ಮುಧೋಳ: ಸಕಲ 84 ಲಕ್ಷ ಜೀವರಾಶಿಗಳು ಸಂತೋಷವಾಗಿದ್ದರೆ ವಿಶ್ವಕ್ಕೆ ನಿಜ ವಾದ ಸುಖ ಶಾಂತಿ ಸಮೃದ್ಧಿ ನೆಮ್ಮದ್ಧಿ ದೊರೆವುದು. ಅದಕ್ಕಾಗಿ ಗೋ ಸಂರಕ್ಷಣೆ ಒಂದೇ ಪರಿಹಾರ ಎಂದು ಮಹಾಮಂಡಲೇಶ್ವರ ರವಿಶರಣಾನಂದಗಿರಿ ಮಹಾ ರಾಜರು ಹೇಳಿದರು.
ಅವರು ವೈಕುಂಠ ಏಕಾದಶಿ ಪ್ರಯುಕ್ತ ತಾಲ್ಲೂಕಿನ ಮಾಲಾಪುರ ಗ್ರಾಮ ವ್ಯಾಪ್ತಿಯ ಗೋಪಾಲ ಕೃಷ್ಣ ಗೋ ಶಾಲೆಯಲ್ಲಿ ಏರ್ಪಡಿಸಿದ್ದ ವಿಶೇಷ ಗೋ ಪೂಜಾ ಸಮಾರಂಭದಲ್ಲಿ ಮಾತನಾಡಿ, ದಾನದಲ್ಲೆ ಗೋದಾನ ಶ್ರೇಷ್ಠವಾಗಿದ್ದು ಅದರ ಶರಿರದಲ್ಲಿ 33 ಕೋಟಿ ದೇವತೆಗಳು ವಾಸವಾಗಿರುವುದರಿಂದ ಸನಾತನ ಹಿಂದೂ ಧರ್ಮದಲ್ಲಿ ಗೋಪೂಜೆಗೆ ವಿಶೇಷ ಸ್ಥಾನಮಾನವಿದೆ ಒಂದು ದೇಶಿ ಆಕಳನ್ನು ಸಾಕುವುದರಿಂದ ನಿಮಗೆ ಆರ್ಥಿಕವಾಗಿ ಲಾಭವಾಗಿ ಅತ್ಯುತ್ತಮ ಆರೋಗ್ಯ ಕೂಡಾ ಪಡೆಯಬಹುದು ಎಂದು ಶ್ರೀಗಳು ತಿಳಿಸಿದರು.
ಗೋ ಶಾಲೆಯ ಕಾರ್ಯದರ್ಶಿ ಜಾಲಮಸಿಂಗ್ ಪರದೇಶಿ ಮಾತನಾಡಿ, ಸುಮಾರು 150ಕ್ಕೂ ಹೆಚ್ಚು ವಿವಿಧ ತಳಿಯ ಗೋವುಗಳನ್ನು ಇಲ್ಲಿ ಸಾಕಲಾಗಿದೆ. ಬಿಡಾಡಿ ಹಾಗೂ ರೋಗಗ್ರಸ್ತ ಆಕಳಗಳನ್ನು ಸ್ವೀಕರಿಸಿ ಅವುಗಳ ಪಾಲನೆ ಪೊಷಣೆ ಕಾರ್ಯ ಇಲ್ಲಿ ನಿರಂತರ ನಡೆದಿದೆ ಎಂದರು.
ಗೋಶಾಲೆಯಲ್ಲಿ ಪಂಚಗವ್ಯ ಚಿಕಿತ್ಸೆ ಸೇರಿದಂತೆ ಎಲ್ಲ ಉಪಯುಕ್ತ ಔಷಧಿ ದೊರೆಯುತ್ತವೆ ಯಾವುದೇ ಅಡ್ಡ ಪರಿಣಾಮವಿಲ್ಲದೆ. ಈ ಪಂಚಗವ್ಯ ಹಾಗೂ ತುಪ್ಪ ಗೋಮೂತ್ರ, ಗೋಮಯದಿಂದ ನಿರ್ಮಿಸಿದ ಆಯುರ್ವೇದ ಔಷಧಿ ಸೇವನೆಯಿಂದ ಮನುಷ್ಯನ ಆರೋಗ್ಯ ಸುಧಾರಿಸಿವುದು ಎಂದು ವಿವರಿಸಿದರು.
ವೈಕುಂಠ ಎಕಾದಶಿ ಪ್ರಯುಕ್ತ ಕುಲಕರ್ಣಿ ಪರಿವಾರದಿಂದ ಗೋವುಗಳಿಗೆ ಧವಸ–ಧಾನ್ಯ–ಹಣ್ಣು ವಿತರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋನಾಪಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು ವಿಭಾ ಕುಲಕರ್ಣಿ, ಸಾವಿತ್ರಿ ದೇಶಪಾಂಡೆ, ಅಂಜಲಿ ಕುಲಕರ್ಣಿ, ಭಾಗ್ಯಶ್ರೀ ದೇಸಾಯಿ, ಪ್ರಭು ದೇಶಪಾಂಡೆ, ಸಂಜೀವ್ ಬಾಜಿ, ರಮೇಶ ದೇಶಪಾಂಡೆ ವಿಠ್ಠಲ ಕಾಖಂಡಕಿ, ಪ್ರವೀಣ ದೇಶಪಾಂಡೆ ಇದ್ದರು. ನರಪತಸಿಂಗ ಹಾಗೂ ರವಿಶರಣಾನಂದರನ್ನು ಸನ್ಮಾನಿಸಲಾಯಿತು.