇಶನ್‌ (ಪಿ.ವಿ) ಹಾಗೂ ಹಂಸವರ್ಧನ್ ಅವರ ಪೇಂಟಿಂಗ್, ಛಾಯಾಚಿತ್ರ ಮತ್ತು ಇನ್‌ಸ್ಟಲೆಷನ್‌ಗಳು ಒಟ್ಟು 31 ಕಲಾ ಕೃತಿಗಳು ಕರ್ನಾಟಕ ಚಿತ್ರಕಲಾ ಪರಿಪತ್‌ನಲ್ಲಿ ‘ನೋ.. ಪಾರ್ಕಿಂಗ್’ ರಿಪ್ಲೆಕ್ಷನ್ ಆನ್ ದಿ ಮೆಟ್ರೊ ಪಾಲಿಸ್ ಹೆಸರಿನಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಶರ್ಮಿಳಾ ಅರವಿಂದ್ ಅವರದ್ದು 15 ಕಲಾ ಕೃತಿಗಳು ಅದರಲ್ಲಿ ಪೇಂಟಿಂಗ್‌, ಡ್ರಾಯಿಂಗ್, ಡಿಜಿಟಲ್‌ ಪ್ರಿಂಟ್‌ಗಳು ಒಳಗೊಂಡಿವೆ, ನಗರ ವಾಸದಿಂದ ದೂರವಾಗಿರುವ ಗುಬ್ಬಚ್ಚಿಗಳು ನಮ್ಮಿಂದ ಮರೆಯಾಗಿವೆ ಹತ್ತು ವರ್ಷಗಳ ಹಿಂದೆ ಕಿರಾಣಿ ಅಂಗಡಿ ಪಕ್ಕ ರಾಶಿ ರಾಶಿಯಾಗಿ ಕಾಳು ತಿನ್ನುವುದಕ್ಕೆ ಮುಗಿ ಬೀಳುತ್ತಿದ್ದ ಗುಬ್ಬಚ್ಚಿಗಳು ಇಂದಿನ ದಿನಗಳಲ್ಲಿ ಒಂದು ಕೂಡಾ ಕಾಣುವುದಕ್ಕೆ ಸಿಗುವುದಿಲ್ಲ.ಹಾಗೇನೆ ಇವರ ಇನ್ನಿತರ ಕೃತಿಗಳು ಕೂಡಾ ಪ್ರಾಣಿಗಳ, ಪಕ್ಷಿಗಳ ಮೂಕ ವೇದನೆಯ ಭಾವ,ಜತೆಗೆ ನಗರದ ಜನಜೀವನದ ಸಮಸ್ಯೆಯನ್ನು ನಾಜೂಕಾಗಿ ಮನಸ್ಸಿಗೆ ಮುಟ್ಟುವಂತೆ ಹೇಳಲು ಮುಂದಾಗಿರುವ ಶರ್ಮಿಳಾ ಅವರ ಕೃತಿಗಳು ಆತ್ಮೀಯವಾಗಿ ಕಲಾ ಆಸಕ್ತರನ್ನು ಬರ ಮಾಡಿಕೊಳ್ಳುತ್ತವೆ.

ಪಿವಿ ಅವರ ಛಾಯಾಚಿತ್ರಗಳು ಕೂಡಾ ನಗರದ ಆವ್ಯವಸ್ಥೆಯನ್ನು ಕಣ್ಣ ಮುಂದೆ ತೆರೆದಿಡುತ್ತವೆ, ಒಟ್ಟು ಇವರದ್ದು 12 ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ. ಒಂದಿಷ್ಟು ಸ್ಥಳಕ್ಕಾಗಿ ಮನುಕುಲದ ಪರದಾಟ, ಮುಗಿಯದ ಸಮಸ್ಯೆಯ ತಾಕಲಾಟದಲ್ಲಿರುವ ಜೀವಪರ ವೇದನೆಗಳು ಮೌನದಲ್ಲಿಯೇ ತನ್ನ ಹೊರಾಟದ ಕ್ಷಣವನ್ನು ಅಂತ್ಯಗೊಳಿಸುವ ಪರಿಯನ್ನು ಸೂಕ್ಷ್ಮವಾಗಿ ತಮ್ಮ ಛಾಯಾಚಿತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಕಂಬ ತುಂಬಾ ಜೋತು ಬಿದ್ದಿರುವ ಅಡ್ಡಾದಿಡ್ಡಿ ವಯರ್‌ಗಳು ಅದರ ಜತೆಯಲ್ಲಿ ಇನ್ನೊಂದು ವಯರ್‌ ಹಾಕಲು ಮುಂದಾಗಿರುವ ಕೈ ಈ ಒಂದು ಚಿತ್ರ ಜೀವನದ ಜಂಜಾಟವನ್ನು ಎಳೆ ಎಳೆಯಾಗಿ ಮುಂದಿಡುತ್ತಾ ಹೋಗುತ್ತವೆ.ಹಾಗೇನೆ ಇವರ ಇತರ ಛಾಯಾಚಿತ್ರಗಳು ಗಮನ ಸೆಳೆಯುತ್ತವೆ ಹಂಸವರ್ಧನ್ ಅವರ ಅನುಷ್ಠಾನ ಮಾಧ್ಯಮ ಕಲೆ (ಇನ್‌ಸ್ಟಲೇಷನ್‌) ಕಲಾಕೃತಿಗಳು ನಗರಗಳಲ್ಲಿ ನಿಲ್ದಾಣ ಇಲ್ಲ (ನೋ ಪಾರ್ಕಿಂಗ್‌) ಚಿತ್ರಣವನ್ನು ಸಮಪರ್ಕವಾಗಿ ಮನ ಮುಟ್ಟುವಂತೆ ಚಿತ್ರಿತಗೊಂಡು ಸೈ ಅನಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT