ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸ್ಪೃಶ್ಯತೆ ವಿರುದ್ಧ ಸರ್ಜಿಕಲ್‌ ದಾಳಿ ಅಗತ್ಯ’

Last Updated 9 ಜನವರಿ 2017, 8:19 IST
ಅಕ್ಷರ ಗಾತ್ರ
ಇಳಕಲ್: ಮಾಂಗಲ್ಯ ಕಟ್ಟುವುದಷ್ಟೇ ಮದುವೆ ಅಲ್ಲ. ಮನಸ್ಸು ಕಟ್ಟುವುದು ಮದುವೆ. ₹ 1.30 ಲಕ್ಷ ಮಾಂಗಲ್ಯದ ಮದುವೆಗಳು ಮನಸ್ಸು ಮುರಿದ ಕಾರಣ ಇವತ್ತು ಕೋರ್ಟನಲ್ಲಿವೆ. ಪ್ರೀತಿ, ಕರುಣೆ, ನಂಬಿಕೆಯ ತಳಹದಿಯ ಮೇಲೆ ವಧು ವರರು ಮನಸ್ಸು ಕಟ್ಟಿಕೊಳ್ಳಬೇಕು’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
 
ಭಾನುವಾರ ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಸೇವಾ ಸಮಿತಿಯು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಹಾಗೂ ಇಲ್ಲಿಯ ಅಂಬೇಡ್ಕರ್ ಭವನ ನಿರ್ಮಾಣದ ವಾರ್ಷಿಕೋತ್ಸವದ ಅಂಗವಾಗಿ ಬೌದ್ಧ ಸಂಪ್ರದಾಯದಂತೆ ಆಯೋಜಿಸಿದ್ದ 7 ಜೋಡಿ ಉಚಿತ ಸಾಮೂಹಿಕ ಮಂಗಲ ಪರಿಣಯ (ವಿವಾಹ ಮಹೋತ್ಸವ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 
50 ವಿಮಾನ ಖರೀದಿಸಿದವರ ವಿರುದ್ಧ, ಮಗಳ ಮದುವೆಗಾಗಿ ₹ 500 ಕೋಟಿ ಖರ್ಚು ಮಾಡಿ ಆಡಂಬರದ ಅಸಹ್ಯ ಪ್ರದರ್ಶನ ಮಾಡಿದವರ ವಿರುದ್ಧ, ದೇಶದ ಅರ್ಧದಷ್ಟು ಸಂಪತ್ತು ಹೊಂದಿದ ಬೆರಳೆಣಿಕೆಯಷ್ಟಿರುವ ಶ್ರೀಮಂತರ ವಿರುದ್ಧ ಯಾವುದೇ ದಾಳಿ ನಡೆಯುವುದಿಲ್ಲ. ಆದರೆ ದೇಶದ ಶೇ 80ರಷ್ಟು ಬಡವರನ್ನು ಬೀದಿಗೆ ತಳ್ಳಿ ತೊಂದರೆ ನೀಡಿದ ಬಗ್ಗೆ ನಮ್ಮ ಪ್ರಧಾನಿಗೆ ವಿಷಾದವಿಲ್ಲ. ಎಂದಿನಂತೆ ಮತ್ತೆ ಅಚ್ಛೇ ದಿನದ ಭರವಸೆ ನೀಡಿ ಮೋಸ ಮಾಡಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರದ ನೋಟು ಬದಲಾವಣೆ ಕ್ರಮವನ್ನು ಟೀಕಿಸಿದರು.
 
ಸಂಘಪಾಲ್ ಬಂತೇಜಿ, ವರಜ್ಯೋತಿ ಬಂತೇಜಿ, ಸಿದ್ದಣ್ಣ ಆಮದಿಹಾಳ, ಶರ ಣಪ್ಪ ಆಮದಿಹಾಳ, ಯಂಕನಗೌಡ ಹೂಲಗೇರಿ, ಬಾಬು ಕೋಡಿಹಾಳ, ಅಂಬೇಡ್ಕರ್‌ ಸೇವಾ ಸಮಿತಿಯ ಅಧ್ಯಕ್ಷೆ ಸಾವಿತ್ರಿ ಕೋಟೆಗಾರ ಶೋಭಾ ಆಮದಿಹಾಳ, ಮಂಜುನಾಥ ಇದ್ದರು.
 
***
‘ನೋಟ ಬದಲಾಗಲಿ’
‘ನೋಟ ಬದಲಾಗದ ಹೊರತು ನೋಟು ಬದಲಾವಣೆ ಮಾಡಿದರೆ ಏನು ಪ್ರಯೋಜನ ? ಸರ್ಜಿಕಲ್‌ ದಾಳಿ ನಡೆಯಬೇಕಿರುವುದು ನೋಟುಗಳ ಮೇಲಲ್ಲ. ಅಸಮಾನತೆ, ಅಸ್ಪೃಶ್ಯತೆ, ಬಡತನ ಹಾಗೂ ಮೌಢ್ಯಗಳ ವಿರುದ್ಧ ನಡೆಯಬೇಕು. 12 ನೇ ಶತಮಾನದಲ್ಲಿ ಜಾತಿ, ಅಸಮಾನತೆ ವಿರುದ್ಧ ಬಸವಣ್ಣ, 1932 ರಲ್ಲಿ ಅಂಬೇಡ್ಕರ್‌ ನಡೆಸಿದ ಸರ್ಜಿಕಲ್‌ ದಾಳಿಯ ಪರಿಣಾಮ ಇವತ್ತು ಮೋದಿ ಪ್ರಧಾನಿ ಆಗಿದ್ದಾರೆ. ಇದನ್ನು ಅರಿತುಕೊಂಡು ಮೋದಿ ಅವರು ಸಾಮಾಜಿಕ ಅನಿಷ್ಠಗಳ ವಿರುದ್ಧ ದಾಳಿ ಮಾಡುವ ದಿಟ್ಟತನ ತೋರಿಸಬೇಕು’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನಮಠದ ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹಿಸಿದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT