ಬೈಲಹೊಂಗಲ: ಪಟ್ಟಣದ ಪ್ರಸಿದ್ದ ಗುರು ಮಡಿವಾಳೇಶ್ವರ ದೇವಸ್ಥಾನದ ರಥೋತ್ಸವ ಭಕ್ತರ ಹರ್ಷೋದ್ಗಾರದ ಮಧ್ಯೆ ಸೋಮವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಗಜಪಡೆಗಳೊಂದಿಗೆ ಸಾಗಿದ ರಥೋತ್ಸವದಲ್ಲಿ ಭಕ್ತರ ಹರಹರ ಮಹಾದೇವ, ಗುರು ಮಡಿವಾಳೇಶ್ವರ ಮಹಾರಾಜಕೀ ಜಯ ಎಂದು ಘೋಷಣೆ ಮೊಳಗಿಸಿದರು. ಶ್ರದ್ಧೆ, ಭಕ್ತಿಯಿಂದ ರಥೋತ್ಸವ ಎಳೆದು ಪುನೀತರಾದರು. ರಥಕ್ಕೆ ಹೂವು, ಹಣ್ಣು, ಕಾರಿಕು ಸಮರ್ಪಿಸಿ ಕೈ ಮುಗಿದರು. ವಿವಿಧ ಹೂವು, ಮಾಲೆಗಳಿಂದ ಕಂಗೊಳಿಸಿದ ರಥೋತ್ಸವ ಪ್ರಮುಖ ಬಜಾರ ರಸ್ತೆಯ ಜವಳಿ ಕೂಟದಿಂದ ಮೇದಾರ ಗಲ್ಲಿ ಏರಿ ದೇವಸ್ಥಾನಕ್ಕೆ ಬಂದು ತಲುಪಿತು.
ನೋಡಲು ಸುಂದರವಾಗಿದ್ದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದ ಮೆರಗು ಹೆಚ್ಚಿಸಿದ ಗಜರಾಜರ ಪಡೆ ತಂಗೆಮ್ಮಾ ತಾಯಿ ಭಾವಚಿತ್ರ ಹೊತ್ತು ಸಾಗಿದವು. ಆನೆಗಳು ರಥೋತ್ಸವದೊಂದಿಗೆ ಸಾಗಿದ ದೃಶ್ಯ ಸೊಗಸಾಗಿತ್ತು. ವಿವಿಧ ಮಠಾಧೀಶರ ನೇತೃತ್ವದಲ್ಲಿ ಕುಂಭ ಹೊತ್ತ ಸುಮಂಗಲೆಯರು, ಭಕ್ತರು ಗುರು ಮಡಿವಾಳೇಶ್ವರನಿಗೆ ಹರ್ಷೋದ್ಘಾರ ಹೇಳಿದರು. ಶ್ರೀಮಠದ ಪೀಠಾಧಿಪತಿ ಮಡಿವಾಳ ಸ್ವಾಮೀಜಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಪ್ರವಚನಕಾರ ಶಿವಕುಮಾರ ಸ್ವಾಮೀಜಿ, ಪಿ.ಬಿ.ಕಡಕೋಳ, ಬಸವ ಪ್ರಭು ಬೆಳಗಾವಿ, ಮಲ್ಲಿಕಾರ್ಜುನ ಕಡಕೋಳ, ಮಹಾಂತೇಶ ಅಕ್ಕಿ, ಈಶ್ವರ ಕೊಪ್ಪದ, ರುದ್ರಪ್ಪ ತುರಮರಿ, ಸೋಮಯ್ಯ ಕಂಬಿಮಠ, ಬಿ.ವೈ. ತಳವಾರ, ರಾಮನಗೌಡ ಪಾಟೀಲ, ಉಳವೇಶ ಚಲವಾದಿ, ಬಸಪ್ಪ ಕೊಪ್ಪದ, ಈರಪ್ಪ ಹಲಕಿ, ಬಸವರಾಜ ಲಕ್ಕನ್ನವರ, ಶಿವನಗೌಡ ಪಾಟೀಲ, ಯಲ್ಲಪ್ಪ ಬೆಟಗೇರಿ, ಶಿವಾನಂದ ಅಗಸಗಿ, ರಾಜು ಕಡಕೋಳ, ಲೋಕೇಶ ಹಡಪದ, ಮಂಜುನಾಥ ಬೋರಕನವರ, ಮಹಾಂತೇಶ ಹನಸಿ, ಶಿವಾಜಿ ಪೂಜೇರಿ ಹಾಗೂ ಅನೇಕರು ಶ್ರೀಮಠಕ್ಕೆ ಸೇವೆ ಸಲ್ಲಿಸಿದರು. ಜಾತ್ರೆ ನಿಮಿತ್ತ ಪಲಕ್ಕಿ ಉತ್ಸವ, ರುದ್ರಾಭಿಷೇಕ, ಮಹಾಪ್ರಸಾದ, ಆನೆಗಳ ಮೆರವಣಿಗೆ, ಕುಂಭ ಮೇಳ ವಿಶೇಷವಾಗಿ ನಡೆದವು.
**
ಆನೆಗಳ ನೇತೃತ್ವದಲ್ಲಿ ನಡೆದ ರಥೋತ್ಸವ ನೋಡುಗರ ಕಣ್ಮನ ಸೆಳೆಯಿತು. ಭಕ್ತಿ, ಶ್ರದ್ಧೆಯಿಂದ ಸಲ್ಲಿಸಿದ ನಿಸ್ವಾರ್ಥ ಪೂಜೆಗೆ ಗುರುವಿನ ಆಶೀರ್ವಾದ ಸಿಗುವುದು ನಿಶ್ಚಿತ.
-ಶಿವಶಂಕರ ಪಾಟೀಲ
ಭಕ್ತ