ನವದೆಹಲಿ: ನೋಟು ರದ್ದು ಕ್ರಮದಿಂದ ಕಪ್ಪುಹಣವನ್ನು ಸಂಪೂರ್ಣವಾಗಿ ನಿಗ್ರಹಿಸಲು ಸಾಧ್ಯವಾಗಿಲ್ಲ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಹೇಳಿದೆ. ಈ ಕ್ರಮದಿಂದ ನಗದು ರೂಪದಲ್ಲಿದ್ದ ಸಣ್ಣ ಪ್ರಮಾಣದ ಕಪ್ಪುಹಣಕ್ಕೆ ಕಡಿವಾಣ ಬಿದ್ದಿದೆಯೇ ಹೊರತು ದೊಡ್ಡ ಮೊತ್ತದ ಹಣಕ್ಕೆ ಏನೂ ತೊಂದರೆಯಾಗಿಲ್ಲ.
ಅಮಾನ್ಯಗೊಂಡ ₹500 ಮತ್ತು ₹1,000 ಮುಖಬೆಲೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆಯೇ ಹೊರತು ಆಸ್ತಿ, ಚಿನ್ನ, ರಿಯಲ್ ಎಸ್ಟೇಟ್ನಲ್ಲಿ ಹೂಡಲಾದ ದೊಡ್ಡ ಮೊತ್ತದ ಕಪ್ಪುಹಣಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ‘ಅಸೋಚಾಂ’ ನಡೆಸಿದ ವಸ್ತುಸ್ಥಿತಿ ಅಧ್ಯಯನ ವರದಿ ಹೇಳಿದೆ.
ನೋಟು ಅಮಾನ್ಯ ಮಾಡಿದ ಮಾತ್ರಕ್ಕೆ ಮುಂದಿನ ದಿನಗಳಲ್ಲಿ ಕಪ್ಪುಹಣ ಚಲಾವಣೆ ಸಂಪೂರ್ಣವಾಗಿ ನಿಲ್ಲುವುದಿಲ್ಲ. ಅದಕ್ಕೆ ಕೆಲವು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯ ಇದೆ.
ಆಸ್ತಿ ಮತ್ತು ಭೂ ವಹಿವಾಟು ಮೇಲಿನ ಮುದ್ರಾಂಕ ಶುಲ್ಕ ಕಡಿಮೆ ಮಾಡಬೇಕು. ರಿಯಲ್ ಎಸ್ಟೇಟ್ನಲ್ಲಿ ಇ– ನೋಂದಣಿ ವ್ಯವಸ್ಥೆ ಜಾರಿಗೆ ತರಬೇಕು. ಅಂದಾಗ ಮಾತ್ರ ಕಪ್ಪುಹಣ ಚಲಾವಣೆಗೆ ಮೂಗುದಾರ ತೊಡಿಸಲು ಸಾಧ್ಯ ಎಂದು ‘ಅಸೋಚಾಂ’ ಸಲಹೆ ನೀಡಿದೆ.