ಭರತನಾಟ್ಯವನ್ನೇ ಉಸಿರಾಗಿಸಿಕೊಂಡಿರುವ ಕಲಾವಿದೆ ಆಶಾ ಎಚ್.ಕಿಶೋರ್ ಅವರ ‘ನಾಟ್ಯಾಂಜನ’ ಸಂಸ್ಥೆಗೆ ಈಗ ಹತ್ತರ ಸಂಭ್ರಮ.
ಫೆಬ್ರುವರಿ 26ಸಂಜೆ 5 ಗಂಟೆಗೆ ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಭರತನಾಟ್ಯ ಪರಿಜ್ಞಾನ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ಆಶಾ ನೃತ್ಯಕ್ಕೆ ಸಂಬಂಧಪಟ್ಟಂತೆ ಇತರೆ ಪೂರಕ ತರಬೇತಿಯನ್ನು ಪಡೆದಿದ್ದಾರೆ. ನಾಟ್ಯಾಂಜನ ಸಂಸ್ಥೆಯ ಮೂಲಕ ನೃತ್ಯಾಸಕ್ತ ಮಕ್ಕಳಿಗೆ ನಿರಂತರ ತರಬೇತಿ ನೀಡುತ್ತಿದ್ದಾರೆ.
ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ, ಹಂಪಿ ಉತ್ಸವ, ಲಕ್ಕುಂಡಿ ಹಾಗೂ ಆನೆಗುಂದಿ ಉತ್ಸವ, ಜಿಲ್ಲಾ ಸಾಹಿತ್ಯ ಸಮ್ಮೇಳನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮ, ಮೈಸೂರು ದಸರಾ ಉತ್ಸವ, ಬೆಂಗಳೂರಿನ ಇಸ್ಕಾನ್ ದೇವಲಯ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮ, ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮ, ಅಂತರ ರಾಷ್ಟ್ರೀಯ ಯೋಗ ಸಮ್ಮೇಳನ ಮುಂತಾದ ವೇದಿಕೆಗಳಲ್ಲಿ ನೂರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹತ್ತಾರು ನೃತ್ಯ ಸಂಯೋಜನೆ ಮಾಡಿದ್ದಾರೆ.
ವಿದ್ವಾನ್ ಎಂ.ಆರ್. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮುಂದುವರಿಸಿರುವ ಆಶಾ ದೂರದರ್ಶನದ ಗ್ರೇಡೆಡ್ ಕಲಾವಿದೆಯಾಗಿದ್ದಾರೆ. ಅಲ್ಲದೇ ಭಾರತ ಸರ್ಕಾರದ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸ್ ಅಂಡ್ ಟ್ರೈನಿಂಗ್ ಸಂಸ್ಥೆಯ ಶಿಷ್ಯ ವೇತನಕ್ಕೆ ಭಾಜನರಾಗಿದ್ದಾಳೆ.