ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಮುರಿದ ಘಟನೆ: ಎಎಸ್‌ಐ ಅಮಾನತು

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ವೃದ್ಧೆಯ ಮೃತದೇಹದ ಸೊಂಟ ಮುರಿದು, ಅದನ್ನು ಮಡಚಿ ಬಿದಿರು ಗಳಕ್ಕೆ ಕಟ್ಟಿ ಕೊಂಡೊಯ್ದ ಘಟನೆಗೆ ಸಂಬಂಧಿಸಿದಂತೆ ಒಡಿಶಾದ ಬಾಲಸೋರ್‌ ಜಿಲ್ಲೆಯ ಸಹಾಯಕ ಎಸ್‌ಐ (ರೈಲ್ವೆ ಪೊಲೀಸ್‌) ಪಿ.ಆರ್. ಮಿಶ್ರಾ ಅವರನ್ನು ಅಮಾನತು ಮಾಡಲಾಗಿದೆ.

‘ವೃದ್ಧೆಯ ಪಾರ್ಥಿವ ಶರೀರವನ್ನು ಸಾಗಿಸುವಾಗ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಕಾರಣಕ್ಕೆ ಮಿಶ್ರಾ ಅವರನ್ನು ಅಮಾನತು ಮಾಡಲಾಗಿದೆ. ಪ್ರಾಥಮಿಕ ವಿಚಾರಣೆಯ ನಂತರವೇ ಅಮಾನತು ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಒಡಿಶಾ ರೈಲ್ವೆ ಪೊಲೀಸ್‌ ಎಸ್‌ಪಿ ಸಂಜಯ್ ಕೌಸಲ್ ತಿಳಿಸಿದರು.

ಬಾಲಸೋರ್‌ ಜಿಲ್ಲೆಯ ಸೋರೊ ಪಟ್ಟಣದ ರೈಲು ನಿಲ್ದಾಣಕ್ಕೆ ವೃದ್ಧೆಯೊಬ್ಬಳ ಮೃತದೇಹ ಸಾಗಿಸಲು ಇಬ್ಬರು ಸ್ವಚ್ಛತಾ ಕಾರ್ಮಿಕರ ಸಹಾಯ ಪಡೆಯಲಾಗಿತ್ತು. ಮೃತದೇಹ ಸೆಟೆದುಕೊಂಡಿದ್ದ ಕಾರಣ, ದೇಹದ ಮೇಲೆ ನಿಂತು ಅದರ ಸೊಂಟ ಮುರಿದು, ಮಡಚಿ, ಬಿದಿರು ಗಳಕ್ಕೆ ಕಟ್ಟಿ ಸಾಗಿಸಿದ್ದರು ಎನ್ನಲಾಗಿದೆ.

‘ಸಹಾಯಕ ಎಸ್‌ಐ ಮಿಶ್ರಾ ಅವರು ಆಗ ಆ ಸ್ಥಳದಲ್ಲೇ ಇದ್ದರು. ಆದರೆ ಅವರು ಇಂಥ ಕೃತ್ಯ ಎಸಗದಂತೆ ಕಾರ್ಮಿಕರನ್ನು ತಡೆಯಲಿಲ್ಲ’ ಎಂದು ಕೌಸಲ್ ತಿಳಿಸಿದರು.ಸಾಲಮಣಿ ಎಂಬ 80 ವರ್ಷ ವಯಸ್ಸಿನ ವೃದ್ಧೆ ಸೋರೊ ಪಟ್ಟಣದಲ್ಲಿ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಮೃತದೇಹವನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಇದಾದ 12 ಗಂಟೆಗಳ ನಂತರ ರೈಲ್ವೆ ಪೊಲೀಸರು ಆ ಸ್ಥಳ ತಲುಪಿದರು.

ದೇಹವನ್ನು ಮರಣೋತ್ತರ ಪರೀಕ್ಷೆಗೆ ಬಾಲಸೋರ್‌ಗೆ ಕೊಂಡೊಯ್ಯಲು ಆಂಬುಲೆನ್ಸ್‌ ಸಿಗದ ಕಾರಣ, ಅದನ್ನು ಬಿದಿರು ಗಳಕ್ಕೆ ಕಟ್ಟಿಕೊಂಡು ಸಾಗಿಸಲಾಯಿತು ಎಂದು ಒಡಿಶಾ ಮಾನವ ಹಕ್ಕುಗಳ ಆಯೋಗದ ವರದಿ ಹೇಳಿದೆ. ಈ ಘಟನೆ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಒಡಿಶಾ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT