ಕೆಲ ವರ್ಷಗಳ ಹಿಂದೆ ಟಿ.ವಿ.ಯಲ್ಲಿ ‘ಮಹಾಭಾರತ್’ ಧಾರಾವಾಹಿ ಪ್ರಸಾರವಾಗುತ್ತಿತ್ತು. ಅದರ ಭಾಗವಾಗಿ, ಕೌರವನ ಆಸ್ಥಾನದಲ್ಲಿ ದುಶ್ಯಾಸನ (ವಿನೋದ್ ಕಪೂರ್) ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ (ಆಗ ಬಹಳ ಜನರ ಮನೆಯಲ್ಲಿ ಟಿ.ವಿ. ಇರದಿದ್ದ ಕಾರಣ) ನೂರಾರು ಜನರು ರಸ್ತೆಯಂಚಿನಲ್ಲಿ ನಿಂತು, ಅಂಗಡಿಯಲ್ಲಿ ಹಾಕಿದ್ದ ಟಿ.ವಿ.ಯಲ್ಲಿ ಆ ದೃಶ್ಯವನ್ನು ನೋಡುತ್ತಿದ್ದರು. ದುಶ್ಯಾಸನ ಸೀರೆ ಸೆಳೆದು ಸೆಳೆದು ಕೈಸೋತು ಉಸ್ಸಪ್ಪಾ ಎಂದು ಕೆಳಗೆ ಕುಳಿತರೂ ಅವಳ ಐವರು ಗಂಡಂದಿರು ತಲೆತಗ್ಗಿಸಿ ಕುಳಿತಿದ್ದರು.
ದ್ರೌಪದಿಯ ಹಿಂದೆ ಕೃಷ್ಣನಿದ್ದುದರಿಂದ ಸೀರೆ ಸೆಳೆದಾದ ದೃಶ್ಯವನ್ನು ನೋಡಲಿಕ್ಕೆ ನಮಗೆ ಸಾಧ್ಯವಾಗಲಿಲ್ಲ. ಆಗ ಅಂಥ ದೃಶ್ಯದ ‘ಭಾಗ್ಯ’ ಕರುಣಿಸದವರು ನಿರ್ಮಾಪಕ ಬಿ.ಆರ್.ಚೋಪ್ರಾ ಮತ್ತು ನಿರ್ದೇಶಕರಾಗಿದ್ದ ಅವರ ಪುತ್ರ ರವಿ ಚೋಪ್ರಾ. ಅದೇ ಈಗ ‘ಮೇಟಿ ರಾಸಲೀಲೆ’ ಪ್ರಕರಣದಲ್ಲಿ ಟಿ.ವಿ.ಯಲ್ಲಿ ಆ ಅಸಹಾಯಕ ಹೆಣ್ಣಿನ ಹಿಂದೆ ಯಾವ ಕೃಷ್ಣನೂ ಇಲ್ಲದಿದ್ದುದರಿಂದ, ರಾಜ್ಯದ ಕೋಟ್ಯಂತರ ಜನರು ಆ ಕೆಟ್ಟ ದೃಶ್ಯವನ್ನು ವೀಕ್ಷಿಸುವಂತಾಯಿತು.
ನಮ್ಮ ಸಮಾಜದ ನೈತಿಕತೆ ಎಷ್ಟರಮಟ್ಟಿಗೆ ಹಾಳಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಕರ್ನಾಟಕದ ಇತಿಹಾಸಕ್ಕೆ ಇದೊಂದು ಕಪ್ಪುಚುಕ್ಕೆ. ಈಗ ವೀಕ್ಷಕರಿಗೆ ಈ ‘ಭಾಗ್ಯ’ ಕರುಣಿಸಿದವರು ಯಾರು? ಯಾರೊಬ್ಬರ ಕಡೆಗೂ ಬೆಟ್ಟು ಮಾಡಿ ತೋರಿಸುವಂತಿಲ್ಲ. ಯಾಕೆಂದರೆ ಅದಕ್ಕೆ ಕಾರಣ, ಇಂಥ ದುಶ್ಯಾಸನರಿಗೆ ಅಧಿಕಾರ ಕೊಟ್ಟ ನಾವು ಮತ್ತು ನೀವು.
–ವಿರೂಪಾಕ್ಷಪ್ಪ ಕೋರಗಲ್, ಹಾವೇರಿ