ಬೆಂಗಳೂರು: ‘ಎಲ್ಲ ಮಹಾಕಾವ್ಯಗಳ ಸಂವೇದನೆ ಸ್ತ್ರೀ ಸ್ವರೂಪದ್ದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಲೇಖಕಿಯರ ಸಂಘ (ಕಲೇಸಂ) ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಸಂಘದ ಅಧ್ಯಕ್ಷರ ಸಾಕ್ಷ್ಯಚಿತ್ರ ಲೋಕಾರ್ಪಣೆ ಮತ್ತು ಸಂಘದ ಮಾಜಿ ಅಧ್ಯಕ್ಷೆ ನಾಗಮಣಿ ಎಸ್. ರಾವ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸೂಕ್ಷ್ಮವಾಗಿ ಗಮನಿಸಿದಾಗ ರಾಮಾಯಣ ಸೀತಾಯಣವಾಗಿ, ನಳಚರಿತೆ ದಮಯಂತಿ ಚರಿತೆಯಾಗಿ ಮತ್ತು ಯಶೋಧರ ಚರಿತೆ ಅಮೃತಮತಿಯ ಕಥಾನಕವಾಗಿ ಗೋಚರಿಸುತ್ತವೆ. ಕುವೆಂಪು ಅವರ ಕಾದಂಬರಿಗಳಲ್ಲೂ ಗಂಡಸರ ನೈತಿಕ ಅಧಃಪತನ ಹಾಗೂ ಸ್ತ್ರೀ ಪ್ರಧಾನ ಬರವಣಿಗೆ ಇದೆ’ ಎಂದು ಅವರು ಹೇಳಿದರು.
‘ಪುರುಷರು ತಾವು ಸ್ಥಾಪಿಸಿದ ಸಂಘ–ಸಂಸ್ಥೆಗಳಿಂದ ಜನಪ್ರಿಯತೆ, ಸಂಪತ್ತನ್ನು ಬಯಸುತ್ತಾರೆ. ಆದರೆ, ಮಹಿಳೆಯರು ಸಂಘ ಸ್ಥಾಪನೆಯ ಗುರಿ ತಲುಪಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಸ್ತ್ರೀ ಸಂಘಗಳಲ್ಲಿ ಸಮಾನತೆ ಕಾಣಬಹುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ,‘ನಾಗಮಣಿ ಎಸ್. ರಾವ್ ಆಕಾಶವಾಣಿಯ ಮಧುರವಾಣಿ ಆಗಿದ್ದರು. ಕಂಠ ಮತ್ತು ವ್ಯಕ್ತಿತ್ವದಿಂದಾಗಿ ಅವರ ವಾರ್ತಾ ವಾಚನ ಕ್ರಮ ವಿಶಿಷ್ಟವಾಗಿತ್ತು.
‘ತಾಯಿನಾಡು’ ಪತ್ರಿಕೆಯಲ್ಲಿನ ಅವರ ಬರಹಗಳು ಸಾಂಪ್ರದಾಯಿಕ ಸಾಹಿತ್ಯಕ್ಕಿಂತ ಭಿನ್ನವಾಗಿವೆ’ ಎಂದು ತಿಳಿಸಿದರು.