ಕುಶಾಲನಗರ: ಕೇಂದ್ರ ಜಾರಿಗೊಳಿಸಲಿರುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿ ವರ್ತಕರಿಗೆ ಉಪಯುಕ್ತ ಎಂದು ಮೈಸೂರು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಗಿರಿಯಣ್ಣನವರ್ ಹೇಳಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ಹಾಗೂ ವಾಣಿಜ್ಯ ತರಿಗೆ ಇಲಾಖೆ ಮೈಸೂರು ಆಶ್ರಯದಲ್ಲಿ ಸೋಮವಾರ ಇಲ್ಲಿನ ಕನ್ನಿಕಾ ಸಭಾಂಗಣದಲ್ಲಿ ನಡೆದ ‘ಜಿಎಸ್ಟಿ ನೋಂದಣಿ ಮತ್ತು ವರ್ಗಾವಣೆ’ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವ್ಯಾಪಾರಸ್ಥರು ಕಡ್ಡಾಯವಾಗಿ ಸರಕು ಮತ್ತು ಸೇವಾ ತೆರಿಗೆ ಪಾಲಿಸುವುದರಿಂದ ಪಾರದರ್ಶಕ ವಹಿವಾಟು ಸಾಧ್ಯ ಎಂದರು ದೇಶಾದ್ಯಂತ ತರಿಗೆ ಪದ್ಧತಿ ಸರಳೀಕರಣಗೊಳಿಸಿ ಬಹುಹಂತದ ತೆರಿಗೆ ಪದ್ಧತಿ ಬದಲಾಗಿ ಒಂದೇ ಹಂತದಲ್ಲಿ ತೆರಿಗೆ ಪಾವತಿಸುವ ಏಕರೂಪ ತೆರಿಗೆ ಪದ್ಧತಿಯೇ ಜಿಎಸ್ಟಿ ಎಂದರು.
ವಿಶ್ವದ 150ಕ್ಕೂ ಹೆಚ್ಚು ದೇಶಗಳಲ್ಲಿ ಇಂಥ ಕ್ರಮ ಜಾರಿಯಲ್ಲಿದೆ. ಎಲ್ಲ ಪರೋಕ್ಷ ತೆರಿಗೆಗಳನ್ನು ಒಂದೇ ತೆರಿಗೆ ವ್ಯವಸ್ಥೆಯಡಿ ನೂತನ ತೆರಿಗೆ ಪದ್ಧತಿ ತರಲಿದೆ ಎಂದು ಹೇಳಿದರು.
ವಾಣಿಜ್ಯ ಇಲಾಖೆ ಉಪ ಆಯುಕ್ತ ಡಾ.ಬಿ.ಟಿ.ಬಾಣೇಗೌಡ, ಕೇಂದ್ರ ಮತ್ತು ಅಬಕಾರಿ ಸುಂಕ, ಸೇವಾ ತೆರಿಗೆ ಮತ್ತು ಕಸ್ಟಂ ತೆರಿಗೆ, ಮನೋರಂಜನಾ ತೆರಿಗೆ, ವಿಲಾಸಿ ಮತ್ತು ಲಾಟರಿ ತೆರಿಗೆಗಳನ್ನು ಆಯಾಯ ರಾಜ್ಯಗಳು ನಿಭಾಯಿಸುತ್ತಿವೆ. ಈ ಎಲ್ಲ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ಬರಲಿವೆ’ ಎಂದರು.
ಕುಶಾಲನಗರ ಸ್ಥಾನೀಯ ಸಮಿತಿ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಾಣಿಜ್ಯ ಇಲಾಖೆ ಜಾರಿ ನಿರ್ದೇಶನಾಲಯದ ಸಹಾಯಕ ಆಯುಕ್ತ ಕುಮಾರ್, ಕೊಡಗು ಜಿಲ್ಲಾ ಸಹಾಯಕ ಆಯುಕ್ತ ವಿಜಯ್ ಪ್ರಧಾನ್, ಗುಪ್ತದಳ ವಿಭಾಗದ ಸಹಾಯಕ ಆಯುಕತ ಸೋಮಶೇಖರ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಸ್ಥಾನೀಯ ಸಮಿತಿ ಉಪಾಧ್ಯಕ್ಷ ವಿ.ಪಿ.ನಾಗೇಶ್, ಕಾರ್ಯದರ್ಶಿ ಬಿ.ಅಮೃತ್ ರಾಜ್, ಸಹ ಕಾರ್ಯದರ್ಶಿ ಕೆ.ಎಸ್.ನಾಗೇಶ್ ಇದ್ದರು. 150ಕ್ಕೂ ಹೆಚ್ಚಿನ ವ್ಯಾಪಾರಿಗಳು ಪಾಲ್ಗೊಂಡಿದ್ದರು.