ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆಯ ಹುಟ್ಟು

Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

–ಮೋಹನ ಕುಂಟಾರ್

ಮನದ ಕಣಿವೆಯ
ಇರುಳ ಇರುಕಿನಲ್ಲಿ
ಹೊಳೆದು ಮಾಯವಾಗುತ್ತಿತ್ತು ಶುಭದ ದೀಪ್ತಿ ಕವಿತೆ |೧|

ಒಳಗ ಕೊರೆದ
ಕರುಳ ಚುರುಕಿನಲ್ಲಿ
ತಿವಿದು ತೇವಗೊಳ್ಳುತ್ತಿತ್ತು ಭವ್ಯ ಪ್ರಾಪ್ತಿ ಕವಿತೆ  |೨|

ದುಡಿವ ಜನರ ಬೆವರಿನಲ್ಲಿ
ದಣಿದ ಮನದ ಬಿಗುವಿನಲ್ಲಿ
ಮಾನವತೆಯ ಮಾತಿನಲ್ಲಿ ಜೀಕುತ್ತಿತ್ತು ಕವಿತೆ  |೩|

ಭಾವ ಬೆಸೆದು ಹೊಸೆಯುವಲ್ಲಿ
ಮೊಟ್ಟೆ ಬಿರಿವ ರಭಸದಲ್ಲಿ
ಹೊಮ್ಮಿ ಬಂದ ಜೀವದಲ್ಲಿ ಮುಲುಕುತಿತ್ತು ಕವಿತೆ |೪|

ಉತ್ಸಾಹದ ಚಿಲುಮೆಯಲ್ಲಿ
ಕುಸಿದ ಮನದ ನೋವಿನಲ್ಲಿ
ಹೊರಳಿ ಕೆರಳಿ ಕೆಂಡದಲ್ಲಿ ಬೇಯುತ್ತಿತ್ತು ಕವಿತೆ |೫|

ಅಳುವ ಮಗುವ ಎಳಮೆಯಲ್ಲಿ
ಸೆಟೆದು ನಿಂತ ಹರೆಯದಲ್ಲಿ
ಬಾಗಿಕೊಂಡ ಮುಪ್ಪಿನಲ್ಲಿ ಇಣುಕುತ್ತಿತ್ತು ಕವಿತೆ  |೬|

ಹರಿವ ನೀರ ಜುಳುಕಿನಲ್ಲಿ
ಸುರಿವ ಮಳೆಯ ಲಾಸ್ಯದಲ್ಲಿ
ಸುತ್ತಿ ಸುಳಿವ ಗಾಳಿಯಲ್ಲಿ ತೇಲುತ್ತಿತ್ತು ಕವಿತೆ  |೭|

ಹಕ್ಕಿ ಕೊರಳ ಇಂಪಿನಲ್ಲಿ
ಬಳ್ಳಿ ಬೆಳೆವ ಬಳುಕಿನಲ್ಲಿ
ಹಬ್ಬಿ ನಿಂತ ಕಾನಿನಲ್ಲಿ ಅಲೆಯುತ್ತಿತ್ತು ಕವಿತೆ |೮|

ಹೆಣ್ಣು ಮಣ್ಣು ನೆರೆಯುವಲ್ಲಿ
ಗಾಳಿ ಬೆಂಕಿ ಸೇರುವಲ್ಲಿ
ಬೇರು ನೀರ ಒಸರುವಲ್ಲಿ ಜಿನುಗುತ್ತಿತ್ತು ಕವಿತೆ  | ೯|
ಮುಗ್ಧ ಜನರ ಅಳುವಿನಲ್ಲಿ
ತುಂಬಿದೊಲವ ಕಣ್ಣಿನಲ್ಲಿ
ಮುಗುಳು ಮುಖದ ನಗುವಿನಲ್ಲಿ ಹೊಮ್ಮುತ್ತಿತ್ತು ಕವಿತೆ  |೧೦|

ಭುವಿಯು ಭಾನು ಕೂಡುವಲ್ಲಿ
ಬಿಸಿಲು ನೆರಳು ಬೆರೆಯುವಲ್ಲಿ
ಹರಡಿ ನಿಂತ ಹಸಿರಿನಲ್ಲಿ ಚಿಗಿಯುತ್ತಿತ್ತು ಕವಿತೆ  |೧೧|

ಆಟದಲ್ಲಿ ಕೂಟದಲ್ಲಿ
ಬೇಟದಲ್ಲಿ ನೋಟದಲ್ಲಿ
ಹೊಸೆದ ಭಾವದಾಟದಲ್ಲಿ ಮೆರೆಯುತ್ತಿತ್ತು ಕವಿತೆ |೧೨|

ಲೋಕಾಂತದ ಕಾವಿನಲ್ಲಿ
ಏಕಾಂತದ ಧ್ಯಾನದಲ್ಲಿ
ಭಾವ ಭಾರದೊಜ್ಜೆಯಲ್ಲಿ ತಿಣುಕುತ್ತಿತ್ತು ಕವಿತೆ  |೧೩|

ನೀರಮೇಲೆ ಗೆರೆಯನೆಳೆದು
ಗಾಳಿಯಲ್ಲಿ ಗರಿಯ ಬಿಚ್ಚಿ
ನೇಹಕೆಂದು ಗುರುತನಿಟ್ಟು ಹುಟ್ಟಿತೊಂದು ಕವಿತೆ  |೧೪|

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT