ಜನವಾಡ: ಜ್ಞಾನ ಕಾರಂಜಿ ಚಾರಿಟಬಲ್ ಟ್ರಸ್ಟ್ ಸಂಚಾಲಿತ ನೈಟಿಂಗೇಲ್ ಪಬ್ಲಿಕ್ ಶಾಲೆಯು ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದ ಬಸವ ಮಂಟಪದಲ್ಲಿ ಈಚೆಗೆ ಏರ್ಪಡಿಸಿದ್ದ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು.
ಮಕ್ಕಳು ಸ್ವತಃ ಸಿದ್ಧಪಡಿಸಿದ ಹಲವು ಬಗೆಯ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಸ್ಮಾರ್ಟ್ ಸಿಟಿ, ಸೌರಶಕ್ತಿ, ಸ್ವಚ್ಛ ಗ್ರಾಮ, ಹೊಗೆ ರಹಿತ ಒಲೆ, ಜಿಲ್ಲೆಯಲ್ಲಿ ಬೆಳೆಯುವ ವಿವಿಧ ತರಕಾರಿಗಳು, ಧಾನ್ಯಗಳು, ಹಳೆಯ ಮತ್ತು ಹೊಸ ನಾಣ್ಯಗಳು, ಆದಿ ಮಾನವನ ಜೀವನ ಶೈಲಿ, ಕೃಷಿಯಲ್ಲಿ ಬಳಸುವ ಉಪಕರಣ, ಐತಿಹಾಸಿಕ ಬೀದರ್ ಕೋಟೆ, ಚೌಬಾರಾ, ಮಹಮ್ಮದ್ ಗವಾನ್ ಮದರಸಾ, ಅನುಭವ ಮಂಟಪ, ಮಣ್ಣಿನಿಂದ ನಿರ್ಮಿಸಿದ ಯೋಗಾಸನ ಭಂಗಿಗಳು, ರಾಜಕಾರಣಿಗಳ ಪೋಷಾಕು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಚಿತ್ರಗಳು ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳ ಬಗೆಗೆ ಅರಿತುಕೊಳ್ಳಲು ನೆರವಾದವು.
ವಸ್ತು ಪ್ರದರ್ಶನಗಳಿಂದ ಮಕ್ಕಳಲ್ಲಿನ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ಉದ್ಘಾಟನೆ ಮಾಡಿದ ಪ್ರಮುಖರಾದ ವೈಜಿನಾಥ ಮಹಾರಾಜ್ ತಿಳಿಸಿದರು.
ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ವೇದಿಕೆ ಕಲ್ಪಿಸುತ್ತವೆ ಎಂದು ಬಸವ ಮಂಟಪ ಅಧ್ಯಕ್ಷ ವೈಜಿನಾಥ ಬುಯ್ಯಾ ಹೇಳಿದರು.
ಪಾಲಕರು ಮಕ್ಕಳಿಗಾಗಿ ಆಸ್ತಿ ಸಂಪಾದಿಸಬಾರದು. ಬದಲಾಗಿ, ಒಳ್ಳೆಯ ಶಿಕ್ಷಣ ನೀಡಿ ಬದುಕು ರೂಪಿಸಿಕೊಳ್ಳುವಂತೆ ಅವರನ್ನೇ ಸಶಕ್ತಗೊಳಿಸಬೇಕು ಎಂದು ಪ್ರಮುಖರಾದ ಶಿವರಾಜ ಬಿರಾದಾರ ನುಡಿದರು.
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದೇ ಸಂಸ್ಥೆಯ ಧ್ಯೇಯವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜ್ಞಾನ ಕಾರಂಜಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಸವರಾಜ ಭರಶೆಟ್ಟಿ ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಿ ಕಾಂಬಳೆ, ಸದಸ್ಯೆ ಶಾಂತಮ್ಮ, ಎವರ್ಗ್ರೀನ್ ಶಾಲೆ ಅಧ್ಯಕ್ಷ ರಮೇಶ ಬುಯ್ಯಾ, ಪ್ರಮುಖರಾದ ರಾಜಶೇಖರ ಓಂಕಾರ, ಶಂಕರೆಪ್ಪ ಪಾರಾ, ಅಹಮ್ಮದ್ ಮಿಯಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಶಿರೇಖಾ ನಿರೂಪಿಸಿದರು. ಶಿಕ್ಷಕಿ ಮಾಲಾಶ್ರೀ ಸ್ವಾಗತಿಸಿದರು. ಶಿಕ್ಷಕಿ ಸುಧಾರಾಣಿ ವಂದಿಸಿದರು.