ಹಾರೂಗೇರಿ: ಬರುವ ಬನದ ಹುಣ್ಣಿಮೆಯಂದು ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜರುಗಲಿರುವ ರೇಣುಕಾದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹಾರೂಗೇರಿ ಪಟ್ಟಣದ ಯಲ್ಲಮ್ಮದೇವಿ ಭಕ್ತರು ಭಾನುವಾರ ಪಾದಯಾತ್ರೆ ಕೈಗೊಂಡರು.
ಪಾದಯಾತ್ರೆ ತೆರಳುವ ಭಕ್ತರು ಸಂಪ್ರದಾಯದಂತೆ ಮುಂಜಾನೆ ತಮ್ಮ ಎತ್ತಿನಗಾಡಿಗಳನ್ನು ಶೃಂಗರಿಸಿಕೊಂಡು, ಪಟ್ಟಣದಲ್ಲಿನ ರೇಣುಕಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಕಲ ವಾದ್ಯ ಮೇಳ ಹಾಗೂ ಅಪಾರ ಭಕ್ತರ ನಡುವೆ ದೇವಿಯ ಜಗವನ್ನು ಹೊತ್ತುಕೊಂಡು ಕುಣಿಯುತ್ತಾ ಭವ್ಯವಾದ ಮೆರವಣಿಗೆ ಮೂಲಕ ಊರ ಹೊರಗಿರುವ ಶ್ರೀ ಕರೇಸಿದ್ಧೇಶ್ವರ ದೇವಸ್ಥಾನದ ಬಳಿಯಿರುವ ಯಲ್ಲಮ್ಮದೇವಿ ದೇವಸ್ಥಾನಕ್ಕೆ ತರಲಾಯಿತು.
ನಂತರ ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಚನ್ನವೃಷಭೇಂದ್ರ ಲೀಲಾಮಠದ ಮಠದ ಮುಖ್ಯ ರಸ್ತೆಯುದ್ದಕ್ಕೂ ಮೆರವಣಿಗೆ ಕೈಗೊಂಡ ಭಕ್ತರು ದೇವಿಯ ಆರಾಧನೆ ಹಾಗೂ ಭಂಡಾರ ಎರಚುತ್ತ ಪಾದಯಾತ್ರೆ ಬೆಳೆಸಿದರು. ಹಿಡಕಲ್ ಗ್ರಾಮಕ್ಕೆ ತೆರಳಿ ಪಡ್ಡಲಗಿ ತುಂಬುವ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ಜರುಗಿತು.
ಯಲ್ಲಮ್ಮದೇವಿ ಪೂಜಾರಿ ಪರಶುರಾಮ ಪೂಜಾರಿ, ಶ್ರೀಕಾಂತ ಧರ್ಮಟ್ಟಿ, ಅರ್ಜುನ ತಳವಾರ, ಯಲ್ಲಪ್ಪ ಗಸ್ತಿ, ಅಣ್ಣಪ್ಪ ಅವಟೆ, ಶಂಕರ ನಾಯಿಕ, ಸುರೇಶ ಹಾರೂಗೇರಿ, ಡಾ.ಎಂ.ಎಂ. ಹಾರೂಗೇರಿ, ಸುರೇಶ ಆಸಂಗಿ, ಭಗವಂತ ಚೌಗಲಾ, ಅಶೋಕ ದರೂರ, ಅಶೋಕ ಸರಿಕರ, ಆದಿತ್ಯ ಕಾಂಬಳೆ, ಸಿದ್ದಪ್ಪ ದರೂರ, ಶಿಲ್ಪಾ ನಾಯಿಕ, ಮಾಯವ್ವ ಸರಿಕರ, ಶ್ರೀಕಾಂತ ದರೂರ, ಶ್ರೀಧರ ಪತ್ತಾರ, ಹಿರಾಬಾಯಿ ಹಳಬರ, ಗಂಗವ್ವ ಮಾದರ ಸೇರಿದಂತೆ ಸಮಸ್ತ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.