ವಿರಾಜಪೇಟೆ: ಜಿಲ್ಲೆಯಲ್ಲಿ ಪ್ರಾರಂಭಗೊಂಡಿರುವ ಕಾಫಿ ಕುಯ್ಲುವಿಗೆ ಕೆ.ಜಿಯೊಂದಕ್ಕೆ ₹ 2 ರಂತೆ, ಬೆಳೆ ಕಡಿಮೆಯಿದ್ದರೆ ₹ 2.50ನಂತೆ ಕಾರ್ಮಿಕರಿಗೆ ಕಾಫಿ ಬೆಳೆಗಾರರು ಕೂಲಿ ನಿಗದಿಪಡಿಸುವಂತೆ ವಿರಾಜಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ ಶನಿವಾರ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸಂಘದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಳೆಯಿಲ್ಲದ ಕಾರಣ ಕಾಫಿ ಬೆಳೆ ಕುಂಠಿತ ಗೊಂಡಿದೆ. ವಾಹನಗಳಲ್ಲಿ ತೋಟದ ಕೆಲಸಕ್ಕೆ ಬರುವ ದಿನಗೂಲಿ ಕಾರ್ಮಿಕರು ಮನಬಂದಂತೆ ಕೂಲಿ ಕೇಳುತ್ತಿದ್ದು, ಈ ಬಗ್ಗೆ ಜಿಲ್ಲೆಯಲ್ಲಿನ ತೋಟದ ಮಾಲೀಕರು ಎಚ್ಚರ ವಹಿಸಬೇಕು. ಬೆಳೆ ಅತಿ ಕಡಿಮೆ ಇದ್ದ ಸಂದರ್ಭದಲ್ಲಿ ಸರ್ಕಾರ ನಿಗದಿ ಪಡಿಸಿದ ₹ 264 ನೀಡಿ 8 ಗಂಟೆ ಕಾಲ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳುವುದು ಒಳಿತು. ಅಮ್ಮತ್ತಿ ಪಶುವೈದ್ಯ ಶಾಲೆಯಲ್ಲಿ ವೈದ್ಯರಿಲ್ಲದೆ, ಕೇವಲ ‘ಡಿ’ ಗ್ರೂಪ್ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ವೈದ್ಯರನ್ನು ನೇಮಿಸುವ ಮೂಲಕ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ವಿರಾಜಪೇಟೆ ಸರ್ವೆ ಕಚೇರಿಯಲ್ಲಿ ಎಡಿಎಲ್ಆರ್ ಹಾಗೂ ಮೇಲ್ವಿಚಾರಕರಿಲ್ಲದೆ ಸಮರ್ಪಕವಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಈ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಕಾನೂನು ಸಲಹೆಗಾರ ಬಿದ್ದಂಡ ಸುಬ್ಬಯ್ಯ ಮಾತನಾಡಿ ಬರಗಾಲದಿಂದ ಭತ್ತದ ಬೆಳೆ ಕುಂಠಿತಗೊಂಡಿರುವುದರೊಂದಿಗೆ, ಯಂತ್ರಗಳ ಮೊರೆಹೋದ ಕಾರಣ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆಯೂ ಕಡಿಮೆಯಾಗಿದೆ.
ಆದರೆ, ಸರ್ಕಾರ ಬರಗಾಲದ ನೆಪವೊಡ್ಡಿ ಹೊರ ರಾಜ್ಯಗಳಿಗೆ ಹುಲ್ಲು ಸಾಗಣೆಯನ್ನು ನಿರ್ಬಂಧಗೊಳಿಸಿದೆ. ಭತ್ತ ಕ್ವಿಂಟಲ್ಗೆ ಸರ್ಕಾರ ನಿಗದಿಪಡಿಸಿರುವ ₹ 1574 ತೀರ ಕಡಿಮೆಯಾಗಿದ್ದು ಇದನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಸಂಚಾಲಕ ಕೇಚಂಡ ಕುಶಾಲಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಯು.ಎಸ್. ಜಗತ್, ಖಜಾಂಜಿ ಪಿ.ಬಿ. ಅರುಣ್ ಉಪಸ್ಥಿತರಿದ್ದರು.