(ರವಿಚಂದರ್)
ಸಾಮಾನ್ಯವಾಗಿ ಜನಪ್ರಿಯ ಲೇಖಕರು ಓದುಗರಿಗೆ ಹೆಚ್ಚೆಂದರೆ ಹಸ್ತಾಕ್ಷರ ತೆಗೆದುಕೊಳ್ಳಲಿಕ್ಕಷ್ಟೇ ಸಿಗುತ್ತಾರೆ. ಆದರೆ ಈ ಸಲ ಆಯ್ದ ಪುಸ್ತಕ ಮಳಿಗೆಗಳಲ್ಲಿ ಕೆಲವು ಲೇಖಕರೊಂದಿಗೆ ಅರ್ಧ ಗಂಟೆ ಓದುಗರು ಸಂವಾದ ನಡೆಸುವ ಅವಕಾಶವನ್ನೂ ಕಲ್ಪಿಸಲಾಗಿದೆ.
ಸಿನಿಮಾ ಕ್ಷೇತ್ರದಿಂದ ಅಡೂರ ಗೋಪಾಲಕೃಷ್ಣನ್, ರಜನೀಕಾಂತ್ ಅವರ ಪುತ್ರಿ ಐಶ್ವರ್ಯಾ ರಜನೀಕಾಂತ್, ಆಶೀಶ್ ವಿದ್ಯಾರ್ಥಿ, ಶತ್ರುಘ್ನ ಸಿನ್ಹಾ ಮುಂತಾದವರು ಭಾಗವಹಿಸುತ್ತಿದ್ದಾರೆ. ಕೊನೆಯ ಗೋಷ್ಠಿಯಲ್ಲಿ ಕನ್ಹಯ್ಯ ಕುಮಾರ್ ಅವರು ವಾಕ್ ಸ್ವಾತಂತ್ರ್ಯದ ಶಕ್ತಿ–ಮಿತಿಗಳ ಕುರಿತು ಮಾತನಾಡಲಿದ್ದಾರೆ. ಆಕಾರ್ ಪಟೇಲ್ ಮತ್ತು ನಟಿ ರಮ್ಯಾ ಕೂಡ ಉತ್ಸವದಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿದ್ದಾರೆ.
ಬಹುತ್ವದ ಸಂಭ್ರಮಾಚರಣೆ
‘ಬಿಎಲ್ಎಫ್’ನ ಪ್ರಮುಖ ಉದ್ದೇಶಗಳನ್ನು ರವಿಚಂದರ್ ವಿವರಿಸುವುದು ಹೀಗೆ: ‘ಸಾಹಿತ್ಯ ಮತ್ತು ಕಲೆಯಲ್ಲಿ ಇರುವ ಬಹುತ್ವವನ್ನು ನಾವು ಈ ಉತ್ಸವದ ಮೂಲಕ ಸಂಭ್ರಮಿಸುತ್ತಿದ್ದೇವೆ. ವೈವಿಧ್ಯ ಮತ್ತು ಬಹುತ್ವ ಈ ಉತ್ಸವದ ಮುಖ್ಯ ಸಂಗತಿಗಳು. ನಮ್ಮ ಸಮಾಜ ಇಂದು ಪರ–ವಿರೋಧ ಈ ಎರಡು ಭಾಗಗಳಲ್ಲಿ ಹಂಚಿಹೋಗಿದೆ. ಆ ಎರಡರಲ್ಲಿ ಯಾವುದೋ ಒಂದು ಭಾಗದಲ್ಲಿ ನಿಂತು ಮಾತ್ರ ಮಾತನಾಡಬೇಕು ಎಂಬ ಪರಿಸ್ಥಿತಿ ಇದೆ. ನಾವು ಆ ಎರಡರ ನಡುವೆಯೂ ನಿಂತು ಮಾತನಾಡಬಹುದಾದ ಅವಕಾಶ ಇದೆ ಎಂಬುದನ್ನು ತೋರಿಸಲು ಉದ್ದೇಶಿಸಿದ್ದೇವೆ. ಹಾಗೆಯೇ ಆ ಅವಕಾಶದಲ್ಲಿ ಎರಡೂ ಕಡೆಗಳ ಜನರಿಗೂ ಸಮಾನವಾಗಿ ಅವಕಾಶ ನೀಡುತ್ತೇವೆ. ಬೆಂಗಳೂರನ್ನು ಇನ್ನಷ್ಟು ಸಾಂಸ್ಕೃತಿಕ ಶ್ರೀಮಂತ ನಗರವನ್ನಾಗಿಸುವ ಉದ್ದೇಶವೂ ಈ ಉತ್ಸವಕ್ಕಿದೆ’ ಎನ್ನುವ ಅವರು, ‘ಬೆಂಗಳೂರು ಕರಗದ ಹಾಗೆಯೇ ಸಾಹಿತ್ಯ ಉತ್ಸವವೂ ಒಂದು ಸಂಭ್ರಮದ ಆಚರಣೆ’ ಎನ್ನುತ್ತಾರೆ.
ಕನ್ನಡದ ಸ್ಥಾನಮಾನ
ಬೆಂಗಳೂರು ಸಾಹಿತ್ಯ ಉತ್ಸವಗಳಲ್ಲಿ ಕನ್ನಡಕ್ಕೆ ಮಹತ್ವ ನೀಡಲಾಗುತ್ತಿಲ್ಲ ಎಂಬ ಆರೋಪ ಕಳೆದ ವರ್ಷ ಬಲವಾಗಿಯೇ ಕೇಳಿಬಂದಿತ್ತು. ಈ ಬಗ್ಗೆ ಕೇಳಿದರೆ ಅವರು ಅಂಕಿ ಅಂಶಗಳ ಮೂಲಕವೇ ಸಮರ್ಥಿಸಿಕೊಳ್ಳುತ್ತಾರೆ.
‘ನಮ್ಮ ಉತ್ಸವದಲ್ಲಿ ಕನ್ನಡಕ್ಕಾಗಿ ಐದು ಗೋಷ್ಠಿಗಳಿವೆ. ‘ಜೈಪುರ ಸಾಹಿತ್ಯ ಉತ್ಸವ’ದಲ್ಲಿ ರಾಜಸ್ತಾನಿ ಭಾಷೆಯ ಗೋಷ್ಠಿ ಇರುವುದಿಲ್ಲ. ‘ಮುಂಬೈ ಉತ್ಸವ’ದಲ್ಲಿ ಮರಾಠಿ ಭಾಷೆಗೆ ಸ್ಥಾನ ಇರುವುದಿಲ್ಲ. ಆ ಎಲ್ಲ ಉತ್ಸವಗಳಿಗೆ ಹೋಲಿಸಿದರೆ, ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕನ್ನಡಕ್ಕೆ ಸಾಕಷ್ಟು ಅವಕಾಶ ನೀಡಲಾಗಿದೆ. ಈ ವಿಷಯದಲ್ಲಿ ನಾವು ಉಳಿದ ಸಾಹಿತ್ಯ ಉತ್ಸವಗಳಿಗಿಂತಲೂ ಹೆಚ್ಚು ಸಂವೇದನಾಶೀಲರಾಗಿದ್ದೇವೆ’ ಎಂಬುದು ಅವರ ವಾದ.
‘ಕನ್ನಡ ಮತ್ತು ಇಂಗ್ಲಿಷ್ ಪ್ರೇಕ್ಷಕರಿಬ್ಬರ ಮನಃಸ್ಥಿತಿಗಳು ಭಿನ್ನವಾಗಿರುತ್ತವೆ. ನಾವು ಆ ಎರಡೂ ಮನಃಸ್ಥಿತಿಗಳನ್ನು ಒಂದೆಡೆ ಸೇರಿಸಿ ಅನುಸಂಧಾನ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎನ್ನುವ ಅವರು, ‘ತಮ್ಮ ಈ ನಿಲುವು ತಪ್ಪು ಎಂದಾದಲ್ಲಿ ಚರ್ಚೆಗೆ ಯಾವಾಗಲೂ ಸಿದ್ಧ. ಬೇಕಾದರೆ ಯಾರಾದರೂ ಕನ್ನಡದ್ದೇ ಒಂದು ಸಾಹಿತ್ಯ ಉತ್ಸವವನ್ನು ಆಯೋಜಿಸಲಿ’ ಎಂದೂ ಸಲಹೆ ನೀಡುತ್ತಾರೆ.
ಈ ವರ್ಷದ ಉತ್ಸವದಲ್ಲಿ 110 ಸಂಪನ್ಮೂಲ ವ್ಯಕ್ತಿಗಳು ಭಾಗಿಯಾಗಲಿದ್ದಾರೆ. ಇವರಲ್ಲಿ 55 ಜನರು ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ಬೇರೆ ಬೇರೆ ಕಡೆಗಳ ಸಾಹಿತಿಗಳು ಬರುತ್ತಿದ್ದಾರೆ. ಹಲವು ಅನಿವಾಸಿ ಭಾರತೀಯರೂ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಬೆಳಿಗ್ಗೆ 9.30ರಿಂದ ರಾತ್ರಿ 8.30ರವರೆಗೆ ಚಟುವಟಿಕೆಗಳು ನಡೆಯಲಿವೆ.
ಎರಡು ದಿನಗಳ ಈ ಉತ್ಸವಕ್ಕೆ ಸುಮಾರು 65 ಲಕ್ಷ ರೂಪಾಯಿ ಹಣ ವ್ಯಯಿಸಲಾಗುತ್ತಿದೆ. ಯಾವುದೇ ಕಾರ್ಪೊರೇಟ್ ಕಂಪೆನಿಗಳಿಂದ ಹಣ ಪಡೆದುಕೊಳ್ಳದೆ, ಜನರಿಂದಲೇ ಹಣ ಸಂಗ್ರಹಿಸಿರುವುದು ವಿಶೇಷ. 40ರಿಂದ 45 ಬೆಂಗಳೂರಿಗರು ಈ ಉತ್ಸವದ ವೆಚ್ಚವನ್ನು ಭರಿಸುತ್ತಿದ್ದಾರೆ. ಹಾಗೆಯೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದಲೂ ಧನಸಹಾಯ ದೊರೆಯುತ್ತಿದೆ.
ಈ ಉತ್ಸವಕ್ಕೆ ಪ್ರವೇಶ ಉಚಿತ. bangaloreliteraturefestival.org ಜಾಲತಾಣದಲ್ಲಿ ಹೆಸರು ನೋಂದಾಯಿಸಿಕೊಂಡರೆ ಕಾರ್ಯಕ್ರಮಗಳ ವೇಳಾಪಟ್ಟಿ ಪಡೆಯಬಹುದು.
ಭಿನ್ನ ಜನ ಸೇರುವ ಹಬ್ಬ
ಎಲ್ಲ ಸಾಹಿತ್ಯ ಉತ್ಸವಗಳಿಗೂ ಅವುಗಳದ್ದೇ ಆದ ಲಕ್ಷಣ ಇರುತ್ತದೆ. ಅಲ್ಲಿ ನಡೆಯುವ ಕೆಲವು ಗೋಷ್ಠಿಗಳು ಚೆನ್ನಾಗಿರುತ್ತವೆ. ಕೆಲವು ಚೆನ್ನಾಗಿರುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಹಲವು ಹಿನ್ನೆಲೆಯ ಸಾಹಿತ್ಯಾಸಕ್ತರು, ಲೇಖಕರು ಒಂದೆಡೆ ಸೇರುವುದಕ್ಕೆ, ಪುಸ್ತಕಗಳನ್ನು ತೆಗೆದುಕೊಳ್ಳುವುದಕ್ಕೆ, ಹರಟೆ ಹೊಡೆಯುವುದಕ್ಕೆ ಈ ಉತ್ಸವಗಳು ಒಳ್ಳೆಯ ನೆಪ. ಅದು ನಾವು ಪರಸ್ಪರ ಜೊತೆಗಿದ್ದೇವೆ ಅನ್ನೋ ಭಾವನೆ ಕೊಡುತ್ತದೆ. ನಾವು ಮಾಡುತ್ತಿರುವ ಕೆಲಸ ಮಹತ್ವದ್ದು ಎನ್ನುವ ನಂಬಿಕೆ ಹುಟ್ಟಿಸುವ ವಾತಾವರಣ ಇರುವುದು ಯಾವಾಗಲೂ ಒಳ್ಳೆಯದು.
‘ಬೆಂಗಳೂರು ಸಾಹಿತ್ಯ ಉತ್ಸವ’ ಒಂದೇ ಅಲ್ಲ – ‘ಧಾರವಾಡ ಸಾಹಿತ್ಯ ಸಂಭ್ರಮ’, ‘ಕನ್ನಡ ಸಾಹಿತ್ಯ ಸಮ್ಮೇಳನ’, ಎಲ್ಲ ಉತ್ಸವಗಳಿಗೂ ಈ ಗುಣ ಇದೆ.