ಮಾಸಾಂತ್ಯದ ವೇಳೆಗೆ ಚತುರ್ಥ ಯೋಜನೆ
ನವದೆಹಲಿ, ಡಿ. 13– ಸರ್ಕಾರದ ಪರಿಶೀಲನೆಗಾಗಿ, ನಾಲ್ಕನೆ ಯೋಜನೆಯ ಅಂತಿಮ ಕರಡನ್ನು ಡಿಸೆಂಬರ್ ಅಂತ್ಯದ ವೇಳೆಗೆ ಸಿದ್ಧಪಡಿಸಲಾಗುವುದೆಂದು ಯೋಜನಾ ಮಂಡಳಿಯು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ತಿಳಿಸಿರುವುದಾಗಿ ವರದಿಯಾಗಿದೆ.
**
ಪುರಿ ಜಗದ್ಗುರುಗಳ ನಿಲುವು ಅಚಲ
ಪುರಿ, ಡಿ. 13– ಗೋಹತ್ಯೆಯ ಪೂರ್ಣ ನಿಷೇಧದ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪುವ ತನಕ ಉಪವಾಸ ಮುಂದುವರಿ ಸುವ ತಮ್ಮ ನಿರ್ಧಾರದ ಬದಲಾವಣೆ ಇಲ್ಲವೆಂದು ಉಪವಾಸದ 24ನೇ ದಿನವಾದ ಇಂದು ಪುರಿ ಜಗದ್ಗುರುಗಳು ಮತ್ತೊಮ್ಮೆ ಖಚಿತಪಡಿಸಿದರು.
**
ವಿಶ್ವ ಕಮ್ಯುನಿಸ್್ಟ ಸಮ್ಮೇಳನಕ್ಕೆ ರಷ್ಯದ ಕರೆ
ಮಾಸ್ಕೊ, ಡಿ. 13– ರಷ್ಯದ ಕಮ್ಯುನಿಸ್್ಟ ಪಕ್ಷದ ಅಧಿಕಾರಾರೂಢ ಕೇಂದ್ರ ಸಮಿತಿಯು ವಿಶ್ವ ಕಮ್ಯುನಿಸ್್ಟ ಸಮ್ಮೇಳನವು ನಡೆಯಬೇಕೆಂದು ಇಂದು ಕರೆ ಕೊಟ್ಟಿದೆಯಲ್ಲದೆ ಚೀನದ ನೀತಿಯು ಈಗ ‘ಹೊಸ ಅಪಾಯಕಾರಿ ಘಟ್ಟ’ವನ್ನು ಪ್ರವೇಶಿಸಿದೆ ಎಂದು ತಿಳಿಸಿದೆ.
**
ಕವಿ ಬೇಂದ್ರೆ ಅವರಿಗೆ ಮೈಸೂರು ವಾರ್ಸಿಟಿಯ ಗೌರವ ಪ್ರಶಸ್ತಿ
ಮೈಸೂರು, ಡಿ. 13– ಡಿಸೆಂಬರ್ 15 ರಂದು ಇಲ್ಲಿ ನಡೆಯಲಿರುವ ಮೈಸೂರು ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಸುಪ್ರಸಿದ್ಧ ಕನ್ನಡ ಕವಿ ಶ್ರೀ ದ.ರಾ. ಬೇಂದ್ರೆ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ ಗೌರವ ಪ್ರಶಸ್ತಿಯನ್ನು ನೀಡಲಾಗುವುದು.
**
ಹುಯ್ಯೋ... ಹುಯ್ಯೋ ಮಳೆರಾಯ
ಜೈಪುರ, ಡಿ. 13– ರಾಜಸ್ತಾನದ ಬಾರ್ಮೆರ್ ಜಿಲ್ಲೆಯ ಹಳ್ಳಿಯೊಂದರ ಹೆಸರು ‘ಭೂಕಾ’.
ಈ ಗ್ರಾಮಕ್ಕೂ ಮಳೆಗೂ ಬಲು ದೂರ. ಅಲ್ಲಿ ಬಿದ್ದಿರುವ ಮಳೆಯ ಇತಿಹಾಸ ಬಲು ಸ್ವಾರಸ್ಯಕರ. ಪ್ರಸ್ತುತ ವರ್ಷ ಭೂಕಾದಲ್ಲಿ ಒಂದು ಹನಿ ಮಳೆಯಾಗಲಿಲ್ಲ. ಅದೇ ಪಕ್ಕದ ಕಲುದಿ ಗ್ರಾಮದಲ್ಲಿ ಬೆಳೆ ತೆಗೆಯುವಷ್ಟು ಮಾತ್ರ ಬಿತ್ತು. ಭೂಕಾದಲ್ಲಿ ಮಳೆಯಾಗದಿರುವುದು ಇದು ಐದನೆ ವರ್ಷ.
ಅದಕ್ಕೆ ಅಲ್ಲಿನ ಜನ ಅನ್ನುತ್ತಾರೆ: ನಮ್ಮೂರ ಹೆಸರೂ ‘ಭೂಕಾ’ (ಹಸಿವು) ಇಲ್ಲಿ ಮಳೆಗೂ ‘ಭೂಕಾ’.