ಬೆಂಗಳೂರು: ಯಲಹಂಕ ಬಳಿಯ ಕಾಫಿ ಡೇ ರಸ್ತೆಯಲ್ಲಿ ಬೈಕ್ ಗುದ್ದಿದ್ದರಿಂದ ಗಾಯಗೊಂಡಿದ್ದ ಕಾನ್ಸ್ಟೆಬಲ್ ರಮೇಶ್ (35) ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದರು.
ಸ್ಥಳೀಯ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಜ.14ರಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುತ್ತಿದ್ದ ರಾಜ್ಯಪಾಲರ ವಾಹನಕ್ಕೆ ದಾರಿ ಮಾಡಿಕೊಡುವ ಕೆಲಸಕ್ಕೆ ನಿಯೋಜಿಸಲಾಗಿತ್ತು.
ರಾಜ್ಯಪಾಲರ ವಾಹನವು 10 ಕಿ.ಮೀ ದೂರದಲ್ಲಿರುವಾಗ ರಸ್ತೆಯ ಬದಿಯಲ್ಲಿ ನಿಂತಿದ್ದ ರಮೇಶ್ ಅವರಿಗೆ ಬೈಕ್ವೊಂದು ಗುದ್ದಿತ್ತು. ತಲೆ ಹಾಗೂ ಎದೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಕೊರಟಗೆರೆ ಮೂಲದ ರಮೇಶ್, 2005ರಲ್ಲಿ ಸೇವೆಗೆ ಸೇರಿದ್ದರು. ಜ. 16ರಂದು ಹೊರಡಿಸಿದ್ದ ಆದೇಶದನ್ವಯ ಅವರಿಗೆ ಹೆಡ್ ಕಾನ್ಸ್ಟೆಬಲ್ ಆಗಿ ಬಡ್ತಿ ಸಹ ಸಿಕ್ಕಿತ್ತು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಕುಟುಂಬಕ್ಕೆ ಸಿಗಬೇಕಾದ ಸೌಲಭ್ಯ ಕೊಡಿಸಲು ಪ್ರಯತ್ನಿಸುತ್ತೇವೆ’ ಎಂದು ಯಲಹಂಕ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದರು.
ಘಟನೆಯಲ್ಲಿ ಬೈಕ್ ಸವಾರ ರಾಜು ಸಹ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.