ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ರಾಮ ಒಕ್ಕೂಟ; ಮೌನ ಪ್ರತಿಭಟನೆ

ಪಡಿತರ ಬದಲಿಗೆ ಹಣ ನೀಡುವ ನಿರ್ಧಾರ ಕೈಬಿಡಲು ಒತ್ತಾಯ
Last Updated 1 ಡಿಸೆಂಬರ್ 2016, 9:39 IST
ಅಕ್ಷರ ಗಾತ್ರ
ಚಾಮರಾಜನಗರ: ಪಡಿತರ ಪದಾರ್ಥದ ಬದಲಿಗೆ ಹಣ ನೀಡುವ ನಿರ್ಧಾರ ಕೈಬಿಡ ಬೇಕು ಎಂದು ಒತ್ತಾಯಿಸಿ ನಗರದಲ್ಲಿ ಬುಧವಾರ ಒಡಿಪಿ ಸಂಸ್ಥೆಯ ಸುಗ್ರಾಮ ತಾಲ್ಲೂಕು ಒಕ್ಕೂಟದಿಂದ ಮೌನ ಪ್ರತಿಭಟನೆ ನಡೆಯಿತು.
 
ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ದಿಂದ ಮೆರವಣಿಗೆ ಆರಂಭಿಸಿದ ಕಾರ್ಯ ಕರ್ತರು ಬಿ.ರಾಚಯ್ಯ ಜೋಡಿರಸ್ತೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
 
ರಾಜ್ಯಮಟ್ಟದಲ್ಲಿ ಪಡಿತರದ ಬದಲಿಗೆ ಹಣ ನೀಡುವ ಆಲೋಚನೆ ಮಾಡಲಾಗುತ್ತಿದೆ. ಇದು ಜನವಿರೋಧಿ ನಿರ್ಧಾರ. ಇದರಿಂದ ಬಡವರ ಆಹಾರ ಭದ್ರತೆಗೆ ನೇರವಾಗಿ ಪೆಟ್ಟುಬೀಳಲಿದೆ. ಕೂಡಲೇ, ಈ ಆಲೋಚನೆ ಕೈಬಿಡಬೇಕು ಎಂದು ಒತ್ತಾಯಿಸಿದರು.
 
ಬಡತನರೇಖೆಗಿಂತ ಕೆಳಗಿರುವವರ ಅನ್ನವನ್ನು ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ. ಪಡಿತರದ ಬದಲಾಗಿ ನೀಡುವ ಹಣ ನೀಡಿದರೆ ಬೇರೆ ಉದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆ ಹೆಚ್ಚು. ಬಡವರ ಹಸಿವು ಸೃಷ್ಟಿಯಾಗು ತ್ತದೆ ಎಂದು ದೂರಿದರು.
 
ಬಡವರು, ಮಹಿಳೆಯರು ಮತ್ತು ಮಕ್ಕಳ ಅಪೌಷ್ಟಿಕತೆ ಹೆಚ್ಚಾಗುತ್ತದೆ. ಗ್ರಾಮೀಣರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಂಭವವಿದೆ. ಜನಹಿತಕ್ಕಿಂತ ವರ್ತಕರ ಹಿತಕ್ಕೆ ಜನರು ಬಲಿಯಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. 
 
ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಕ್ರಮವಹಿಸಬೇಕು. ಪಂಚಾ ಯಿತಿಗಳಲ್ಲಿ ಗೌರವಧನ ಬಿಡುಗಡೆ ಮಾಡದ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಸ್ಥಾಯಿ ಸಮಿತಿಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
 
ಗ್ರಾಮ ಪಂಚಾಯಿತಿಯ ಮಹಿಳಾ ಜನಪ್ರತಿನಿಧಿಗಳಿಗೆ ಸರ್ಕಾರದ ಸುತ್ತೋಲೆ ಗಳು ಸಿಗುವಂತೆ ಕ್ರಮವಹಿಸಬೇಕು. ಸುಲಭವಾಗಿ ಖಾತೆ ಬದಲಾವಣೆಗೆ ಅವಕಾಶ ಕಲ್ಪಿಸಬೇಕು. ಮಹಿಳೆಯರಿಗೆ ಪಂಚಾಯಿತಿಗಳಲ್ಲಿ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
 
ಅನ್ನಭಾಗ್ಯ ಯೋಜನೆಯಡಿ ಪಡಿತರ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಜತೆಗೆ, ಪ್ರಸ್ತುತ ನೀಡುತ್ತಿ ರುವ ಪಡಿತರದ ಪ್ರಮಾಣ ಹೆಚ್ಚಿಸಬೇಕು. ಇಲ್ಲವಾದರೆ ರಾಜ್ಯಮಟ್ಟದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.  ಓಡಿಪಿ ಸಂಸ್ಥೆಯ ಹಂಗರ್‌ ಯೋಜನೆಯ ಸಂಯೋಜಕ ಅಶೋಕ ಕುಮಾರ್, ರಾಜ್ಯ ಸುಗ್ರಾಮ ಅಧ್ಯಕ್ಷೆ ರತ್ನಮ್ಮ, ತಾಲ್ಲೂಕು ಅಧ್ಯಕ್ಷೆ ಪದ್ಮಾ, ಖಜಾಂಚಿ ಜ್ಯೋತಿ, ಕಾರ್ಯ ದರ್ಶಿ ಮಾಲಾ, ನಿರ್ದೇಶಕಿ ಪುಟ್ಟ ನಂಜಮ್ಮ, ಸಂಸ್ಥೆಯ ಸುಶೀಲಾ, ವಲಯ ಸಂಯೋಜಕರಾದ ಸಿದ್ದರಾಜು, ಅರಳಪ್ಪ ಪಾಲ್ಗೊಂಡಿದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT