ಮಾಂಸದಂಗಡಿಯ ನವಿಲು (ಕವಿತೆಗಳು)
ಲೇ: ಎನ್.ಕೆ. ಹನುಮಂತಯ್ಯ, ಪ್ರ: ಲಡಾಯಿ ಪ್ರಕಾಶನ ನಂ.21, ಪುಟ:176 ಬೆಲೆ:₹ 140, ಪ್ರಸಾದ ಹಾಸ್ಟೇಲ್, ಗದಗ–582 101
ಅಕಾಲಿಕವಾಗಿ ತೀರಿಕೊಂಡ ಕವಿ ಎನ್.ಕೆ. ಹನುಮಂತಯ್ಯ ಅವರ ಈತನಕದ ಕವಿತೆಗಳನ್ನು ‘ಮಾಂಸದಂಗಡಿಯ ನವಿಲು’ವಿನಲ್ಲಿ ಸಂಕಲಿಸಲಾಗಿದೆ. ಎನ್ಕೆ ತಮ್ಮ ಜೀವಿತದ ಅವಧಿಯಲ್ಲೇ ‘ಹಿಮದ ಹೆಜ್ಜೆ’, ‘ಚಿತ್ರದ ಬೆನ್ನು’ ಎಂಬ ಎರಡು ಸಂಕಲನಗಳನ್ನು ಪ್ರಕಟಿಸಿದ್ದರು. ಆ ಸಂಕಲನಗಳ ಜೊತೆಗೆ ಅವರದೊಂದು ಅಪ್ರಕಟಿತ ಕವಿತೆಯನ್ನು ಇದು ಒಳಗೊಂಡಿದೆ. ಕವಿ ಹನುಮಂತಯ್ಯ ಕನ್ನಡಕ್ಕೆ ಹೊಸದೆನ್ನಿಸುವ ರೂಪಕಜಗತ್ತನ್ನು ಸೃಷ್ಟಿಸಿದ ಪ್ರತಿಭಾವಂತ ಯುವಕವಿಯಾಗಿದ್ದರು.
‘ಅಸ್ಪೃಶ್ಯ!/ ಹೌದು; ನಾನು ಗೋವು ತಿಂದು/ ಗೋವಿನಂತಾದವನು/ ನೀವು ನೀಡುವ ಮೇವು ತಿಂದು/ ನಿಮ್ಮಂಥ ಮನುಷ್ಯನಾಗಲಾರೆ/ ಮನುಷ್ಯರನ್ನು ತಿನ್ನಲಾರೆ’ (ಗೋವು ತಿಂದು ಗೋವಿನಂತಾದವನು – ಪು.88) ಎಂಬ ಸಾಲುಗಳು ಹೊಸ ರೂಪಕವನ್ನು ಕನ್ನಡ ಕಾವ್ಯದ ಓದುಗರ ಎದುರಿಗಿಟ್ಟಿದ್ದವು. ಈ ಬಗೆಯ ಸಾಲುಗಳನ್ನು ಎದುರುಗೊಂಡ ಓದುಗನ ಅನುಭವ, ಸಂವೇದನೆಗೆ ತಾಜಾ ನುಡಿಗಟ್ಟೊಂದು ಸೇರಿಕೊಂಡಿತ್ತು.