ಬೆಂಗಳೂರು: ‘ಬೆಂಗಳೂರು–ಮೈಸೂರು ಕಾರಿಡಾರ್ ಯೋಜನೆ (ಬಿಎಂಐಸಿ) ಹೋರಾಟದಲ್ಲಿ ನೈಸ್ ಕಂಪೆನಿಗೆ ಶರಣಾಗಿಲ್ಲ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೈಸ್ ವಿಚಾರ ಇದೇ 29ರಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ರಾಜ್ಯ ಸರ್ಕಾರದ ನಿಲುವು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.
‘ಈ ಹೋರಾಟದಿಂದ ನಾನು ಹಿಂದೆ ಸರಿಯುತ್ತೇನೆ ಎಂಬ ಹೇಳಿಕೆ ನೀಡಿದ ಮರುದಿನವೇ ನಮ್ಮ ಶೇರು ಮೌಲ್ಯ ಶೇ 15ರಷ್ಟು ಏರಿಕೆ ಆಗಿದೆ ಎಂದು ನೈಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ ಹೇಳಿಕೊಂಡಿದ್ದಾರೆ. ನೈಸ್ ಜೊತೆ ನಾನೂ ಶಾಮೀಲಾಗಿದ್ದೇನೆ ಎಂದು ಜನ ಅನುಮಾನಗೊಂಡಿದ್ದಾರೆ. ನೇರವಾಗಿ ದೂರವಾಣಿ ಕರೆ ಮಾಡಿ ಕೇಳುತ್ತಿದ್ದಾರೆ. ಜೀವನದ ಕೊನೆಗಾಲದಲ್ಲಿ ಆ ತಪ್ಪು ಮಾಡುವುದಿಲ್ಲ’ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಮತ್ತು ನೈಸ್ ಪ್ರತಿನಿಧಿಗಳ ನಡುವೆ 2016ರ ಮೇ 14 ಸಭೆ ನಡೆದಿದೆ. ಅದರ ನಡಾವಳಿಗಳನ್ನು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಕೇಳಿದರೆ ಕೊಡಲು ಸರ್ಕಾರ ನಿರಾಕರಿಸಿದೆ. ಸುಪ್ರೀಂ ಕೋರ್ಟ್ಗೂ ಸಲ್ಲಿಸಿಲ್ಲ ಎಂದು ದೂರಿದರು.
ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆ ಆಗಿ ಒಂದೂವರೆ ವರ್ಷ ಕಳೆದಿದೆ. ಸಮಿತಿ ಇದೇಯೋ ಇಲ್ಲವೋ, ಗೊತ್ತಿಲ್ಲ. ನ್ಯಾಯಾಲಯ ತೀರ್ಪು ನೀಡಿದ ನಂತರ ಸಮಿತಿ ಇದ್ದರೂ ಪ್ರಯೋಜನ ಏನು ಎಂದು ಪ್ರಶ್ನೆ ಮಾಡಿದರು.
‘ಈ ಯೋಜನೆ ಒಪ್ಪಂದ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಅವರಿಗೆ ನೈಸ್ ಕಂಪೆನಿಯ ಎಲ್ಲಾ ಅವ್ಯವಹಾರಗಳು ತಿಳಿದಿದೆ.ತಪ್ಪು ಮಾಡುವುದಿಲ್ಲ ಎಂಬ ವಿಶ್ವಾಸ ಇದೆ. ಇದೇ 29ರ ತನಕ ಕಾಯುತ್ತೇನೆ’ ಎಂದು ದೇವೇಗೌಡ ಅವರು ವಿವರಿಸಿದರು.