ಲಖನೌ: ಭ್ರಷ್ಟಾಚಾರದ ಕಳಂಕ ಹೊತ್ತು ಉತ್ತರ ಪ್ರದೇಶ ಸಂಪುಟದಿಂದ ವಜಾಗೊಂಡಿದ್ದ ಗಾಯತ್ರಿ ಪ್ರಜಾಪತಿ ಅವರನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸೋಮವಾರ ಸಂಪುಟಕ್ಕೆ ಮತ್ತೆ ಸೇರಿಸಿಕೊಂಡಿದ್ದಾರೆ.
ಗಾಯತ್ರಿ ಅವರ ಜೊತೆ ಮನೋಜ್ ಪಾಂಡೆ, ಶಿವಕಾಂತ್ ಓಝಾ ಮತ್ತು ಜಿಯಾವುದ್ದೀನ್ ರಿಜ್ವಿ ಸಂಪುಟ ಸೇರಿದ್ದಾರೆ. 2017ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಅಖಿಲೇಶ್ ಅವರು ನಡೆಸಿರುವ ಕಡೆಯ ಸಂಪುಟ ವಿಸ್ತರಣೆ ಇದು ಎನ್ನಲಾಗಿದೆ.
ಗಾಯತ್ರಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಈಚೆಗೆ ಮನವಿ ಸಲ್ಲಿಸಿದ್ದರು. ಸಚಿವರಾಗಿ ಸಂಪುಟ ಸೇರಿದವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.ಗಾಯತ್ರಿ ಅವರ ಜೊತೆ ರಾಜ್ ಕಿಶೋರ್ ಸಿಂಗ್ ಅವರನ್ನೂ ಸಂಪುಟ ದಿಂದ ಕೈಬಿಡಲಾಗಿತ್ತು. ಆದರೆ ಇವರನ್ನು ಸೋಮವಾರ ಸಂಪುಟಕ್ಕೆ ಸೇರಿಸಿಕೊಂಡಿಲ್ಲ.
ಗಾಯತ್ರಿ ಅವರನ್ನು ಸಂಪುಟಕ್ಕೆ ಪುನಃ ಸೇರಿಸಿಕೊಂಡಿರುವುದು ಅಖಿಲೇಶ್ ಅವರಲ್ಲಿನ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.