ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಕಿಡಿ ಹಚ್ಚಬಾರದು: ವೈದೇಹಿ

ಉಡುಪಿಯಲ್ಲಿ ‘ಬಹುಮುಖಿ ಭಾರತ: ವೈಚಾರಿಕ ಸಾಹಿತ್ಯ ಚಿಂತನ– ಮಂಥನ’
Last Updated 11 ಸೆಪ್ಟೆಂಬರ್ 2016, 20:00 IST
ಅಕ್ಷರ ಗಾತ್ರ

ಉಡುಪಿ: ಸಣ್ಣ ಘಟನೆಯೊಂದನ್ನು ದೊಡ್ಡದು ಮಾಡಿ, ನಾಡಿಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಮಾಧ್ಯಮಗಳು ಶಾಂತಿ ಸೃಷ್ಟಿಸುವ ಕೆಲಸ ಮಾಡಬೇಕೇ ಹೊರತು ಅಶಾಂತಿ ವಾತಾವರಣ ನಿರ್ಮಾಣ ಮಾಡಬಾರದು. ಬೆಂಕಿ ಹಚ್ಚಿ ಹಣ ಮಾಡೋದು ಮಾಧ್ಯಮಗಳಿಗೆ ಬೇಕಾ? ಹೀಗೆ ಮಾರ್ಮಿಕವಾಗಿ ಪ್ರಶ್ನಿಸಿದವರು ಲೇಖಕಿ ವೈದೇಹಿ.

ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಸ್ಥೆಯು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ‘ಬಹುಮುಖಿ ಭಾರತ: ವೈಚಾರಿಕ ಸಾಹಿತ್ಯ ಚಿಂತನ– ಮಂಥನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನಾನು ಚಿಕ್ಕವಳಾಗಿದ್ದಾಗ ಹಿಂದೂ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಪರಸ್ಪರ ಜಗಳವಾಡಿದ್ದ ಘಟನೆಯೊಂದು ಕುಂದಾಪುರದಲ್ಲಿ ನಡೆದಿತ್ತು. ಜಗಳವಾಡಿದ ಅವರು ಕೊನೆಗೆ ಸುಮ್ಮನೆ ಹೊರಟು ಹೋದರು. ಅಂತಹ ಘಟನೆ ಈಗ ಆಗಿದ್ದರೆ ದೊಡ್ಡ ಸುದ್ದಿ ಮಾಡುತ್ತಿದ್ದರು. ಮಾಧ್ಯಮಗಳಿಗೆ ಬುದ್ಧಿ ಇಲ್ಲವೇ? ಅವರು ಇರುವುದು ಕಾಪಾಡುವುದಕ್ಕೆ ಹೊರತು ಬೆಂಕಿ ಹಚ್ಚುವುದಕ್ಕಲ್ಲ. ದುಡ್ಡು ಮಾಡಲು ಈ ರೀತಿ ಮಾಡಬೇಕಾ, ಅಷ್ಟೊಂದು ದುಡ್ಡು ಬೇಕಾ?  ಅಕ್ಷರ ಜ್ಞಾನ ಕೊಟ್ಟಿದ್ದು ಮೂರ್ಖತನ ಪ್ರದರ್ಶಿಸಲು ಅಂತಾದರೆ ಅದು ಸರಸ್ವತಿಗೆ ಮಾಡುವ ಅಪಚಾರ’ ಎಂದರು.

‘ಕೂಡಿ ಬಾಳಬೇಕು ಎಂಬ ಆಸೆ ಎಲ್ಲರಲ್ಲಿಯೂ ಇದೆ. ಪ್ರೀತಿ, ವಿಶ್ವಾಸ ಸಹನೆಯೂ ಪ್ರತಿಯೊಬ್ಬರಲ್ಲಿಯೂ ಇದೆ. ಆದರೂ ಈ ರೀತಿಯ ಘಟನೆಗಳು ನಡೆಯುತ್ತಿವೆ. ನಟನೆ, ಭಾವಾವೇಶಭರಿತ ಮೋದಿಯ ಮಾತು ಸಮೂಹ ಸನ್ನಿ ಬರಿಸುವಂತಿದೆ ಎಂದು ಯಾಕೆ ಎಲ್ಲರಿಗೂ ಗೊತ್ತಾಗುತ್ತಿದೆ? ವಿಷಾದ ತುಂಬಿದರೆ ಬುದಕಲು ಆಗುವುದಿಲ್ಲ. ಆದ್ದರಿಂದ ಸಾಯಬಾರದು ಅಂತ ನಟನೆ ಮಾಡಲಾರಂಭಿಸುತ್ತೇವೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತೆ ಗೌರಿ ಲಂಕೇಶ್‌, ಭಾರತದ ಬಹುಮುಖಿ ಸಂಸ್ಕೃತಿ ಅಪಾಯದಲ್ಲಿದೆ. ದೇಶದ ಪ್ರಜಾಪ್ರಭುತ್ವ ಕಾಪಾಡಬೇಕಾದರೆ ಜನರ ಬಹುತ್ವ ಉಳಿಯಬೇಕು. ಪದಗಳು ಬಹುಮುಖಿ ಭಾರತವನ್ನು ಉಳಿಸಿಕೊಳ್ಳಲು ಇರುವ ಅಸ್ತ್ರಗಳು. ಆದರೆ, ಪದಗಳೇ ಇಂದು ರಾಜಕೀಯ ಅಸ್ತ್ರಗಳಾಗುತ್ತಿವೆ.

ಬಹುಮುಖಿ ಭಾರತವನ್ನು ವಿರೋಧಿಸುವವರು ಅಂದರೆ ಅವರು ಪ್ರಜಾಪ್ರಭುತ್ವವನ್ನೇ ವಿರೋಧಿಸುವವರು. ಅವರಿಂದ ಕಾಲ್ಪನಿಕ ರಾಷ್ಟ್ರೀಯತೆಯ ಭಾರತ ಹುಟ್ಟಲು ಸಾಧ್ಯವೇ ವಿನಾ ನಿಜವಾದ ರಾಷ್ಟ್ರೀಯತೆ ಹುಟ್ಟಲು ಸಾಧ್ಯವಾಗದು. ಮೋದಿ ಸರ್ಕಾರದಲ್ಲಿ ಹಲವು ಭ್ರಮೆಗಳನ್ನು ಬಿತ್ತಿ ಅದನ್ನೇ ಸತ್ಯ ಎಂದು ಬಿಂಬಿಸಲಾಗುತ್ತಿದೆ. ಆದರೆ, ಅದು ಸತ್ಯವಲ್ಲ ಎಂದರು. ಚಿಂತಕ ಕೆ. ಫಣಿರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಭಾರತದ ಮಹಿಳೆಯರು, ಬಡವರು, ದಲಿತರು, ಅಲ್ಪಸಂಖ್ಯಾತರ ಕುರಿತ ವೈಚಾರಿಕ ಸಂವಾದದಲ್ಲಿ ಉಮಾಶಂಕರ, ಎನ್.ಎ.ಎಂ.ಇಸ್ಮಾಯಿಲ್‌, ಕೆ.ಎಲ್‌. ಅಶೋಕ್‌ ಮಾತನಾಡಿದರು. ಡಾ.ಎಚ್‌.ಬಿ.ವಾಸು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

***
ಕೊಡಗಿನಲ್ಲಿ ಟಿಪ್ಪು ಜಯಂತಿ ಸಂದರ್ಭ ವ್ಯಕ್ತಿಯೊಬ್ಬ ಕಾಲುಜಾರಿ ಬಿದ್ದು ಸತ್ತ ವಿಷಯ ದೊಡ್ಡದಾಗಿ ಮಾಡುತ್ತಾರೆ. ಆದರೆ, ಪ್ರವೀಣ್‌ ಪೂಜಾರಿ ಕೊಲೆಯ ಬಗ್ಗೆ ಅವರು ಚಕಾರ ಎತ್ತುವುದಿಲ್ಲ
-ಗೌರಿ ಲಂಕೇಶ್,ಪತ್ರಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT