ದೇವನಹಳ್ಳಿ : ಭಾರತ ದೇಶದಲ್ಲಿ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಪಡೆದ ರಾಜ್ಯದಲ್ಲಿರುವ ಸಾಹಿತಿಗಳ ಕವನಗಳನ್ನು ಗೀತಗಾಯನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ‘ಅಡ್ವೆಂಚರ್ಸ್ ಅಸೋಷಿಯೇಷನ್’ ಅಧ್ಯಕ್ಷ ಶಶಿಧರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಪುಟ್ಟಪ್ಪನಗುಡಿ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಮತ್ತು ಅರ್ಚನಾ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘ ಹಾಗೂ ದೇವನಹಳ್ಳಿ ‘ಅಡ್ವೆಂಚರ್ಸ್ ಅಸೋಸಿಯೇಷನ್’ ಸಹಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ದ.ರಾ. ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕುವೆಂಪು, ನಿಸಾರ್ ಅಹಮದ್ ರಂತಹ ಮಹಾನ್ ಸಾಹಿತಿಗಳು ರಚಿಸಿರುವ ಕವನಗಳು ಅರ್ಥಪೂರ್ಣವಾಗಿದ್ದು, ಸಾರ್ವಜನಿಕರ ಬದುಕಿನಲ್ಲಿ ಹತ್ತಿರವಾಗಿವೆ. ಅಂತಹ ಕವನ ಗಾಯನ ಮಾಡುವುದರಿಂದ ಜನಸಾಮಾನ್ಯರಿಗೆ ಮನಮುಟ್ಟುತ್ತವೆ ಎಂದರು.
ಸರಸ್ವತಿ ಸಂಗೀತ ವಿದ್ಯಾಲಯ ಕಾರ್ಯದರ್ಶಿ ಬಿ.ಕೆ.ಗೋಪಾಲ್ ಮಾತನಾಡಿ, ಸತತ ಕಠಿಣ ಅಭ್ಯಾಸದಿಂದ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸುವುದು ರೂಢಿಸಿಕೊಳ್ಳಬೇಕು ಎಂದರು.ಮುಖ್ಯೋಪಾಧ್ಯಾಯಿನಿ ವಿಕ್ಟೋರಿಯಾ ರೋಹಿಣಿ ಮಾತನಾಡಿ, ಇಂದಿನ ದಿನಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೆ ಕೈಗೆಟುಕುತ್ತಿಲ್ಲ ಎಂದರು.
ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಪ್ರಧಾನ ಕಾರ್ಯದರ್ಶಿ ಪಿ.ವೆಂಕಟೇಶ್, ‘ಅಡ್ವೆಂಚರ್ಸ್ ಅಸೋಸಿಯೇಷನ್ ’ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.