ಶ್ರೀರಂಗಪಟ್ಟಣ: ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಬಡ ಮಕ್ಕಳು ಕಲಿಯುತ್ತಿದ್ದು, ಶಿಕ್ಷಕರು ಅವರ ಬಗ್ಗೆ ವಿಶೇಷ ಆಸಕ್ತಿ ವಹಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ನಗರ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಸಾಕಷ್ಟು ಅಂತರ ಇದೆ. ಹಿಂದುಳಿದಿರುವ ಹಳ್ಳಿಗಾಡಿನ ಮಕ್ಕಳನ್ನು ಸ್ಪರ್ಧೆಗಳಿಗೆ ಅಣಿಗೊಳಿಸಬೇಕು. ಜನಪದ ಕಲೆ, ಸಾಹಿತ್ಯ, ಚಿತ್ರಕಲೆ, ಇತರ ಪ್ರಕಾರದ ಸ್ಪರ್ಧೆಗಳಲ್ಲಿ ಭಾಗವಹಿಸು ವಂತೆ ಪ್ರೇರೇಪಿಸಬೇಕು.
ಪಠ್ಯ ಬೋಧನೆಗೆ ಕೊಡುವಷ್ಟೇ ಮಹತ್ವವನ್ನು ಸಹ ಪಠ್ಯ ಚಟುವಟಿಕೆಗಳಿಗೂ ನೀಡಬೇಕು. ಇಂಗ್ಲಿಷ್ ಕಲಿಕೆ ಇಂದು ಅನಿವಾರ್ಯವಾಗಿದ್ದು, ಒಂದನೇ ತರಗತಿಯಿಂದ ಎಲ್ಲ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕು. ಖಾಸಗಿ ಶಾಲೆಗಳ ಮಟ್ಟಕ್ಕೆ ಸರ್ಕಾರ ಶಾಲೆಗಳೂ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ಜನಪದ ಗೀತೆ, ಜನಪದ ನೃತ್ಯ, ನಾಟಕ, ರಂಗೋಲಿ, ಮಿಮಿಕ್ರಿ, ಆಶುಭಾಷಣ, ಕವ್ವಾಲಿ, ಗಜಲ್, ಛದ್ಮವೇಶ, ಕ್ಲೇ ಮಾಡೆಲಿಂಗ್, ಕತೆ ಹೇಳುವುದು, ಅಭಿನಯ ಗೀತೆ, ಧಾರ್ಮಿಕ ಪಠನ, ಕನ್ನಡ, ಹಿಂದಿ, ಇಂಗ್ಲಿಷ್ ಕಂಠಪಾಠ ಇತರ ಸ್ಪರ್ಧೆಗಳು ನಡೆದವು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಸ್ತಕದ ಮನೆ ಎಂ. ಅಂಕೇಗೌಡ ಅವರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ಹೊನ್ನರಾಜು ಪ್ರಸ್ತಾವಿಕ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಮಕೃಷ್ಣ, ಡಿ. ಸರಸ್ವತಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಜೆ. ಶ್ರೀನಿವಾಸ್, ಪ್ರಾಂಶುಪಾಲ ಗಂಗಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗು, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಲ್ಲೇನಹಳ್ಳಿ ಶಂಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಟಿ. ರಾಜಶೇಖರ್ ಇದ್ದರು.